ಇಪಿಡಬ್ಲ್ಯೂ ಸಂಪಾದಕೀಯ
ಅನುವಾದ : ಶಿವಸುಂದರ್
ಆರ್ಥಿಕ ಮಂದಗತಿ ಮತ್ತು ಕುಸಿಯುತ್ತಿರುವ ಜಿಎಸ್ಟಿ ಸಂಗ್ರಹದ ನಡುವೆ ರಾಜ್ಯಗಳಿಗೆ ನೀಡಬೇಕಾದ ಜಿಎಸ್ಟಿ ಆದಾಯ ಪರಿಹಾರ ಪಾವತಿ ಗಂಭೀರ ಬಿಕ್ಕಟ್ಟಿಗೆ ತಲುಪಿದೆ. ಶೇ.14ರ ಆದಾಯ ರಕ್ಷಣೆಯ ಭರವಸೆಯ ಮೇಲೆ ರೂಪುಗೊಂಡ ವ್ಯವಸ್ಥೆ ಈಗ ಕೇಂದ್ರ–ರಾಜ್ಯ ಸಂಬಂಧಗಳಲ್ಲೇ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ಪರಿಹಾರ ಹೆಚ್ಚುವರಿ ತೆರಿಗೆ ಸಂಗ್ರಹ ಸಾಕಾಗದಿರುವುದು, ಪಾವತಿಗಳ ವಿಳಂಬ ಮತ್ತು ವಿತ್ತೀಯ ಸಾಮರ್ಥ್ಯದ ಪ್ರಶ್ನೆಗಳು ಭಾರತದ ವಿತ್ತೀಯ ಒಕ್ಕೂಟದ ಭವಿಷ್ಯದ ಮೇಲೆ ನೆರಳು ಬೀರುತ್ತಿವೆ. ಪರಿಹಾರ ಅವಧಿ ವಿಸ್ತರಣೆ ಬೇಡಿಕೆಯ ನಡುವೆ, ರಾಜ್ಯಗಳು ಸ್ವಾವಲಂಬಿ ಆದಾಯ ಮೂಲಗಳನ್ನು ಬಲಪಡಿಸುವ ಅಗತ್ಯವೂ ತುರ್ತು ಪ್ರಶ್ನೆಯಾಗಿ ಎದುರಾಗಿದೆ.
ಮಂದಗತಿಯಲ್ಲಿರುವ ಆರ್ಥಿಕತೆಯಲ್ಲಿ ಕಿರಿದಾಗುತ್ತಿರುವ ವಿತ್ತೀಯ ಅವಕಾಶವೇ GST ಆದಾಯ ಪರಿಹಾರ ಪಾವತಿಯು ಎದುರಿಸುತ್ತಿರುವ ಹೊಸ ಆಪತ್ತಾಗಿದೆ.

ಯಾವುದೇ ತೆರಿಗೆ ಸುಧಾರಣಾ ಕ್ರಮಗಳೊಂದಿಗೆ ಬೆಸೆದುಕೊಂಡಿರುವ ಆದಾಯ ಗಳಿಕೆಯಲ್ಲಿನ ಅನಿಶ್ಚಿತತೆಗಳು ಎಲ್ಲಾ ಸರ್ಕಾರಗಳಿಗೂ ಕಳವಳವನ್ನುಂಟು ಮಾಡುತ್ತವೆ. ಹೀಗಾಗಿ ತೆರಿಗೆ ಸುಧಾರಣೆಯ ಬಗ್ಗೆ ವಿಶಾಲ ನೆಲೆಯ ಸರ್ವಸಮ್ಮತಿಯನ್ನು ರೂಢಿಸಬೇಕೆಂದರೆ ಯಾವುದಾದರೂಂದು ಬಗೆಯ ಆದಾಯ ರಕ್ಷಣೆಯ ಭರವಸೆಯ ಅಗತ್ಯವಿದ್ದೇ ಇರುತ್ತದೆ. ಹಾಗಾಗಿಯೇ 2017ರ ಸರಕು ಮತ್ತು ಸೇವಾ ತೆರಿಗೆ (GST) (ರಾಜ್ಯಗಳಿಗೆ ಪರಿಹಾರ) ಕಾಯಿದೆಯಲ್ಲಿ GST ಜಾರಿಯಾದ ಮೊದಲ ಐದು ವರ್ಷಗಳಲ್ಲಿ ರಾಜ್ಯಗಳ GST (SGST) ಮತ್ತು ಅಂತರರಾಜ್ಯ GST ಗಳಿಕೆಯಲ್ಲಿ ಕೊರತೆ ಕಂಡುಬಂದರೆ ಅವುಗಳ ರಾಜಸ್ವ ಆದಾಯಕ್ಕೆ ರಕ್ಷಣೆಯ ಭರವಸೆಯನ್ನು ನೀಡುವ ಅವಕಾಶವನ್ನು ಕಲ್ಪಿಸಿತ್ತು. ಮೇಲಾಗಿ ಈ ಆದಾಯ ರಕ್ಷಣೆಯ ಭರವಸೆಯನ್ನು ಆಧಾರಿಸಿಕೊಂಡೇ GST ಪರಿಷತ್ತು, ಆರ್ಥಿಕತೆಯ ಮೇಲೆ GST ಹೆಚ್ಚಿನ ಪರಿಣಾಮವನ್ನು ಬೀರದಿರಲು ಹಾಗೂ ತೆರಿಗೆ ಕಟ್ಟುವುದನ್ನು ಸರಳೀಕರಿಸಲು ಅಗತ್ಯವಾದ ವಿನ್ಯಾಸ, ರಚನೆ ಮತ್ತು ಆಡಳಿತಾತ್ಮಕ ನಿಯಮಗಳನ್ನು ರೂಪಿಸುವ ಪ್ರಯೋಗಗಳನ್ನು ಮಾಡುತ್ತಲಿದೆ. ಆದರೆ ಇಂದು ದೇಶದಲ್ಲಿ GST ಸಂಗ್ರಹವೇ ಕುಸಿಯುತ್ತಿರುವಾಗ, ವಿಶೇಷವಾಗಿ GST ಆದಾಯ ಪರಿಹಾರದ ಅಗತ್ಯಗಳಿಗೂ “GST ಪರಿಹಾರ ಹೆಚ್ಚುವರಿ ತೆರಿಗೆ” ಸಂಗ್ರಹಗಳಿಗೂ ನಡುವಿನ ಅಂತರ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಸರಿಯಾದ ಸಮಯದಲ್ಲಿ ಪರಿಹಾರ ಮೊತ್ತ ಬಿಡುಗಡೆ ಮಾಡುವ ವಿಷಯವು ಕೇಂದ್ರ ಮತ್ತು ರಾಜ್ಯಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗುತ್ತಿರುವಾಗ, ಈ ದೇಶದ ಆದಾಯ ಪರಿಹಾರ ವ್ಯವಸ್ಥೆಯನ್ನು ಸುಗಮಗೊಳಿಸುವುದರಲ್ಲಿ GST ಪರಿಹಾರ ಕಾಯಿದೆಯ ಪರಿಣಾಮಕತೆ ಪ್ರಶ್ನಾರ್ಹವಾಗಿದೆ.

2015-16ರಲ್ಲಿ ರಾಜ್ಯಗಳ ಎಲ್ಲಾ ತೆರಿಗೆಗಳು SGSTಯಲ್ಲಿ ವಿಲೀನವಾಗುವ ಮೊದಲು ಎಷ್ಟು ಮೊತ್ತದ ತೆರಿಗೆಯನ್ನು ಸಂಗ್ರಹವಾಗುತ್ತಿದ್ದವೋ ಅದರ ಶೇ.14ರಷ್ಟು ಹೆಚ್ಚುವರಿ ಮೊತ್ತವನ್ನು ಪ್ರತೀ ವರ್ಷ ರಾಜ್ಯಗಳ ತೆರಿಗೆ ಸಂಗ್ರಹವಾಗುತ್ತಿದ್ದವೆಂಬ ಲೆಕ್ಕದಲ್ಲಿ ರಾಜ್ಯಗಳ GSTಯನ್ನು ಅಂದಾಜಿಸಲಾಗಿದೆ. ಇದೇ ಸಮಯದಲ್ಲಿ 2022ರ ಜೂನ್ 30ರವರೆಗೆ GST ಪರಿಹಾರ ಪಾವತಿಸಲು, 2017ರ ಜುಲೈ 1ರಿಂದ ಪಾನ್ ಮಸಾಲ, ತಂಬಾಕು ಮತ್ತು ಇತರ ತಂಬಾಕು ಉತ್ಪನ್ನಗಳು, ನೀರು ಸೋಡಾ, ಪ್ರಯಾಣಿಕರ ವಾಹನಗಳು ಇತ್ಯಾದಿ ಸರಕುಗಳ ಮೇಲೆ “GST ಪರಿಹಾರ ಹೆಚ್ಚುವರಿ ತೆರಿಗೆ” ವಿಧಿಸಿ ಪರಿಹಾರ ನಿಧಿಗೆ ಹೆಚ್ಚುವರಿ ಮೊತ್ತ ಸಂಗ್ರಹಿಸುವ ಪ್ರಯತ್ನವನ್ನು ಮಾಡುತ್ತಾ ಬರಲಾಗಿದೆ. ಆದರೂ GST ಪರಿಹಾರ ಧನವನ್ನು ರಾಜ್ಯಗಳಿಗೆ ವಿತರಣೆ ಮಾಡುವುದರಲ್ಲಿ ಮಾತ್ರ ನಿರಂತರವಾಗಿ ವಿಳಂಬವಾಗುತ್ತಲೇ ಬಂದಿದೆ.

ಉದಾಹರಣೆಗೆ, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನೀಡಬೇಕಿದ್ದ 17,789 ಕೋಟಿ ರೂ. ಮೊತ್ತವು ಬಿಡುಗಡೆಯಾಗಿದ್ದು 2019ರ ಜುಲೈನಲ್ಲಿ ಹಾಗೆಯೇ 2019ರ ಜೂನ್ ಮತ್ತು ಜುಲೈನಲ್ಲಿ ನೀಡಬೇಕಿದ್ದ 27,955 ಕೋಟಿ ರೂ. ಮೊತ್ತವು ಆಗಸ್ಟ್ನಲ್ಲಿ ಬಿಡುಗಡೆಗೊಂಡಿತು. ಹಾಗೂ 2019ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಬಾಕಿಯಾಗಿದ್ದು 35,298 ಕೋಟಿ ರೂ. ಮೊತ್ತವು ಬಿಡುಗಡೆಯಾಗಿದ್ದು ಡಿಸೆಂಬರ್ ಮಧ್ಯದಲ್ಲಿ.

GST ಪರಿಹಾರ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಹೊಸದೇನೂ ಅಲ್ಲವಾದರೂ, GST ಪರಿಹಾರ ಪಾವತಿ ಸಂಬಂಧಿಸಿದಂತೆ ಹಾಲಿ ಉದ್ಭವಿಸಿರುವ ಬಿಕ್ಕಟ್ಟಿನ ಹಿಂದಿನ ಕಾರಣಗಳು ವಿಶೇಷವಾಗಿವೆ. ಮೊದಲಿಗೆ, SGST ಸಂಗ್ರಹದಲ್ಲಿ ಕಂಡುಬಂದಿರುವ ಕುಸಿತ ಮತ್ತು ಭಾರತದ ಒಟ್ಟಾರೆ ಆರ್ಥಿಕ ಇಳಿಮುಖತೆಯ ಕಾರಣದಿಂದಾಗಿ ಒಟ್ಟಾರೆ GST ಸಂಗ್ರಹದಲ್ಲೇ ಇಳಿಕೆಯಾಗಿ ಉದ್ಭವಿಸಿರುವ ಆದಾಯ ಅನಿಶ್ಚಿತತೆಯೇ ಹಾಲಿ ವಿಳಂಬಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಜಿಡಿಪಿಯ ದರದಲ್ಲಿ ಏರಿಕೆ ಕಂಡು ತೆರಿಗೆ ಸಂಗ್ರಹದ ಸಾಧ್ಯತೆಯೂ ಹೆಚ್ಚಾಗದೇ GST ಪರಿಹಾರ ಪಾವತಿಯಲ್ಲಿ ವಿಳಂಬವು ಮುಂದುವರೆಯುವುದಲ್ಲದೇ ಬರುವ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಘರ್ಷಣೆಯು ಹೆಚ್ಚಾಗಲಿದೆ.
ಎರಡನೆಯದಾಗಿ ಮೊದಲ ಕಾರಣವನ್ನು ಮತ್ತಷ್ಟು ಬಿಗಡಾಯಿಸುವ ಸಂಗತಿಯೇನೆಂದರೆ ಒಂದೊಮ್ಮೆ GST ಪರಿಹಾರ ಹೆಚ್ಚುವರಿ ತೆರಿಗೆ ಕುಸಿದಲ್ಲಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ GST ಕಾಯಿದೆಯು ಯಾವುದೇ ಮಾರ್ಗದರ್ಶನವನ್ನು ನೀಡುವುದಿಲ್ಲ. ಕಾಯಿದೆಯ ವ್ಯಾಪ್ತಿಯಲ್ಲಿ GST ವ್ಯವಸ್ಥೆಗೆ ಪರಿವರ್ತನೆಗೊಳ್ಳುತ್ತಿರುವ ಅವಧಿಯಲ್ಲಿ ರಾಜ್ಯಗಳಿಗೆ GST ಪರಿಹಾರವನ್ನು ಪಾವತಿಸುವುದು ಸಂಪೂರ್ಣವಾಗಿ ಕೇಂದ್ರದ ಜವಾಬ್ದಾರಿ. ಆದರೆ ಆರ್ಥಿಕತೆಯು ಇಳಿಮುಖಗೊಂಡಿರುವ ಈ ಸಂದರ್ಭದಲ್ಲಿ GST ಪರಿಹಾರವನ್ನು ಪಾವತಿಸಲು ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸುವುದು ಭಾರತದ ಸಾರ್ವಜನಿಕ ಹಣಕಾಸು ನಿರ್ವಹಣೆಗೆ ಸವಾಲಾಗಿ ಪರಿಣಮಿಸಲಿದೆ.
ಬಿಹಾರದಂತಹ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಬಹುಪಾಲು ರಾಜ್ಯಗಳಿಗೆ SGST ಯಡಿ ವಿಲೀನವಾದ ತೆರಿಗೆ ಬಾಬತ್ತುಗಳಲ್ಲಿ ಶೇ.14ರಷ್ಟು ಅಭಿವೃದ್ಧಿಯನ್ನು ಸಾಧಿಸುವ ಸಾಮರ್ಥ್ಯವಿಲ್ಲ. ಆದ್ದರಿಂದಲೇ ಆದಾಯ ರಕ್ಷಣೆಯ ಭರವಸೆಯು GST ವ್ಯವಸ್ಥೆಯೊಡನೆ ಹೊಂದಿಕೊಂಡು ಹೋಗುವಂತಹ ವಿತ್ತೀಯ ಅವಕಾಶವನ್ನು ದೊರಕಿಸುತ್ತದೆ. ಈ ಕಾರಣಗಳಿಗಾಗಿಯೇ GST ಆದಾಯ ಪರಿಹಾರ ವ್ಯವಸ್ಥೆಯನ್ನು ಇನ್ನೂ ಮೂರು ವರ್ಷಗಳ ಕಾಲ ಅಂದರೆ 2024-25ರವರೆಗೆ ವಿಸ್ತರಿಸಬೇಕೆಂದು ಹಲವಾರು ರಾಜ್ಯಗಳು 15ನೇ ಹಣಕಾಸು ಆಯೋಗದ ಮೊರೆ ಹೋಗಿದ್ದಾರೆ.
GST ಪರಿಹಾರ ಅವಧಿ ವಿಸ್ತರಿಸುವ ಅಧಿಕಾರವು ನಾಮಮಾತ್ರಕ್ಕೆ GST ಪರಿಷತ್ತಿಗಿದೆಯಾದರೂ ಅಂತಿಮ ತೀರ್ಮಾನವನ್ನು ಮಾತ್ರ ಕೇಂದ್ರ ಸರ್ಕಾರವೇ ತೆಗೆದುಕೊಳ್ಳಬೇಕಾಗಿರುತ್ತದೆ. ಆದರೆ ಒಟ್ಟಾರೆ GST ಸಂಗ್ರಹವೇ ಕುಸಿದಿರುವಾಗ ಈ ಕೂಡಲೇ GST ಪರಿಹಾರ ಹೆಚ್ಚುವರಿ ತೆರಿಗೆಯನ್ನು ಈ ಸದ್ಯಕ್ಕೆ ಹಿಂತೆಗೆದುಕೊಳ್ಳುವ ಯಾವ ಸೂಚನೆಗಳಿಲ್ಲ. ಆದರೆ, ಒಂದುವೇಳೆ GST ಪರಿಹಾರದ ಅವಧಿಯನ್ನು ಹೆಚ್ಚಿಸಿದರೂ ತೆರಿಗೆ ಸಂಗ್ರಹ ಸಾಧ್ಯತೆ ಹೆಚ್ಚಾಗದೇ ಅಥವಾ ಒಟ್ಟಾರೆ ಜಿಡಿಪಿ ಅಭಿವೃದ್ಧಿಯಲ್ಲಿ ಹೆಚ್ಚಳವಾಗದೇ ಈಗ ನಿಗದಿಯಾಗಿರುವ ಶೇ.14ರ ತೆರಿಗೆ ಹೆಚ್ಚಳದ ದರದಲ್ಲಿ ಪರಿಹಾರವನ್ನು ಕೊಡುವಷ್ಟು ವಿತ್ತೀಯ ಸಾಮರ್ಥ್ಯವನ್ನು ಕೇಂದ್ರ ಸರ್ಕಾರವೂ ಹೊಂದಿದೆಯೇ?
ಇದನ್ನೂ ಓದಿ: ವಿಬಿ-ಜಿ ರಾಮ್ -ಜಿ: ಮನರೇಗಾ ನಿರ್ಮಿಸಿದ ಪರಂಪರೆಯ ಬುಡಮೇಲು
ಹಾಲಿ ಪರಿಸ್ಥಿತಿಯು ಭಾರತದ ವಿತ್ತೀಯ ಒಕ್ಕೂಟ ರಚನೆಗೆ ಎದುರಾಗುತ್ತಿರುವ ಬಿಕ್ಕಟ್ಟಿನ ಮುನ್ಸೂಚನೆಯೇ? ಆ ಬಗೆಯ ಯಾವುದೇ ತೀರ್ಮಾನಗಳಿಗೆ ಬರಲು ಇನ್ನೂ ಸಮಯ ಬೇಕು. ಆದರೆ GST ವ್ಯವಸ್ಥೆಗೆ ಸ್ಥಿತ್ಯಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಆದಾಯ ರಕ್ಷಣೆಗೆ ನಿಗದಿಯಾಗಿರುವ ತೆರಿಗೆ ಸಂಗ್ರಹ ಹೆಚ್ಚಳದ ದರವನ್ನು ಏಕಪಕ್ಷೀಯವಾಗಿ ಕಡಿತಗೊಳಿಸುವುದು ವಿತ್ತೀಯ ಒಕ್ಕೂಟದ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕಡಿಮೆ ಮಾಡುವ ಸಂಭವವನ್ನು ನಿರಾಕರಿಸಲಾಗುವುದಿಲ್ಲ. ತೆರಿಗೆ ನಷ್ಟಕ್ಕೆ ಸೂಕ್ತವಾದ ಪರಿಹಾರ ವ್ಯವಸ್ಥೆ ಇಲ್ಲವಾದಾಗ ಪರಿಹಾರದ ಅವಧಿಯ ನಂತರ ರಾಜ್ಯಗಳು GST ವ್ಯವಸ್ಥೆಯೊಳಗೆ ಮುಂದುವರಿಯಲು ಬೇಕಾದ ಬಂಧವೇ ಇಲ್ಲವಾಗುತ್ತದೆ. ಅದೇ ಸಮಯದಲ್ಲಿ ಪರಿಹಾರ ವ್ಯವಸ್ಥೆಯು ನಿರಂತರವಾಗಿ ಮುಂದುವರಿಯುವುದೂ ಸಾಧ್ಯವಿಲ್ಲವೆಂಬುದನ್ನು ರಾಜ್ಯಗಳು ಅರ್ಥಮಾಡಿಕೊಂಡು ಬರಲಿರುವ ಪರಿಹಾರ ಮೊತ್ತವನ್ನು ಆಧರಿಸಿ ತಮ್ಮ ವೆಚ್ಚದ ಯೋಜನೆಯನ್ನು ರೂಪಿಸುವುದನ್ನೂ ಸಹ ಬಿಡಬೇಕಿರುತ್ತದೆ. ಹೀಗಾಗಿ ರಾಜ್ಯಗಳು ತಮ್ಮದೇ ಆದ ತೆರಿಗೆ ಹಾಗೂ ತೆರಿಗೆಯೇತರ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಬೇಕಾಗಿರುತ್ತದೆ. ಅಥವಾ ತಮ್ಮ ಅನುತ್ಪಾದಕ ವೆಚ್ಚಗಳ ಮೇಲೆ ನಿಯಂತ್ರವನ್ನು ಸಾಧಿಸಿ ವಿತ್ತೀಯ ದೃಢೀಕರಣದ ಹಾದಿಯನ್ನು ಹಿಡಿಯಬೇಕಿರುತ್ತದೆ. ದಹೀಗಾಗಿ ಪರಿಹಾರ ಅವಧಿಯ ನಂತರದಲ್ಲಿ ಎದುರಾಗಬಹುದಾದ ಯಾವುದೇ ವಿತ್ತೀಯ ಆಘಾತವನ್ನು ಎದುರಿಸಲು ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳುವುದಕ್ಕೆ ರಾಜ್ಯಗಳು ಈ ಅವಧಿಯನ್ನು ಬಳಸಿಕೊಳ್ಳಬಹುದು.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




