ಮಳೆ ನೀರಿನ ಇಂಗು ಗುಂಡಿ ಸ್ವಚ್ಛತೆ ವೇಳೆ ಉಸಿರುಗಟ್ಟಿ ಮೂವರು ಮೃತಪಟ್ಟಿರುವ ದುರ್ಘಟನೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ನಡೆದಿದೆ.
ಮೃತರನ್ನು ಮುನಿಶಾಮಪ್ಪ(67), ರುದ್ರಕುಮಾರ್(40) ಮತ್ತು ವಿಶ್ವನಾಥ್ ಆಚಾರಿ(24) ಎಂದು ಗುರುತಿಸಲಾಗಿದೆ.
ಮೃತರಲ್ಲಿ ಒಬ್ಬರಾದ ಮುನಿಶಾಮಪ್ಪ ಅವರು ತಮ್ಮ ಜಮೀನಿನಲ್ಲಿ ಸುಮಾರು 12 ವರ್ಷಗಳ ಹಿಂದೆ ಇಂಗು ಗುಂಡಿ ನಿರ್ಮಿಸಿದ್ದರು. ಆದರೆ, ಅದು ಬಳಕೆಯಾಗುತ್ತಿರಲಿಲ್ಲ. ಇದೀಗ, ಇಂಗು ಗುಂಡಿಯ ನೀರಿನಲ್ಲಿ ಬಿದ್ದ ವಸ್ತುಗಳು ಕೊಳೆತು ನಾರುತ್ತಿದ್ದರಿಂದ, ಅದನ್ನು ಕೆಮಿಕಲ್ ಹಾಕಿ ಕ್ಲೀನ್ ಮಾಡಲು ಉದ್ದೇಶಿಸಿದ್ದರು. ಇಂಗು ಗುಂಡಿಗೆ ಇಳಿದು ಸ್ವಚ್ಛಗೊಳಿಸಲು ಮುಂದಾಗಿದ್ದರು ಎಂದು ವರದಿಯಾಗಿದೆ.
ಈ ವೇಳೆ ಉಸಿರಾಟದ ತೊಂದರೆಯಾಗಿ ಮುನಿಶಾಮಪ್ಪ ಮೂರ್ಛೆ ಹೋಗಿದ್ದಾರೆ. ಅವರನ್ನು ರಕ್ಷಿಸಲು ಹೋದ ಪ್ಲಂಬರ್ ರುದ್ರಕುಮಾರ್ ಕೂಡ ಮೂರ್ಛೆ ಹೋಗಿದ್ದಾರೆ. ಇವರಿಬ್ಬರನ್ನು ಮೇಲೆತ್ತಲು ಯತ್ನಸಿದ ವಿಶ್ವನಾಥ್ ಆಚಾರಿ ಎಂಬ ಯುವಕ ಕೂಡ ಪ್ರಜ್ಞೆತಪ್ಪಿದ್ದಾರೆ. ಮೂವರನ್ನೂ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಮೂವರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ಕಳಿಸಲಾಗಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




