ಭಾರತದ ಆರ್ಥಿಕತೆಯನ್ನು ಕುರಿತಂತೆ ಸೆಪ್ಟೆಂಬರ್ 22 2019 ರಂದು ಪ್ರಧಾನಮಂತ್ರಿಯವರು ಅಮೇರಿಕೆಯಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ “ಎಲ್ಲವೂ ಸೊಗಸಾಗಿದೆ” ಎಂದು ಘೋಷಿಸಿದರು. ಈ ಮಾತು ಭಾರತದ ಆರ್ಥಿಕತೆಯನ್ನು ಕುರಿತಂತೆ ಸರ್ಕಾರದ ನಿಲುವನ್ನು ನಿಖರವಾಗಿ ಪ್ರತಿ ಧ್ವನಿಸುತ್ತದೆ. ಸರ್ಕಾರದ ವಿವಿಧ ಅಧಿಕಾರಿಗಳು ಇದೇ ಅಂಶವನ್ನು ಇನ್ನಷ್ಟು ಸವಿಸ್ತಾರವಾಗಿ ವಿವರಿಸುತ್ತಾ ಭಾರತದ ಆರ್ಥಿಕತೆಯನ್ನು ಕುರಿತಂತೆ ಸರ್ಕಾರದ ಅಧಿಕೃತ ನಿಲುವನ್ನು ರೂಪಿಸಿದ್ದಾರೆ. ಸರ್ಕಾರದ ಈ ಕಥನದ ವಿವರಗಳು ಈಗ ಎಲ್ಲರಿಗೂ ಸ್ಪಷ್ಟವಾಗಿದೆ. ಮತ್ತೆ ನೆನಪಿಗೆ ತಂದುಕೊಳ್ಳುವುದಕ್ಕೆ ನೆರವಾಗಲಿ ಅಂತ ಮತ್ತೆ ಇಲ್ಲಿ ಸಂಕ್ಷಿಪ್ತವಾಗಿ ಹೇಳುತ್ತಿದ್ದೇನೆ.

ಪ್ರೋನಬ್ ಸೆನ್ ಅವರು ಭಾರತದ ಪ್ರಸಿದ್ಧ ಅಂಕಿಶಾಸ್ತ್ರಜ್ಞರು ಹಾಗೂ ಆರ್ಥಿಕ ತಜ್ಞರು. ಅವರು ಭಾರತದ ಯೋಜನಾ ಆಯೋಗದಲ್ಲಿ (Planning Commission) ಮುಖ್ಯ ಅಂಕಿಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದು, ದೇಶದ ಆರ್ಥಿಕ ನೀತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಂಕಿ–ಅಂಶಗಳ ವಿಶ್ಲೇಷಣೆ, ಆರ್ಥಿಕ ಅಭಿವೃದ್ಧಿ ಹಾಗೂ ಸಾರ್ವಜನಿಕ ನೀತಿಗಳ ಕುರಿತಾಗಿ ಅವರ ಕೊಡುಗೆ ವಿಶಿಷ್ಟವಾಗಿದೆ. ಭಾರತದ ಅಂಕಿಶಾಸ್ತ್ರ ಕ್ಷೇತ್ರದಲ್ಲಿ ಅವರ ಹೆಸರು ಗೌರವದಿಂದ ಉಲ್ಲೇಖಿಸಲಾಗುತ್ತದೆ.
ಕೆಲವು ಪ್ರಮುಖ ಅಂಶಗಳನ್ನು ಹೀಗೆ ಪಟ್ಟಿಮಾಡಬಹುದು.
- ಭಾರತದ ಆರ್ಥಿಕತೆಯಲ್ಲಿ ಸಧ್ಯಕ್ಕೆ ಸ್ವಲ್ಪ ಹಿನ್ನೆಡೆ ಕಾಣುತ್ತಿದೆ. ಆದರೆ ಅದು ಹಿಂಜರಿತ ಅಲ್ಲ. ಜಗತ್ತಿನಲ್ಲಿ ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ.
- ಬೆಳವಣಿಗೆಯ ಇಳಿಕೆ ಕೇವಲ ಆವರ್ತೀನಿಯವಾದದ್ದು (ಸೈಕ್ಲಿಕಲ್), ಒಮ್ಮೆ ಹೂಡಿಕೆ ಸುಧಾರಿಸಿದರೆ ಅದು ತನ್ನಷ್ಟಕ್ಕೆ ಸರಿಹೋಗುತ್ತದೆ.
- ಕೃಷಿ ಬೆಲೆ ಕಡಿಮೆಯಾಗುತ್ತಿರುವುದು ನಿಜ, ಆದರೆ ಅದಕ್ಕೆ ರೈತರು ನಮಗೆ ಬಳಸುವುದಕ್ಕೆ ಬೇಕಾದಕ್ಕಿಂತ ಹೆಚ್ಚು ಬೆಳೆಯುತ್ತಿರುವುದು ಕಾರಣ.
- ನಗದು ಅಮಾನ್ಯೀಕರಣ ಹಾಗೂ ಜಿಎಸ್ಟಿಯಿಂದ ಆರ್ಥಿಕತೆಯ ಎಲ್ಲವೂ ಕಾನೂನಿನ ಚೌಕಟ್ಟಿನೊಳಗೆ ಬಂದಿದೆ. ತೆರಿಗೆದಾರರ ಸಂಖ್ಯೆಯೂ ಹೆಚ್ಚಾಗಿದೆ.
- ಹಣಕಾಸು ಕ್ಷೇತ್ರ ಸ್ವಲ್ಪ ತೊಂದರೆಯಲ್ಲಿದೆ. ಅದಕ್ಕೆ ಯುಪಿಎ ಸರ್ಕಾರ ಕಾರಣ. ಅವರು ನಿರ್ಲಕ್ಷ್ಯದಿಂದ ಸಾಲಕೊಟ್ಟಿದ್ದರಿಂದ ಈ ಸ್ಥಿತಿ ಬಂದಿದೆ. ಆದರೆ ಬಂಡವಾಳದ ಮರುಹೂಡಿಕೆಯ ಪ್ರಕ್ರಿಯೆಯಿಂದ ನಮ್ಮ ಆರ್ಥಿಕತೆ ಮತ್ತೆ ಪುಟಿದೇಳುತ್ತದೆ.
- ವಿದೇಶಿಯರು ಭಾರತದಲ್ಲಿ ಹಣವನ್ನು ದೊಡ್ಡ ಪ್ರಮಾಣದಲ್ಲಿ ಹೂಡುತ್ತಿದ್ದಾರೆ. ಅದು ವಿದೇಶಿ ಸಾಂಸ್ಥಿಕ ಹೂಡಿಕೆ ಎಫ್ಐಐ ಮತ್ತು ವಿದೇಶಿ ನೇರ ಹೂಡಿಕೆ ಹರಿವನ್ನು ನೋಡಿದರೆ ಸ್ಪಷ್ಟವಾಗುತ್ತದೆ
- ನಮ್ಮ ಆರ್ಥಿಕ ಮೂಲಭೂತ ಸೂಚಿಗಳು ಬಲವಾಗಿಯೇ ಇವೆ:
- a) ಹಣದುಬ್ಬರ ನಿಯಂತ್ರಣದಲ್ಲಿದೆ
- b) ಚಾಲ್ತಿ ಅಕೌಂಟ್ ಬ್ಯಾಲೆನ್ಸ್ ನಿಯಂತ್ರಣದಲ್ಲಿದೆ
- c) ಕೇಂದ್ರದ ವಿತ್ತೀಯ ಕೊರತೆ ನಿಯಂತ್ರಣದಲ್ಲಿದೆ
- d) ಸ್ಟಾಕ್ ಮಾರುಕಟ್ಟೆ ಅರಳುತ್ತಿದೆ
ಹೀಗೆ ಪಟ್ಟಿಯನ್ನು ಬೆಳಸುತ್ತಾ ಹೋಗಬಹುದು. ಮೊದಲಿಗೆ ಇಷ್ಟು ಸಾಕು ಅನ್ನಿಸುತ್ತದೆ. ಇದಕ್ಕೆ ವ್ಯತಿರಕ್ತಿವಾಗಿ ಭಾರತದ ಅರ್ಥಶಾಸ್ತ್ರಜ್ಙರ ಸಮುದಾಯವು ಬಹುಪಾಲು ಒಪ್ಪಿಕೊಂಡಿರುವ ನಿಲುವ ಇದೆ. ಅದನ್ನು ಒಟ್ಟಾರೆಯಾಗಿ ಹೀಗೆ ಪಟ್ಟಿಮಾಡಬಹುದು:
- 1. ಭಾರತದ ಬೆಳವಣಿಗೆಯ ಕಥೆ ಛಿದ್ರವಾಗಿದೆ. ನಮ್ಮ ನೆರೆಹೊರೆಯ ಎಷ್ಟೋ ದೇಶಗಳ (ಉದಾಹರಣೆಗೆ ವಿಯೆಟ್ನಾಂ ಮತ್ತು ಬಂಗ್ಲಾದ್ತೇಶ) ಸ್ಥಿತಿ ನಮಗಿಂತ ಉತ್ತಮವಾಗಿದೆ.
- 2. ಆರ್ಥಿಕತೆಯ ಹಿನ್ನಡೆ ಪ್ರಮುಖವಾಗಿ ರಾಚನಿಕವಾದದ್ದು. ಸರ್ಕಾರ ಬೇಡಿಕೆಯನ್ನು ಪನರ್ ಚೇತನಗೊಳಿಸುವುದಕ್ಕೆ ಸೂಕ್ತ ಕ್ರಮ ತೆಗೆದುಕೊಳಬೇಕು. ಅದು ತನ್ನಷ್ಟಕ್ಕೆ ಸರಿಹೋಗುವ ಸೈಕ್ಲಿಕಲ್ ಸಮಸ್ಯೆ ಅಲ್ಲ.
- 3. ಗ್ರಾಮೀಣ ಪರಿಸ್ಥಿತಿ ಗಂಭೀರವಾಗಿದೆ. ಮತ್ತು ಸ್ಪಷ್ಟವಾಗಿ ಕಾಣಿಸುತ್ತಿದೆ. ರೈತರು ಪದೇ ಪದೇ ಚಳುವಳಿ ಮಾಡುತ್ತಿದ್ದಾರೆ. ಗ್ರಾಮೀಣ ಕೃಷಿಯೇತರ ಉದ್ಯೋಗ ಕೂಡ ಕಡಿಮೆಯಾಗುತ್ತಿದೆ.
- 4. 2017-18 ರಲ್ಲಿ ನಿರುದ್ಯೋಗ ಶೇಕಡ 6.1ರಷ್ಟು ಇದೆ. ಅದು ಕಳೆದ 40ವರ್ಷಗಳಲ್ಲೇ ಅತಿ ಹೆಚ್ಚು. ಯುವಕರ (15-29 ವಯಸ್ಸಿನ) ನಿರುದ್ಯೋಗ ಸುಮಾರಾಗಿ ಶೇಕಡ 20ರಷ್ಟಿದೆ. ನೈಜ ಕೂಲಿ ಕಳೆದ ಮೂರುವರ್ಷಗಳಲ್ಲಿ ಕುಸಿದಿದೆ.
- 5. ಜನರು ತಮ್ಮ ಬಳಕೆಗಾಗಿ ಮಾಡುತ್ತಿರುವ ತಲಾ ಖರ್ಚು ಮೊಟ್ಟಮೊದಲ ಬಾರಿಗೆ 2017-18ರಲ್ಲಿ ಕಡಿಮೆಯಾಗಿದೆ. ಹಿಂದೆಂದೂ ಹೀಗಾಗಿರಲಿಲ್ಲ. ಆಹಾರದ ಬಳಕೆಯಲ್ಲೂ ಇಳಿಕೆಯನ್ನು ಕಾಣಬಹುದು.
- 6. ಹಣಕಾಸಿನ ಕ್ಷೇತ್ರ ತೀವ್ರವಾಗಿ ಬಳಲಿದೆ. ಲಿಕ್ವಡಿಟಿಯನ್ನು ಹೆಚ್ಚಿಸುವುದ ರಿಂದಾಗಲಿ ಅಥವಾ ಮರುಹೂರಣದಿಂದಾಗಲಿ ಪರಿಸ್ಥಿತಿಯನ್ನು ಸುಧಾರಿಸಲು ಸಧ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ.
ಈ ಎರಡೂ ಸಂಪೂರ್ಣ ವಿಭಿನ್ನ ಕಥನಗಳು. ಸಂಪೂರ್ಣ ಭಿನ್ನವಾದ ಈ ನಿಲುವುಗಳನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಸರ್ಕಾರ ಅರ್ಥಶಾಸ್ತ್ರಜ್ಙರ ಕಥನವನ್ನು ಅಲ್ಲಗೆಳೆಯುತ್ತಿದೆ. ಅದಕ್ಕಾಗಿ ಸರ್ಕಾರ ಅರ್ಥಶಾಸ್ತ್ರಜ್ಙರು ಬಳಸುತ್ತಿರುವ ಅಂಕಿ ಅಂಶಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ವಿಶೇಷವಾಗಿ ಉದ್ಯೋಗ ಮತ್ತು ಬಳಕೆಗೆ ಸಂಬಂಧಿಸಿದ ಅಂಕಿ ಅಂಶಗಳು ಸರ್ಕಾರದ ಕೋಪಕ್ಕೆ ಗುರಿಯಾಗಿವೆ. ಆದರೆ ಅದೃಷ್ಟವಶಾತ್ ಸಂಖ್ಯಾಶಾಸ್ತ್ರೀಯ ವ್ಯವಸ್ಥೆಯೊಳಗಿನ ಕೆಲವು ಶಕ್ತಿಗಳೇ ಅವುಗಳಲ್ಲಿ ಕೆಲವು ಅಂಶಗಳನ್ನು ಭಹಿರಂಗಗೊಳಿಸಿವೆ. ಹಾಗಾಗಿ ನಮಗೆ ಅರ್ಥಶಾಸ್ತ್ರಜ್ಙರಿಗೆ, ಸಾರ್ವಜನಿಕರಿಗೆ ಒಂದಿಷ್ಟು ಅಂಕಿಅಂಶಗಳು ಸಿಕ್ಕಿವೆ. ಈಗ ಸರ್ಕಾರ ಅಂಕಿ ಅಂಶದ ಮೂಲವನ್ನು ಪ್ರಶ್ನಿಸುತ್ತಿದೆ. ಮತ್ತು ಅದರ ಗುಣಮಟ್ಟವನ್ನು ದೂಷಿಸುತ್ತಿದೆ. ಆದರೆ ತಮಾಷೆ ಅಂದರೆ ಈ ಅಂಕಿ ಅಂಶಗಳು ಸ್ವತಃ ಸರ್ಕಾರದ್ದೆ. ಅಷ್ಟೇ ಅಲ್ಲ ಸರ್ಕಾರ ಈ ಅಂಕಿಅಂಶಗಳ ಮೌಲ್ಯವನ್ನು ಅಲ್ಲಗೆಳೆಯುವ ಉದ್ದೇಶದಿಂದ ನೇಮಕಮಾಡಿಕೊಂಡ ಪರಿಣತರೇ ಅಂಕಿ ಅಂಶಗಳ ಸತ್ಯತೆಯನ್ನು ಅಲ್ಲಗೆಳೆಯುವುದಕ್ಕೆ ಬಲವಾಗಿ ವಿರೋಧಿಸಿದ್ದಾರೆ. ಇದನ್ನು ಹೊರತುಪಡಿಸಿ ಸರ್ಕಾರದ ಉಳಿದ ಭಿನ್ನಾಭಿಪ್ರಾಯಗಳು ಕೇವಲ “ವ್ಯಾಖ್ಯಾನ”ದಲ್ಲಿ ಇರುವ ವ್ಯತ್ಯಾಸಗಳು.
ಈಗ ಅವನ್ನು ಗಮನಿಸೋಣ.
ದೇಶದ ಬೃಹತ್ ಆರ್ಥಿಕ ಅಂಶಗಳು ಚೆನ್ನಾಗಿಯೇ ಇದೆ. ಅದರಲ್ಲಿ ಸಮಸ್ಯೆಗಳೇನೂ ಇಲ್ಲ ಅಂತ ಸರ್ಕಾರ ಹೇಳುತ್ತಿದೆ. ಇದು ಮೇಲ್ನೋಟಕ್ಕೆ ಸರಿ ಅಂತಲೇ ಅನ್ನಿಸುತ್ತದೆ. ಸ್ವಲ್ಪ ಆಳಕ್ಕೆ ಕೆದಕಿ ನೋಡಿದರೆ ಸರ್ಕಾರ ಹೇಳುವ ಅಂಶಗಳು ಸಾಮರ್ಥ್ಯಕ್ಕಿಂತ ಹೆಚ್ಚಾಗಿ ದೌರ್ಭಲ್ಯವಾಗಿಯೇ ತೋರುತ್ತದೆ.
ಹಣದುಬ್ಬರ ಕಡಿಮೆ ಇದೆ ಮತ್ತು ಅದು ಇಳಿಯುತ್ತಿದೆ ಅನ್ನುವುದು ಒಂದು ಅಂತಹ ವಾದ. ಇದು ನಿಜ. ಇದಕ್ಕೆ ಕಾರಣವನ್ನು ಗಮನಿಸಿದರೆ ಪ್ರಾರಂಭದಲ್ಲಿ ಆಹಾರದ ಬೆಲೆ ಕಡಿಮೆ ಇತ್ತು, ಅವುಗಳ ಹಣದುಬ್ಬರದ ದರ ಋಣಾತ್ಮಕವಾಗಿಯೂ ಇತ್ತು. ಹೀಗೆ ಆಹಾರ ಪದಾರ್ಥಗಳ ಬೆಲೆ ಕಡಿಮೆ ಆಗಿರುವುದೇ ಇಂದಿನ ಗ್ರಾಮೀಣ ಅರ್ಥಿಕ ಬಿಕ್ಕಟ್ಟಿಗೆ ನಿಜವಾದ ಕಾರಣ (ಬೆಲೆ ಕಡಿಮೆ ಇರುವುದರಿಂದ ಅವರ ವರಮಾನ ಕಡಿಮೆಯಾಗಿದೆ. ಅದರಿಂದ ಅವರ ಕೊಳ್ಳುವ ಶಕ್ತಿ ಕಡಿಮೆಯಾಗಿದೆ: ಅನುವಾದಕ.) ಇದನ್ನು ಸರ್ಕಾರವೂ ಒಪ್ಪುತ್ತದೆ.

ಜೊತೆಗೆ ಆಹಾರ ಪದಾರ್ಥಗಳ ಬೆಲೆ ಕಡಿಮೆ ಇರುವುದಕ್ಕೆ ಕಾರಣ ಸರ್ಕಾರ ಹೇಳುವಂತೆ ಬೇಕಾದ್ದಕ್ಕಿಂತ ರೈತರು ಹೆಚ್ಚು ಬೆಳೆಯುತ್ತಿದ್ದಾರೆ ಅನ್ನುವುದು ಖಂಡಿತಾ ಕಾರಣವಲ್ಲ. ದೇಶದಲ್ಲಿ ಒಟ್ಟಾರೆ ಲಭ್ಯ ಇರವು ಆಹಾರದ ಪ್ರಮಾಣವನ್ನು ಗಣನಗೆಗೆ ತೆಗದುಕೊಂಡರೆ ಭಾರತ ಜಗತ್ತಿನಲ್ಲಿ 162ನೇ ಸ್ಥಾನದಲ್ಲಿದೆ. ಇದನ್ನು ಜಾಗತಿಕ ಆಹಾರ ಕಾರ್ಯಕ್ರಮದ ವರದಿಯಲ್ಲಿ ನೋಡಬಹುದು. ಸರಳವಾದ ಸತ್ಯ ಅಂದರೆ ಬಡವರಿಗೆ ತಮಗೆ ಬೇಕಾದ ಆಹಾರವನ್ನು ಕೊಳ್ಳುವುದಕ್ಕೆ ಆಗುತ್ತಿಲ್ಲ. ಅಷ್ಟೇ ಅಲ್ಲ ಇತ್ತೀಚಿನ ವರ್ಷಗಳಲ್ಲಿ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ. ಇತ್ತೀಚೆಗೆ ಆಹಾರೇತರ ವಸ್ತುಗಳ ಬೆಲೆಯೂ ಕಡಿಮೆಯಾಗುತ್ತಿದೆ. ಅದರರ್ಥ ಅವುಗಳ ಉತ್ಪಾದಕತ್ವ ಹೆಚ್ಚಿದೆ ಅಂತ ಅಲ್ಲ. ಅವುಗಳಿಗಿರುವ ಬೇಡಿಕೆ ಕುಸಿದಿದೆ. ಹಾಗಾಗಿ ಅವುಗಳ ಬೆಲೆ ಕಡಿಮೆಯಾಗಿದೆ. ಆರ್ಬಿಐ ಗಮನಿಸಿರುವಂತೆ 2019ರಲ್ಲಿ ಭಾರತದ ಕೈಗಾರಿಕೆಗಳ ಬಳಕೆಯ ಸಾಮರ್ಥ್ಯ ಶೇಕಡ 68ಕ್ಕೆ ಕುಸಿದಿದೆ. ಇದು ಹಿಂದೆಂದೂ ಹೀಗಾಗಿರಲಿಲ್ಲ. ಭಾರತೀಯ ಕೈಗಾರಿಕೆಯ ದೊಡ್ಡ ಹಿಂಡೇ ಹಿಂಜರಿಕೆಯ ಹಾದಿಯಲ್ಲಿದೆ. ಚಾಲ್ತಿ ಲೆಕ್ಕದ ಕೊರತೆಯು ಇದೇ ಕಥೆಯನ್ನು ಹೇಳುತ್ತದೆ. ನಿಜ ಹೇಳಬೇಕೆಂದರೆ ಅದು ಇಳಿಯುತ್ತಿದೆ. ನಮ್ಮ ರಫ್ತು ಹೆಚ್ಚುತ್ತಿದೆ ಅಂತ ಅಲ್ಲ. ಕಳೆದ ಆರು ವರ್ಷಗಳಿಂದ ರಫ್ತು ಅಷ್ಟೇ ಇದೆ. ಇನ್ನೂ ದುರಂತ ಅಂದರೆ ಕಳೆದ ಮೂರು ತಿಂಗಳಿನಲ್ಲಿ ನಿಜವಾಗಿ ಇಳಿದಿದೆ. ಆದರೆ ಆಮದು ಅದಕ್ಕಿಂತ ವೇಗವಾಗಿ ಇಳಿದಿದೆ. ಕಡಿಮೆಯಾದ ಆಮದಿನ ಜಾಗವನ್ನು ಸ್ಥಳೀಯ ಉತ್ಪಾಧನೆ ಆಕ್ರಮಿಸಿಕೊಂಡಿದ್ದರೆ ಒಳ್ಳೆಯದಿತ್ತು. ಆದರೆ ಕೈಗಾರಿಕ ಉತ್ಪನ್ನಕ್ಕೆ ಸಂಬಂಧಿಸಿದ ಅಂಕಿ ಅಂಶ ಗಮನಿಸಿದರೆ ಹೀಗೆ ಆಗಿಲ್ಲ ಅನ್ನುವುದು ತಿಳಿಯುತ್ತದೆ. ತೀರ್ಮಾನ ಸ್ಪಷ್ಟ. ದೇಶಿಯ ಬೇಡಿಕೆಯಲ್ಲಿ ಕೊರತೆಯಾಗುತ್ತಿದೆ ಅನ್ನುವುದಕ್ಕೆ ಇದು ಮತ್ತೊಂದು ಸೂಚಿ ಅಷ್ಟೆ.
ವಿತ್ತೀಯ ಕೊರತೆ ಜಿಡಿಪಿಯ ಶೇಕಡ 3.5ರಷ್ಟು ಇದೆ ಅಂತ ಸರ್ಕಾರ ಹೇಳುತ್ತಿದೆ. ಇದು ನಿಜವಾಗಿಯೂ ಕಡಿಮೆಯೆ. ಆದರೆ ದುರಾದೃಷ್ಟ ಅಂದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ. ಸಿಎಜಿ- ಕಂಟ್ರೋಲರ್ ಅಂಡ್ ಅಕೌಂಟ್ ಜೆನರಲ್ ಆಫ್ ಇಂಡಿಯಾ ಅವರ ವರದಿ “ನಿಜ”ವಾದರೆ, 2017-18ರ ನಿಜವಾದ ವಿತ್ತೀಯ ಕೊರತೆ ಶೇಕಡ 3.5 ಅಲ್ಲ. ಅದು ನಿಜವಾಗಿ ಶೇಕಡ 5.8 ನಂತರದ ವರ್ಷಗಳ ವಿಷಯದಲ್ಲೂ ಇದೇ ಸತ್ಯ ಅನ್ನಿಸುತ್ತದೆ. ಹಾಗಾದರೆ ಏನಾಗುತ್ತಿದೆ? ಸರಳವಾಗಿ ಹೇಳಬೇಕೆಂದರೆ ಸರ್ಕಾರ ತನ್ನ ಬಿಲ್ಲುಗಳನ್ನು ಪಾವತಿಸುತ್ತಿಲ್ಲ. ಸರ್ಕಾರದ ಲೆಕ್ಕವನ್ನು ನಗದಿನ ಅದಾರದ ಮೇಲೆ ಲೆಕ್ಕ ಹಾಕುವುದರಿಂದ, ಬಿಲ್ಲು ಪಾವತಿಯಾಗಿಲ್ಲ ಅಂದರೆ ಸರ್ಕಾರ ವೆಚ್ಚ ಮಾಡಿಲ್ಲ ಅಂತಲೇ ಭಾವಿಸಲಾಗುತ್ತದೆ. ಅಂದರೆ ಅದರ ವೆಚ್ಚದ ಬಾಬ್ತು ಕಡಿಮೆಯಾಗುತ್ತದೆ. ಸರ್ಕಾರ ಹಾಗೂ ಆಯವ್ಯಯದ ಸಂಖ್ಯೆಗಳ ದೃಷ್ಟಿಯಿಂದ ಇದು ಸರಿ, ಆದರೆ ಹಣ ಪಡೆಯಬೇಕಾದವರ ಕಥೆ ಏನು? ರಾಜ್ಯಗಳು, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು, ಪೂರೈಕೆ ದಾರರು, ವ್ಯಾಪಾರಿಗಳು, ಸಬ್ಸಿಡಿ ಸಿಗಬೇಕಾದವರು ಮೊದಲಾದವರ ಕಥೆ? ಅವರ ಬಜೆಟ್ ಚಿಂದಿಯಾಗುತ್ತದೆ. ಕೇಂದ್ರ ಸರ್ಕಾರ ತನ್ನ ಸ್ವಂತ ಲೆಕ್ಕದ ಕೊರತೆಯನ್ನು ಉಳಿದವರ ಬ್ಯಾಲೆನ್ಸ್ ಷೀಟಿಗೆ ವರ್ಗಾಯಿಸಿದೆ. ಈ ಉಳಿದವರಿಗೆ ತಮಗೆ ಬಿದ್ದ ಕೊರತೆಗೆ ಹಣ ಹೊಂದಿಸಿಕೊಳ್ಳುವುದು ಕೇಂದ್ರ ಸರ್ಕಾರಕ್ಕಿಂತ ಕಷ್ಟ.

ಹಾಗಾದರೆ ಸ್ಟಾಕ್ ಮಾರುಕಟ್ಟೆ ಏರುತ್ತಿದೆಯಲ್ಲ? ಅದು ನಮ್ಮ ಕೈಗಾರಿಕೆಯ ಮೂಲಭೂತ ಸಾಮರ್ಥ್ಯವನ್ನು ಬಿಂಬಿಸುತ್ತಿಲ್ಲವೇ? ಇಲ್ಲ. ಸ್ಟಾಕ್ ಮಾರುಕಟ್ಟೆಯಲ್ಲಿ ಬರುವುದು ಕೇವಲ 4000 ಪಟ್ಟಿಮಾಡಿದ ಕಂಪೆನಿಗಳು ಮಾತ್ರ. ಆದರೆ ಕಾರ್ಪೋರೇಟ್ ವ್ಯವಹಾರದ ಮಂತ್ರಾಲಯದಲ್ಲಿ 1.3 ಮಿಲಿಯನ್ ಸಕ್ರಿಯವಾದ ಕಂಪೆನಿಗಳು ನೊಂದಾಯಿತವಾಗಿದೆ. ಹಾಗೆಯೇ 60 ಮಿಲಿಯನ್ನಿಗೂ ಹೆಚ್ಚು ನೊಂದಾಯಿತವಾಗಿ ಕೃಷಿಯೇತರ ಉದ್ದಿಮೆಗಳಿವೆ. ಹಾಗಾಗಿ ದೊಡ್ಡ ದೊಡ್ಡ ಕಾರ್ಪೊರೇಟುಗಳು ಸುಸ್ಥಿತಿಯಲ್ಲೇ ಇರಬಹುದು. ಆದರೆ ಉಳಿದ ಉದ್ದಿಮೆಗಳು ಅಷ್ಟೇ ತೀವ್ರವಾದ ಸಂಕಷ್ಟದಲ್ಲಿರಬಹುದು. ಎರಡನೆಯದಾಗಿ ಭಾರತೀಯ ಸ್ಟಾಕ್ ಮಾರುಕಟ್ಟೆಯಲ್ಲಿ ಎಫ್ಐಐ, ಸಂಬಂಧಪಟ್ಟ ಕಂಪೆನಿಗಳ ಸಾಪೇಕ್ಷವಾದ ಸಾಧನೆಯನ್ನು ನೊಡಿ ಏನೂ ಹಣ ಹೂಡುತ್ತಿಲ್ಲ. ಬದಲಾಗಿ ಅವುಗಳ ಜೊತೆಯ ಜಾಗತಿಕ ಕಾರ್ಪೋರೇಟ್ ಸಾಪೇಕ್ಷವಾದ ಸಾಧನೆಯನ್ನು ಆಧರಿಸಿ ಹಣ ಹೂಡುತ್ತವೆ.
ಅಂತಿಮವಾಗಿ ಕಳೆದ ಸುಮಾರು ಒಂದು ವರ್ಷದಲ್ಲಿ ಆರ್ಬಿಐ ಆರ್ಥಿಕತೆಗೆ ಅಪಾರ ಪ್ರಮಾಣದ ದ್ರವ್ಯತೆಯನ್ನು ತುಂಬಿದೆ. ತೀವ್ರವಾದ ಮುಕ್ತ ಮಾರುಕಟ್ಟೆಯ ಕಾರ್ಯಾಚರಣೆಯ ಮೂಲಕ ಹಣ ಹೂಡಿದೆ. ಆದರೆ ಇದರಲ್ಲಿ ಬಹುಪಾಲು ಹಣ ಸಟ್ಟಾ ವ್ಯಾಪಾರದಲ್ಲಿ ಬಳಕೆಯಾಗಿವೆ. ಬ್ಯಾಂಕುಗಳಿಗೆ ಹಾಗೂ ಬ್ಯಾಂಕೇತರ ವಿತ್ತೀಯ ಕಂಪೆನಿಗಳಿಗೆ ಹೂಡಿಕೆಗೆ ಹಣಕಾಸು ಕೊಡುವುದಕ್ಕೆ ಹಣ ಸಿಕ್ಕಿಲ್ಲ. ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡುವುದು ಸ್ಥಿರವಾದ ಹೂಡಿಕೆಯಲ್ಲ. ಕೇವಲ ಒಡೆದುಹೋಗುವ ಗುಳ್ಳೆಗಳಷ್ಟೇ ಆಗಬಹುದು. ಅದನ್ನು ನೋಡಿ ಕಾರ್ಪೋರೇಟ್ ಭಾರತದ ಸಾಮರ್ಥ್ಯವನ್ನು ಅಳೆಯುವುದಕ್ಕೆ ಸಾಧ್ಯವಿಲ್ಲ.
ಇದು ಕೇವಲ ಸಾರ್ವಜನಿಕರ ಮುಂದೆ ತೋರಿಸಿಕೊಳ್ಳುವುದಕ್ಕಾಗಿ ಸರ್ಕಾರ ತೆಗೆದುಕೊಂಡಿರುವ ನಿಲುವಾಗಿದ್ದರೆ ಪರವಾಗಿರಲಿಲ್ಲ. ಅಂತಹ ಸಮಸ್ಯೆ ಇರಲಿಲ್ಲ. ಆದರೆ ಸರ್ಕಾರ ಈ ನಿಲುವನ್ನು ಆಧರಿಸಿಯೇ ಆರ್ಥಿಕ ಹಿನ್ನಡೆಗೆ ನೀತಿಯನ್ನು ರೂಪಿಸಿಕೊಳ್ಳುತ್ತಿದೆ. ಮತ್ತೊಂದು ನಿಲುವನ್ನು ಪರಿಗಣನೆಗೆ ತೆಗೆದುಕೊಂಡೇ ಇಲ್ಲ. ಹಾಗಾಗಿ ಅವುಗಳ ಕ್ರಮಗಳೆಲ್ಲಾ ಕಾರ್ಪೋರೇಟ್ ತೆರಿಗೆ ಕಡಿತ, ಬಡ್ಡಿದರದ ಕಡಿತ, ದ್ರವ್ಯತೆಯ ಹೆಚ್ಚಳ ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮತ್ತು ಈ ಮೂಲಕ ಮರುಹೂಡಿಕೆಯನ್ನು ಹೆಚ್ಚಿಸುವ ಕಡೆಯೇ ತನ್ನೆಲ್ಲ ಲಕ್ಷ್ಯವನ್ನು ಕೇಂದ್ರಿಕರಿಸಿದೆ. ಬಳಕೆದಾರರ ಬೇಡಿಕೆ ಹೆಚ್ಚಬೇಕು. ಇಲ್ಲದೇ ಹೋದರೆ ಹೂಡಿಕೆ ಸುಧಾರಿಸುವುದಿಲ್ಲ ಅನ್ನುವ ಅಂಶವನ್ನು ಸಂಪೂರ್ಣವಾಗಿ ಕಡೆಗಣಿಸಿದೆ.

ಆರ್ಥಿಕತೆಯ ಕುರಿತು, ಅರ್ಥಶಾಸ್ತ್ರದ ಕುರಿತು ಮತ್ತು ಈ ವಿಷಯದಲ್ಲಿ ಜಗತ್ತಿನಲ್ಲಿ ನಡೆಯುವ ಹಲವಾರು ವಿದ್ಯಮಾನಗಳ ಕುರಿತು ಈದಿನ.ಕಾಮ್ನಲ್ಲಿ ಪ್ರಕಟವಾಗುತ್ತಿರುವ ಈ ಬರೆಹಗಳು ಮೂಲದಲ್ಲಿ ಡಾ.ಟಿ.ಎಸ್.ವೇಣುಗೋಪಾಲ್ ಮತ್ತು ಡಾ.ಶೈಲಜಾ ಅವರು ಹೊರತರುತ್ತಿರುವ ʼಅರ್ಥʼ ಎಂಬ ಇ-ಮ್ಯಾಗಜೀನ್ನಲ್ಲಿ ಪ್ರಕಟವಾದಂಥವು. ಇವುಗಳನ್ನು ನಮ್ಮಲ್ಲಿ ಪ್ರಕಟಿಸಲು ಅನುಮತಿ ಕೊಟ್ಟಿರುವ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಮೂಲ ಲೇಖನಗಳ ಜೊತೆಗೆ ಅವರ ಕೆಲವು ಪುಸ್ತಕಗಳನ್ನು ನೇರವಾಗಿ ಓದಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ.




