ಅರಾವಳಿ ಬೆಟ್ಟಗಳಲ್ಲಿ ಗಣಿಗಾರಿಕೆ ಮಾಡುವ ವಿಚಾರ ಈಗಾಗಲೇ ಪರಿಸರವಾದಿಗಳ ಕೋಪಕ್ಕೆ ಗುರಿಯಾಗಿದೆ. ಬಹಳ ಮುಖ್ಯವಾಗಿ ಅರಾವಳಿ ಬೆಟ್ಟಗಳು ಇರುವ ರಾಜಸ್ಥಾನ, ಗುಜರಾತ್, ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲಿ ಚರ್ಚೆಯ ಪ್ರಮುಖ ಕೇಂದ್ರ ಬಿಂದುವಾಗಿದೆ. ಸುಮಾರು 692 ಕಿ.ಮೀ ಉದ್ದದ ಪರ್ವತ ಶ್ರೇಣಿಯಲ್ಲಿ 100 ಮೀಟರ್ ಗಿಂತ ಕಡಿಮೆ ಇರುವ ಲಕ್ಷಾಂತರ ಬೆಟ್ಟಗಳು, ಅಂದರೆ ಶೇಕಡಾ 90ಕ್ಕಿಂತ ಹೆಚ್ಚು ಬೆಟ್ಟಗಳಲ್ಲಿ ಗಣಿಗಾರಿಕೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಗುರಿಯಾಗಿಸುವ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟಿನ ತೀರ್ಪಿನ ವಿರುದ್ಧ ರಾಜಸ್ಥಾನದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ.
ರಾಜಸ್ಥಾನದಲ್ಲಿ 550 ಕಿಮೀ ಪರ್ವತ ಶ್ರೇಣಿ ಇರುವುದರಿಂದ, ಕೇಂದ್ರ ನೇತೃತ್ವದ ಸಮಿತಿಯು ಶಿಫಾರಸು ಮಾಡಿದ ಹೊಸ ಗಣಿಗಾರಿಕೆಯನ್ನು ಸ್ಥಾಪಿಸುವ ಸಲುವಾಗಿ ಸುಪ್ರೀಂ ಕೋರ್ಟ್ ನವೆಂಬರ್ 20 ರಂದು ತೆಗೆದುಕೊಂಡ ನಿರ್ಧಾರವು ರಾಜ್ಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಸಾಮಾಜಿಕ ಕಾರ್ಯಕರ್ತರು, ಪರಿಸರವಾದಿಗಳು, ಸಮಾಜಿಕ ಸಂಘಟನೆಗಳು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ : ಗಣಿಗಾರಿಕೆಗೆ ಅನುಮತಿಸಿದ ಸುಪ್ರೀಂ; ʼಅರಾವಳಿ ಬೆಟ್ಟಗಳನ್ನು ಉಳಿಸಿʼ ಹೋರಾಟ ಚುರುಕು
ಸೋಮವಾರ, ಜೋಧ್ಪುರ, ಉದಯಪುರ ಮತ್ತು ಸಿಕಾರ್ ಸೇರಿದಂತೆ ಹಲವಾರು ನಗರಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಇದು ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು. ಸಿಕಾರ್ನ ಜೋಧ್ಪುರದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿ ಹಲವಾರು ಜನರನ್ನು ಬಂಧಿಸಿದಾಗ, ಪ್ರತಿಭಟನಾಕಾರರು ಆಂದೋಲನ ನಡೆಸಲು ಅರಾವಳಿ ಪರ್ವತ ಶ್ರೇಣಿಯ ಭಾಗವಾಗಿರುವ 945 ಮೀಟರ್ ಶಿಖರವಾದ ಹರ್ಷ್ ಪರ್ವತವನ್ನು ಹತ್ತಿದರು.
ವಿರೋಧದ ನಡುವೆಯೇ, ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಸೋಮವಾರ ಎರಡನೇ ಬಾರಿಗೆ ಈ ವಿಷಯವನ್ನು ಪ್ರಸ್ತಾಪಿಸಿ, ಅರಾವಳಿ ಬೆಟ್ಟಗಳ ಶೇ. 0.19 ರಷ್ಟು ಮಾತ್ರ ಗಣಿಗಾರಿಕೆಗೆ ಅವಕಾಶ ನೀಡಲಾಗುವುದು ಮತ್ತು ವಿವರವಾದ ಅಧ್ಯಯನ ಕೈಗೊಳ್ಳುವವರೆಗೆ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡಲಾಗುವುದಿಲ್ಲ ಹೇಳಿದ್ದಾರೆ. ಇದು ನಾಗರಿಕರ ಕೋಪ ಮತ್ತಷ್ಟು ಉದ್ವಿಗ್ನಗೊಳಿಸಿದೆ.
“ರಾಜಸ್ಥಾನ ಸರ್ಕಾರವು ಈ ಆದೇಶದ ವಿರುದ್ಧ ಪುನರ್ವಿಮರ್ಶೆ ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ಗೆ ಹೋಗಬೇಕು, ಇಲ್ಲದಿದ್ದರೆ ಸರ್ಕಾರವೇ ಅರವಳಿಯ ಸಾವಿಗೆ ಕಾರಣವಾಗುತ್ತದೆ. ರಾಜಸ್ಥಾನವು ಅರವಳಿಯ ಗರಿಷ್ಠ ಪಾಲನ್ನು ಹೊಂದಿದೆ, ಆದ್ದರಿಂದ ನಾವು ಧ್ವನಿ ಎತ್ತಬೇಕು” ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಕವಿತಾ ಶ್ರೀವಾಸ್ತವ ಹೇಳಿದ್ದಾರೆ.
“ಈಗಾಗಲೇ ದೆಹಲಿ ಮತ್ತು ಗುರಗಾಂವ್ನಲ್ಲಿ ಅಭಿವೃದ್ಧಿಗಾಗಿ ಅರವಳಿಯನ್ನು ಉಪಯೋಗಿಸಿಕೊಳ್ಳಲಾಗಿದೆ>ಇನ್ನು ಮುಂದೆ ಅದೇ ರೀತಿ ಆದರೆ ನಾವು ಹೊಣೆಯಾಗಬೇಕಾಗುತ್ತದೆ. ಈ ತೀರ್ಪಿನಲ್ಲಿ ಸ್ವೀಕಾರಾರ್ಹವಾಗುವ ಯಾವುದೇ ಅಂಶವಿಲ್ಲ” ಎಂದು ಹೇಳಿದ್ದಾರೆ.
ಸರ್ಕಾರವು ತನ್ನ ಆದೇಶವನ್ನು ಹಿಂಪಡೆಯಬೇಕು ಮತ್ತು ಅರಾವಳಿಯನ್ನು ಉಳಿಸಬೇಕೆಂದು #SaveAravali ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಕ್ಯಾಂಪೇನ್ ನಡೆಸಲಾಗುತ್ತಿದೆ. ಅನೇಕ ಪರಿಸರವಾದಿಗಳು ಪೀಪಲ್ ಫಾರ್ ಅರಾವಳಿ ಮತ್ತು ಸರಿಸ್ಕಾ ಉಳಿಸಿ ಅಭಿಯಾನವು ಸುಪ್ರೀಂ ಕೋರ್ಟ್ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ. ನವೆಂಬರ್ 20 ರಂದು ಅರಾವಳಿಯಲ್ಲಿ ಗಣಿಗಾರಿಕೆಗೆ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್ ಹಿಂಪಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ
ಗುಜರಾತ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿಯಾದ್ಯಂತ ಅರಾವಳಿಗಳನ್ನು ‘ನಿರ್ಣಾಯಕ ಪರಿಸರ ವಲಯ’ ಎಂದು ಘೋಷಿಸಲು ಅದು ಸರ್ಕಾರವನ್ನು ಆಗ್ರಹಿಸಲಾಗಿದೆ. ಅರಾವಳಿಗಳಲ್ಲಿನ ಮಾನವ ವಾಸಸ್ಥಳ, ಕೃಷಿ ಪ್ರದೇಶಗಳು, ಜಲಮೂಲಗಳು, ವನ್ಯಜೀವಿ ಸೂಕ್ಷ್ಮ ವಲಯಗಳ ಬಳಿ ಇರುವ ಎಲ್ಲಾ ಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಪರಿಸರವಾದಿಗಳು ಆಗ್ರಹಿಸುತ್ತಿದ್ದಾರೆ.





