ಬೆಂಗಳೂರಿನಲ್ಲಿ ಬಗೆಹರಿಯದೇ ಉಳಿದಿರುವ ಅತೀ ಮುಖ್ಯ ಸಮಸ್ಯೆಗಳಲ್ಲಿ ಸಂಚಾರ ದಟ್ಟಣೆ (ಟ್ರಾಫಿಕ್) ಕೂಡ ಒಂದು. ನಿಧಾನ ಗತಿಯ ಚಾಲನೆ, ಹೆಜ್ಜೆ-ಹೆಜ್ಜೆಗೂ ಬ್ರೇಕ್ ಹಾಕುವುದು ಹಾಗೂ ಕಡಿಮೆ ಅಂತರದ ಸಿಗ್ನಲ್ಗಳು ವಾಹನ ಸವಾರರ ಸಹನೆಯನ್ನು ಪರೀಕ್ಷಿಸುತ್ತಿವೆ. ವಾಹನ ಸವಾರರು ಚಾಲನೆ ಮತ್ತು ಸಿಗ್ನಲ್ನಲ್ಲಿಯೇ ತಮ್ಮ ಗಮನಾರ್ಹ ಸಮಯವನ್ನು ವ್ಯಯಿಸುತ್ತಿದ್ದಾರೆ. ಈ ಸಂಚಾರ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡಿರುವ ಪ್ರಯಾಣಿಕರೊಬ್ಬರು, ‘ಬೆಂಗಳೂರಿನ 18 ಕಿ.ಮೀ. ಪ್ರಯಾಣವು ಮುಂಬೈ-ಪುಣೆ ನಡುವಿನ 120 ಕಿ.ಮೀ. ಪ್ರಯಾಣಕ್ಕೆ ಸಮ’ ಎಂದು ಹೇಳಿದ್ದಾರೆ.
‘ಎಕ್ಸ್’ನಲ್ಲಿ ರಾಜೀನ್ ಮಂತ್ರಿ ಎಂಬ ಹೆಸರಿನ ಖಾತೆ ಹೊಂದಿರುವ ನೆಟ್ಟಿಗರೊಬ್ಬರು ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಬಗ್ಗೆ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಟ್ರಾಫಿಕ್, ಸಂಚಾರ ಸಮಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸಂಚರಿಸುವುದು ಬಹುದೂರದ ಎರಡು ನಗರಗಳ ನಡುವಿನ ಪ್ರಯಾಣಕ್ಕಿಂತ ತ್ರಾಸದಾಯಕ ಎಂದು ಹೇಳಿಕೊಂಡಿದ್ದಾರೆ.
“ಬೆಂಗಳೂರಿನಲ್ಲಿ ಪ್ರಯಾಣವು ತುಂಬಾ ನಿರಾಶದಾಯಕವಾಗಿದೆ. ಯಶವಂತಪುರದಿಂದ ಜಯನಗರಕ್ಕೆ 18 ಕಿ.ಮೀ. ಪ್ರಯಾಣಿಸುವುದು ನವಿ ಮುಂಬೈನಿಂದ ಪುಣೆಗೆ (120 ಕಿ.ಮೀ) ಪ್ರಯಾಣಿಸಿದಂತೆ ಬಾಸವಾಗುತ್ತದೆ. ಇದೊಂದು ಸರಿಪಡಿಸಲಾಗದ, ಬೃಹತ್ ವಿಪತ್ತು!” ಎಂದು ವಿವರಿಸಿದ್ದಾರೆ.
ಅವರ ಪೋಸ್ಟ್ ಭಾರೀ ವೈರಲ್ ಆಗಿದೆ. ಅವರ ಪೋಸ್ಟ್ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಸಂಚಾರ ದಟ್ಟಣೆಯ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು, ಕಾರು ಬಿಟ್ಟು ಮೆಟ್ರೋ ಬಳಸುವಂತೆ ಸಲಹೆ ನೀಡಿದ್ದಾರೆ.




