ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಬಿ)ದಿಂದ ದೇಶದ ಹಲವು ಭಾಗಗಳಿಗೆ ಕೊತ್ತಂಬರಿ ಸಾಗಾಟದ ಪ್ರಮಾಣ ಹೆಚ್ಚಾಗಿದ್ದು, ಇದೇ ಜೂನ್ನಿಂದ ನವೆಂಬರ್ವರೆಗೆ ಒಟ್ಟು 5,904 ಮೆಟ್ರಿಕ್ ಟನ್ ಕೊತ್ತಂಬರಿ ಸೊಪ್ಪನ್ನು ದೇಶದ ಬೇರೆ ಬೇರೆ ನಗರಗಳಿಗೆ ಸಾಗಿಸಲಾಗಿದೆ.
ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಕೊತ್ತಂಬರಿ ಸಾಗಣೆ ಶೇ.13ರಷ್ಟು ಹೆಚ್ಚಾಗಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಕೊತ್ತಂಬರಿ ಬೇಡಿಕೆ ಹೆಚ್ಚಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಈ ಮೂಲಕ ಕೊತ್ತಂಬರಿ ಸೊಪ್ಪಿನಂತಹ ತಾಜಾ ಕೃಷಿ ಉತ್ಪನ್ನಗಳನ್ನು ದೇಶದ ವಿವಿಧ ಭಾಗಗಳಿಗೆ ತಲುಪಿಸುವಲ್ಲಿ ಪ್ರಮುಖ ಕೇಂದ್ರವಾಗಿ ಬೆಂಗಳೂರು ರೂಪುಗೊಳ್ಳುತ್ತಿದೆ.
ಐದು ತಿಂಗಳಲ್ಲಿ ರಾಜ್ಯದ ಕೊತ್ತಂಬರಿ ಸೊಪ್ಪನ್ನು ದೇಶದ 22 ನಗರಗಳಿಗೆ ಸರಬರಾಜು ಮಾಡಲಾಗಿದೆ. ಕೋಲ್ಕತ್ತ, ದೆಹಲಿ, ರಾಂಚಿ ಮತ್ತು ಪಟ್ನಾ ಕಡೆಗೆ ಹೆಚ್ಚು ಸಾಗಾಟ ನಡೆದಿದ್ದು, ಲಖನೌ, ವಾರಣಾಸಿ ಹಾಗೂ ಜೈಪುರ ಕಡೆಗೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕೊತ್ತಂಬರಿ ಕಳುಹಿಸಲಾಗಿದೆ. ಇದಕ್ಕೂ ಹೆಚ್ಚಾಗಿ ಅಗರ್ತಲಾ, ಆಗ್ರಾ, ನಾಗಪುರ, ಅಮೃತಸರ ಮತ್ತು ಪೋರ್ಟ್ ಬ್ಲೇರ್ಗೆ ಮೊದಲ ಬಾರಿಗೆ ಕೊತ್ತಂಬರಿ ಸಾಗಣೆ ಆರಂಭಿಸಲಾಗಿದೆ. ಇದರಿಂದ ತಾಜಾ ಸೊಪ್ಪು ರಫ್ತು ಮಾಡಲು ರೈತರು ಮತ್ತು ವ್ಯಾಪಾರಿಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಯಾದಂತಾಗಿದೆ.
ಕೊತ್ತಂಬರಿ ಸೊಪ್ಪು ಬೇಗ ಹಾಳಾಗುವ ಬೆಳೆ. ರಸ್ತೆ ಮಾರ್ಗದಲ್ಲಿ ದೂರದ ಮಾರುಕಟ್ಟೆಗೆ ಕಳುಹಿಸಿದರೆ ಗುಣಮಟ್ಟ ಕುಸಿಯುವ ಸಾಧ್ಯತೆ ಹೆಚ್ಚು. ಆದರೆ ವಿಮಾನ ಮಾರ್ಗದ ಮೂಲಕ ಕಡಿಮೆ ಸಮಯದಲ್ಲಿ ಉತ್ಪನ್ನ ತಲುಪುವುದರಿಂದ ತಾಜಾತನ ಉಳಿಯುತ್ತದೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.
“ರೈತರು ಗುಂಪಾಗಿ ಅಥವಾ ಎಫ್ಪಿಒಗಳ ಮೂಲಕ ಕೊತ್ತಂಬರಿ ಸಂಗ್ರಹಿಸಿ, ವಿಂಗಡಣೆ ಮಾಡಿ, ಬೆಂಗಳೂರು ಮೂಲಕ ನೇರವಾಗಿ ಬೇರೆ ರಾಜ್ಯಗಳ ಮಾರುಕಟ್ಟೆಗಳಿಗೆ ಕಳುಹಿಸಿದರೆ ಲಾಭ ಹೆಚ್ಚಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಕೊತ್ತಂಬರಿಯ ಜತೆಗೆ ಇತರೆ ತರಕಾರಿಗಳಿಗೂ ಇದೇ ಮಾದರಿಯ ಅವಕಾಶ ಹೆಚ್ಚಾಗುವ ಸಾಧ್ಯತೆ ಇದೆ” ಎಂಬುದು ಕೃಷಿ ತಜ್ಞರ ಅಭಿಪ್ರಾಯವಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣದ ಮೂಲಕ ನಡೆಯುತ್ತಿರುವ ಈ ಸಾಗಣೆ ರಾಜ್ಯದ ರೈತರಿಗೆ ದೇಶದ ದೊಡ್ಡ ಮಾರುಕಟ್ಟೆ ಅವಕಾಶಗಳನ್ನುನ ತೆರೆದಿಡುವ ನಿರೀಕ್ಷೆ ಇದೆ ಎಂದು ವಿಮಾನ ನಿಲ್ದಾಣದ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿದ್ದೀರಾ? 2025ರ ಹಿನ್ನೋಟ | ಕೃಷಿ ಬದುಕಿನ ಕಠೋರತೆ: ಮುಗಿಯದ ರೈತರ ಸಂಕಷ್ಟ
ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.13ರಷ್ಟು ಹೆಚ್ಚಳವಾಗಿರುವ ಈ ಪ್ರಮಾಣ, ದೇಶೀಯ ಕೃಷಿ ವ್ಯಾಪಾರದಲ್ಲಿ ಬೆಂಗಳೂರಿನ ಪ್ರಮುಖ ಕೇಂದ್ರೀಕೃತ ಮತ್ತು ವಿತರಣಾ ಕೇಂದ್ರವಾಗಿ ಹೊರಹೊಮ್ಮುವುದನ್ನು ಎತ್ತಿ ತೋರಿಸುತ್ತದೆ.
ಕೊಳೆಯುವ ಪದಾರ್ಥಗಳ ಸಾಗಣೆಯಲ್ಲಿ ಸತತವಾಗಿ ಭಾರತದ ನಂ.1 ವಿಮಾನ ನಿಲ್ದಾಣವಾಗಿರುವ ಕೆಂಪೇಗೌಡ ವಿಮಾನ ನಿಲ್ದಾಣ, ಕೊತ್ತಂಬರಿ ಸೊಪ್ಪಿನಂತಹ ಸಮಯ ಸಂವೇದಿ ಕೃಷಿ ಉತ್ಪನ್ನಗಳ ವೇಗವಾದ ಮತ್ತು ಸುರಕ್ಷಿತ ಸಾಗಣೆಯ ಮೂಲಕ ರೈತರಿಗೆ ಹೆಚ್ಚಿನ ಮಾರುಕಟ್ಟೆ ಅವಕಾಶಗಳನ್ನು ಒದಗಿಸುತ್ತಿದೆ. ಇದು ಕರ್ನಾಟಕದ ಕೃಷಿ ಆರ್ಥಿಕತೆಯನ್ನು ಬಲಪಡಿಸುವುದರ ಜತೆಗೆ ದೇಶಾದ್ಯಂತ ತಾಜಾ ತರಕಾರಿಗಳ ಲಭ್ಯತೆಯನ್ನು ಹೆಚ್ಚಿಸುತ್ತದೆ. ಭವಿಷ್ಯದಲ್ಲಿ ಇಂತಹ ಸಾಗಣೆಯು ಮತ್ತಷ್ಟು ವೃದ್ಧಿಯಾಗಿ, ವಿಮಾನ ನಿಲ್ದಾಣದ ಕಾರ್ಗೋ ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ.





