ಆನೇಕಲ್ ತಾಲೂಕಿನ ಕೃಷಿ ಭೂಮಿಯನ್ನು ಬಂಜರು ಭೂಮಿ ಎಂದು ಸರ್ಕಾರಕ್ಕೆ ವರದಿ ನೀಡಿದ್ದ ಅಧಿಕಾರಿಗಳಿಗೆ ʼನೀವು ವರದಿ ನೀಡಿದ್ದ ಆ ಬಂಜರು ಭೂಮಿಯಲ್ಲಿಯೇ ಸಮೃದ್ಧವಾಗಿ ಬೆಳೆದಿರುವ ರಾಗಿಯನ್ನು ರಾಶಿ ಮಾಡಿದ್ದೇವೆ ನೋಡಿ….ʼ ಎನ್ನುವ ಮೂಲಕ ಮೇಡಹಳ್ಳಿ ಗ್ರಾಮದ ಪ್ರಗತಿಪರ ರೈತ ಮುರುಗೇಶ್ ಅವರು ಸರ್ಕಾರಿ ಅಧಿಕಾರಿಗಳಿಗೆ ನೀಡಿದ ಮೌನ ಮಾರುತ್ತರವಿದು!
ಆನೇಕಲ್ ತಾಲೂಕಿನ ಫಲವತ್ತಾದ ಕೃಷಿ ಭೂಮಿಗಳನ್ನು ಬಂಜರು ಭೂಮಿಗಳು ಎಂದು ವರದಿ ನೀಡಿರುವ ಅಧಿಕಾರಿಗಳಿಗೆ ಅವರು ತಮ್ಮ ಹೊಲದಲ್ಲಿ ಬೆಳೆದ ರಾಗಿ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ತಿರುಗೇಟು ನೀಡಿದ್ದಾರೆ. ತಾಲೂಕಿನ ಭೂಮಿ ಬಂಜರು ಅಲ್ಲ. ಫಲವತ್ತಾದ ಹಸಿರು ಭೂಮಿ ಎಂಬ ಸಂದೇಶ ರವಾನಿಸಿದ್ದಾರೆ.
ತಾಲೂಕಿನ ಮಾಯಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಡಹಳ್ಳಿಯ ಮುರುಗೇಶ್ ಅವರಿಗೆ ಈ ಬಾರಿ ಉತ್ತಮ ಫಸಲು ಬಂದಿದೆ. ರಾಗಿಕಣ ಮತ್ತು ಗೋಪೂಜೆ ಮೂಲಕ ತಾಲೂಕಿನ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಮುಂದಾದ ಸರ್ಕಾರಕ್ಕೆ ಸವಾಲು ಎಸೆದಿದ್ದಾರೆ.
ಅಪಾರ್ಟ್ಮೆಂಟ್, ವಿಲ್ಲಾ, ಲೇಔಟ್ಗಳಿಂದ ಆನೇಕಲ್ ತಾಲೂಕಿನ ಬಹುತೇಕ ಭೂಮಿ ಶ್ರೀಮಂತರು ಮತ್ತು ಬಂಡವಾಳಗಾರರ ಪಾಲಾಗಿದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಆನೇಕಲ್ ತಾಲೂಕಿನ ಭೂಮಿ ಬಂಜರು ಭೂಮಿ ಎಂದು ವರದಿ ನೀಡಿದ್ದಾರೆ.
ಈ ಅಧಿಕಾರಿಗಳ ವರದಿಯನ್ನು ವಿರೋಧಿಸುವ ಸಲುವಾಗಿ ರಾಗಿ ಕಣದ ಪೂಜೆಯನ್ನು ನಡೆಸಲಾಗಿದೆ. ಈ ಮೂಲಕ ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಲಾಗಿದೆ ಎಂದು ಮುರುಗೇಶ್ ತಿಳಿಸಿದ್ದಾರೆ.
ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (KIADB) ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯಲ್ಲಿ ಸುಮಾರು 1,050 ರಿಂದ 2,535 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಯೋಜನೆ ಹಾಕಿದೆ. ಇದು ಸ್ಟಾರ್ಟಪ್ಗಳು, ಇನ್ನೋವೇಷನ್ ಮತ್ತು ಟೆಕ್ ಹಬ್ ಆಗಿ ಅಭಿವೃದ್ಧಿಪಡಿಸುವ ಹೆಸರಿನಲ್ಲಿ ಕೃಷಿ ಭೂಮಿ ಸ್ವಾಧೀನಕ್ಕೆ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ರೈತರು ತಮ್ಮ ಜೀವನೋಪಾಯ ಕಳೆದುಕೊಳ್ಳುವ ಭಯದಿಂದ ಒಗ್ಗಟ್ಟಾಗಿ ಹೋರಾಡುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಮೆಕ್ಕೆಜೋಳ ಖರೀದಿ ಕೇಂದ್ರದಿಂದ ರೈತರಿಗೆ ಯಾವುದೇ ಉಪಯೋಗವಾಗಿಲ್ಲ: ಮಂಜುನಾಥ ಮಾಗಡಿ ಆರೋಪ
ಈ ನಡುವೆ, ಆನೇಕಲ್ ತಾಲೂಕಿನ ಮೇಡಹಳ್ಳಿ ಗ್ರಾಮದಲ್ಲಿ, ತನ್ನ ನೆಲವನ್ನು ಪ್ರೀತಿಸಿ, ತನ್ನ ಬೆವರನ್ನು ಸುರಿಸಿ ಹಗಲಿರುಳು ಶ್ರಮಪಟ್ಟು ಬೆಳೆ ಬೆಳೆಯುತ್ತಿದ್ದ ಭೂಮಿಯನ್ನೇ ಬಂಜರು ಎಂದು ಸರ್ಕಾರಕ್ಕೆ ವರದಿ ನೀಡಿದ್ದ ಅಧಿಕಾರಿಗಳಿಗೆ ರೈತ ಮುರುಗೇಶ್ ಅವರು ರಾಗಿ ರಾಶಿಯ ಮೂಲಕ ಮೌನವಾಗಿ ಉತ್ತರ ಕೊಟ್ಟಿದ್ದಾರೆ. ಆ ಮೌನದೊಳಗೆ ರೈತನ ಗರ್ವವಿದೆ. ಆ ಮೌನದೊಳಗೆ ಭೂಮಿತಾಯಿ ಮೇಲಿನ ಅಪಾರ ಪ್ರೇಮವಿರುವುದು ವ್ಯಕ್ತವಾಗಿದೆ.





