ಮೈಸೂರು, ಬೆಂಗಳೂರು ಹಾಗೂ ಹುಬ್ಬಳಿಯಲ್ಲಿ ನಡೆಯಬೇಕಿದ್ದ ರೈಲ್ವೆ ಇಲಾಖೆ ಮುಂಬಡ್ತಿ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಕನ್ನಡದಲ್ಲಿ ಪರೀಕ್ಷೆಗೆ ಅವಕಾಶ ನೀಡುವರೆಗೂ ಪರೀಕ್ಷೆ ನಡೆಯಲು ಬಿಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
94 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್ಡಿಸಿಇ 101 ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ನಡೆಯಬೇಕಿದ್ದ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಕೇವಲ ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಮಾತ್ರ ಪರೀಕ್ಷೆ ನಡೆಸಲು ನೈರುತ್ಯ ರೈಲ್ವೇ ಇಲಾಖೆ ತೀರ್ಮಾನಿಸಿತ್ತು. ನೈರುತ್ಯ ರೈಲ್ವೆಯ ಈ ನಿಲುವು ಕನ್ನಡಿಗರನ್ನು ವಂಚಿಸುತ್ತಿದೆ ಹಾಗೂ ಕನ್ನಡ ಭಾಷಿಗರನ್ನು ಕಡೆಗಣಿಸುತ್ತಿದೆ ಎಂದು ಕನ್ನಡ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದವು.
ಕನ್ನಡಿಗರು ಉದ್ಯೋಗಕ್ಕಾಗಿ ಭಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ: ಕೇಂದ್ರದ ಈ ಹಿಂದಿಗೆ ಬೆಣ್ಣೆ ಕನ್ನಡಕ್ಕೆ ಸುಣ್ಣ ನಿಲುವಿನ ಕುರಿತು ಟ್ವೀಟ್ ಮಾಡಿದ ಸಿದ್ದರಾಮಯ್ಯ ಕನ್ನಡಿಗರು ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ. ತಾವು ಶಿಕ್ಷಣ ಪಡೆದ ಭಾಷೆಯಲ್ಲಿ ಉದ್ಯೋಗ ಕೇಳುವುದು ಕನ್ನಡಿಗರ ಹಕ್ಕು ಎಂದಿದ್ದಾರೆ. ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ರಧಾನಿ ಮೋದಿ ಗಮನ ಹರಿಸಬೇಕು, ಖುದ್ದು ಅವರೇ ಸಂಬಂಧಿತ ಇಲಾಖೆಯೊಡನೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು ಎಂದಿದ್ದಾರೆ.

ಸಚಿವ ಸೋಮಣ್ಣನ ಮೇಲೆ ಹರಿಹಾಯ್ದ ಸಿದ್ದರಾಮಯ್ಯ: ರಾಜ್ಯ ರೈಲ್ವೇ ಇಲಾಖೆಯ ರಾಜ್ಯ ಸಚಿವರಾದ ಸೋಮಣ್ಣ ಕನ್ನಡಿಗರ ಹಿತರಕ್ಷಣೆಯ ಕುರಿತು ವಹಿಸಿರುವ ನಿರ್ಲಕ್ಷ್ಯ ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ. ಸೋಮಣ್ಣನವರು ಕನ್ನಡಿಗರ ಪರವಾಗಿ ನಿಂತು ಅನ್ಯಾಯವನ್ನು ಸರಿಪಡಿಸುತ್ತಾರೆ ಎಂಬ ಭರವಸೆಯನ್ನು ನಾನೂ ಇಟ್ಟುಕೊಂಡಿದ್ದೆ, ಆ ನಂಬಿಕೆ ಹುಸಿಯಾಗಿದೆ. ಸೋಮಣ್ಣನವರು ಮಾತನಾಡಲು ಶುರು ಮಾಡಿದರೆ ರೈಲ್ವೆ ಇಲಾಖೆ ಇರುವುದೇ ಕರ್ನಾಟಕಕ್ಕಾಗಿ ಎನ್ನುವಂತೆ ಮಾತಿನ ಅರಮನೆ ಕಟ್ಟುತ್ತಾರೆ. ಅವರು ಮಾತು ಸ್ವಲ್ಪ ಕಡಿಮೆ ಮಾಡಿ ಕರ್ನಾಟಕಕ್ಕಾಗಿ ಮಾಡಬೇಕಾದ ಕೆಲಸವನ್ನು ನಿಷ್ಠೆಯಿಂದ ಮಾಡಲು ಮುಂದಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಕೇಂದ್ರವೂ ಕನ್ನಡಿಗರನ್ನು ಕಡೆಗಣಿಸುತ್ತಿರುವು ಇದೇ ಮೊದಲಲ್ಲ ಬಹುಷಃ ಇದು ಕೊನೆಯೂ ಅಲ್ಲ‘ ವರ್ಷಗಳಿಂದ ಕೇಂದ್ರ ನಡೆಸುವ ಪರಿಕ್ಷೆಗಳಲ್ಲಿ ಕನ್ನಡ ಭಾಷಿಗರ ಕುರಿತಕಡೆಗಣನೆ ನಡೆಯುತ್ತಲೇ ಬಂದಿದೆ. ಸರ್ಕಾರಿ ಉದ್ಯೋಗಗಳು ಹಿಂದಿ ಭಾಷಿಗರಿಗೆ ಮಾತ್ರ ಸಲ್ಲಬೇಕೆಂಬ ಉದ್ದೇಶ ಕೇಂದ್ರ ಸರ್ಕಾರದ್ದು ಹಾಗಾಗಿಯೇ ಕನ್ನಡ ಸೇರಿದಂತೆ ಉಳಿದ ರಾಜ್ಯ ಭಾಷೆಗಳ ಮೇಲೆ ಕೇಂದ್ರ ಸರ್ಕಾರ ತಾತ್ಸಾರ ಮನೋಭಾವ ಹೊಂದಿದೆ ಎಂದು ಸಿದ್ದರಾಮಯ್ಯ ಕೇಂದ್ರದ ವಿರುದ್ಧ ಗುಡುಗಿದ್ದಾರೆ.

ಕರವೇ ಬೇಡಿಕೆಗಳೇನು: ಕರ್ನಾಟಕ ರಕ್ಷಣಾ ವೇದಿಕೆಯು ಹಲವು ದಶಕಗಳಿಂದ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ವಂಚನೆ ಮಾಡುತ್ತಿರುವ ಸರ್ಕಾರದ ಏಕಭಾಷೆ ಲಾಲಸೆಯ ವಿರುದ್ಧ ಸುಧೀರ್ಘ ಹೋರಾಟ ಮಾಡುತ್ತಲೇ ಬಂದಿದೆ. ಈ ಬಾರಿಯೂ ಹುಬ್ಬಳ್ಳಿ ಮೈಸೂರು ಬೆಂಗಳೂರಿನಲ್ಲಿ ನಡೆಯಲಿದ್ದ ಪರೀಕ್ಷೆಗಳನ್ನು ಕರವೇ ಪ್ರತಿಭಟನೆಯ ನಂತರ ಮುಂದೂಡಲಾಗಿದೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನಾರಾಯಣಗೌಡ ವಿರೋಧದ ನಡುವೆಯೂ ರೈಲ್ವೇ ಇಲಾಖೆ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸಲು ಮುಂದಾಗದಿದ್ದರೆ ರಾಜ್ಯಾದ್ಯಂತ ರೈಲ್ವೇ ಸಂಚಾರವನ್ನೇ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ರೈಲ್ವೇ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.





