ಜಮ್ಮು ಮತ್ತು ಕಾಶ್ಮೀರದ ಕುನನ್ – ಪೋಶ್ಪೋರ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂಬ ಕಾರಣಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ದಾಂಧಲೆ ನಡೆಸಿದ್ದಾರೆ. ಸರ್ಜಾಪುರ ರಸ್ತೆಯ ವಿವಿ ಆವರಣಕ್ಕೆ ನುಗ್ಗಿದ ಎಬಿವಿಪಿ ಕಾರ್ಯಕರ್ತರು ಆಸ್ತಿಯನ್ನು ಧ್ವಂಸ ಮಾಡಿ, ಬೋರ್ಡ್ಗಳಿಗೆ ಮಸಿ ಬಳಿದಿದ್ದಾರೆ. ಅಷ್ಟು ಮಾತ್ರವಲ್ಲದೆ ವಿದ್ಯಾರ್ಥಿ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ.
ಸುಮಾರು 20 ಎಬಿವಿಪಿ ಕಾರ್ಯಕರ್ತರು ಖಾಸಗಿ ವಿಶ್ವವಿದ್ಯಾಲಯದ ಮುಖ್ಯ ದ್ವಾರದ ಹೊರಗೆ ಕಬ್ಬಿಣದ ರಾಡ್ಗಳನ್ನು ಬಳಸಿ ಸಂಸ್ಥೆಯ ಆಸ್ತಿಗಳಿಗೆ ಹಾನಿ ಮಾಡಿದ್ದಾರೆ. ನಾಮಫಲಕಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ. ಈ ಘಟನೆ ನಡೆದ ಸುಮಾರು ಎರಡು ಗಂಟೆಗಳ ನಂತರ ಪೊಲೀಸರು 18 ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದಿದ್ದಾರೆ. ಪ್ರಾಥಮಿಕ ತನಿಖೆಯ ನಂತರ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಪೊಲೀಸರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ʼಅಜೀಂ ಪ್ರೇಮ್ಜಿʼ ಎಂಬ ಮಹಾದಾನಿ; ಅಡುಗೆ ಎಣ್ಣೆ ವ್ಯಾಪಾರಿಯಿಂದ ಐಟಿ ದಿಗ್ಗಜನವರೆಗೆ…
ಸದ್ಯ ಎಬಿವಿಪಿ ಕಾರ್ಯಕರ್ತರ ಈ ದಾಂಧಲೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಹರಿದಾಡುವವರೆಗೂ ಪೊಲೀಸರಿಗೆ ಘಟನೆಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಅವರಿಗೆ ಎರಡು ಗಂಟೆಗಳು ಬೇಕಾಗಿತ್ತು ಎನ್ನಲಾಗಿದೆ.
ಅಖಿಲ ಭಾರತ ವಿದ್ಯಾರ್ಥಿ ಸಂಘ (ಎಐಎಸ್ಎ) ನೊಂದಿಗೆ ಸಂಯೋಜಿತವಾಗಿರುವ ಸ್ಪಾರ್ಕ್ ರೀಡಿಂಗ್ ಸರ್ಕಲ್, 1991ರ ಕುನಾನ್ ಪೋಷ್ಪೋರಾ ಸಾಮೂಹಿಕ ಅತ್ಯಾಚಾರದ ಕುರಿತು ಚರ್ಚೆಗಾಗಿ ಪೋಸ್ಟರ್ಗಳನ್ನು ಬಿಡುಗಡೆ ಮಾಡಿತ್ತು. ಈ ಕಾರ್ಯಕ್ರಮವನ್ನು ಸಂಜೆ 6 ಗಂಟೆಗೆ ನಿಗದಿಪಡಿಸಲಾಗಿತ್ತು. ಪೋಸ್ಟರ್ನಲ್ಲಿ “35 ಮಹಿಳೆಯರ ಮೇಲೆ ಸೇನಾ ಸಿಬ್ಬಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. 35 ವರ್ಷಗಳ ನಂತರವೂ ಶಿಕ್ಷೆಯಾಗಿಲ್ಲ. ಇದು ಕಾಶ್ಮೀರದ ಜನರ ಮೇಲೆ ನಡೆಯುವ ಹಿಂಸಾಚಾರಗಳಲ್ಲಿ ಒಂದು. ಈ ಬಗ್ಗೆ ಚರ್ಚೆ ನಡೆಸೋಣ” ಎಂದು ಬರೆಯಲಾಗಿತ್ತು. ಇದೇ ಕಾರಣಕ್ಕೆ ದಾಳಿ ನಡೆಸಿರುವುದಾಗಿ ಎಬಿವಿಪಿ ಹೇಳಿಕೊಂಡಿದೆ.
ವಿಶ್ವವಿದ್ಯಾಲಯ ಹೇಳುವುದೇನು?
“ಫೆಬ್ರವರಿ 24 ರಂದು ಸಂಜೆ 6 ಗಂಟೆ ಸುಮಾರಿಗೆ 20 ಜನರ ಗುಂಪು ಬೆಂಗಳೂರಿನಲ್ಲಿರುವ ನಮ್ಮ ಕ್ಯಾಂಪಸ್ಗೆ ಬಲವಂತವಾಗಿ ನುಗ್ಗಿದೆ. ಗುಂಪಿನಲ್ಲಿದ್ದವರು ಘೋಷಣೆಗಳನ್ನು ಕೂಗಿ, ಕೆಲವು ಆಸ್ತಿಗಳನ್ನು ಧ್ವಂಸ ಮಾಡಿದ್ದಾರೆ. ನಮ್ಮ ಕೆಲವು ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ನಾವು ಘಟನೆಯ ಬಗ್ಗೆ ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ (ಸರ್ಜಾಪುರ) ಮಾಹಿತಿ ನೀಡಿದೆವು. ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ ಅವರನ್ನು ಸುತ್ತುವರೆದರು” ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ವಿಪ್ರೋ ಕ್ಯಾಂಪಸ್ ಮೂಲಕ ವಾಹನ ಸಂಚಾರಕ್ಕೆ ಅವಕಾಶ; ಸಿಎಂ ಮನವಿ ತಿರಸ್ಕರಿಸಿದ ಅಜೀಂ ಪ್ರೇಮ್ಜಿ
“ನಮ್ಮ ಕ್ಯಾಂಪಸ್ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಪ್ರತಿಭಟಿಸುತ್ತಿದ್ದವರು ನಮ್ಮ ಕ್ಯಾಂಪಸ್ಗೆ ಬಲವಂತವಾಗಿ ಪ್ರವೇಶಿಸಿದ್ದಾರೆ. ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಈ ರೀತಿಯ ಯಾವುದೇ ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ. ಕ್ಯಾಂಪಸ್ನಲ್ಲಿ ಯಾವುದೇ ಕಾರ್ಯಕ್ರಮ ನಡೆಯುವ ಮೊದಲು ವಿಶ್ವವಿದ್ಯಾಲಯವು ಕಟ್ಟುನಿಟ್ಟಿನ ಕಾರ್ಯವಿಧಾನಗಳನ್ನು ಅನುಸರಿಸುತ್ತದೆ. ವಿದ್ಯಾರ್ಥಿಗಳ ಸಣ್ಣ ಗುಂಪಿನಿಂದ ಯೋಜಿಸಲಾಗಿದೆ ಎಂದು ಹೇಳಲಾದ ಈ ಕಾರ್ಯಕ್ರಮವು ನಡೆದೇ ಇಲ್ಲ. ಹೊರಗಿನ ಜನರಿರುವ ಗುಂಪು ನಮ್ಮ ಕ್ಯಾಂಪಸ್ನಲ್ಲಿ ನಡೆಸಿದ ಗದ್ದಲ ಮತ್ತು ಹಿಂಸಾಚಾರವನ್ನು ನಾವು ಬಲವಾಗಿ ಖಂಡಿಸುತ್ತೇವೆ” ಎಂದೂ ಹೇಳಿದೆ.
ಇನ್ನು ಈ ದಾಂಧಲೆ ಬಳಿಕ ವಿವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಾಶ್ಮೀರಿ ಮಹಿಳೆಯರೊಂದಿಗೆ ಧ್ವನಿಗೂಡಿಸಲು, ನ್ಯಾಯ, ಸ್ಮರಣೆ ಮತ್ತು ಹೊಣೆಗಾರಿಕೆಯ ಪ್ರಶ್ನೆಯನ್ನು ಎತ್ತಲು ವಿದ್ಯಾರ್ಥಿಗಳು ಆಯೋಜಿಸಿದ್ದ ಚರ್ಚೆಯನ್ನು ತಡೆಯಲೆಂದೇ ಎಬಿವಿಪಿ ದಾಳಿಯನ್ನು ನಡೆಸಿದೆ. ಇದು ಕೋಮು, ಫ್ಯಾಸಿಸ್ಟ್, ಜಾತಿವಾದಿ ಮತ್ತು ಪಿತೃಪ್ರಧಾನ ದಾಳಿ ಎಂದು ಎಐಎಸ್ಎ ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಇತರೆ ವಿದ್ಯಾರ್ಥಿಗಳು ಒಟ್ಟುಗೂಡಿದ್ದಾರೆ. ಹಾಗೆಯೇ ಸ್ಥಳದಲ್ಲಿದ್ದ ಪೊಲೀಸರು ಗುಂಪು ಕ್ಯಾಂಪಸ್ ಒಳಗೆ ನುಗ್ಗುವುದನ್ನು ತಡೆಯಲು ಅಥವಾ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.





