ಕಳೆದ ಎರಡು ಮೂರು ವಾರಗಳಲ್ಲಿ ಬೆಂಗಳೂರಿನಲ್ಲಿ ಮಾಲಿನ್ಯ ಸಂಬಂಧಿತ ಕಾಯಿಲೆಗಳಲ್ಲಿ ಹೆಚ್ಚಳವಾಗಿದೆ ಎಂಬುದನ್ನು ವೈದ್ಯರು ಗಮನಿಸಿದ್ದಾರೆ. ಬೆಂಗಳೂರಿನ ಗಾಳಿಯ ಗುಣಮಟ್ಟವು ಕಳೆದ ಎರಡು ವಾರಗಳಲ್ಲಿ ತೃಪ್ತಿದಾಯಕ ಮತ್ತು ಮಧ್ಯಮ ಹಂತದ ನಡುವೆ ಏರಿಳಿತ ಕಂಡಿದೆ. ಗಾಳಿಯು ಕಲುಷಿತಗೊಳ್ಳುತ್ತಿದೆ. ಪರಿಣಾಮ, ಮಾಲಿನ್ಯ ಸಂಬಂಧಿತ ಖಾಯಿಲೆಗಳು ಕಳೆದ ವರ್ಷದ ಡಿಸೆಂಬರ್ಗೆ ಹೋಲಿಸಿದರೆ, ಈ ವರ್ಷದ ಡಿಸೆಂಬರ್ನಲ್ಲಿ 20-30% ಹೆಚ್ಚಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಉಸಿರಾಟದ ಸೋಂಕುಗಳು, ಆಸ್ತಮಾ ಉಲ್ಬಣಗಳು, ಕಣ್ಣಿನ ಕಿರಿಕಿರಿ ಹಾಗೂ ಒಣ ಚರ್ಮದ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚಾಗಿವೆ. ರೋಗಲಕ್ಷಣಗಳ ತೀವ್ರತೆಯೂ ಹೆಚ್ಚಿದೆ. ಮಕ್ಕಳು, ವೃದ್ಧರು ಹಾಗೂ ಈಗಾಗಲೇ ಆರೋಗ್ಯ ಸಮಸ್ಯೆ ಇರುವವರನ್ನು ಮತ್ತಷ್ಟು ಕಾಡುತ್ತಿವೆ ಎಂದು ವರದಿಯಾಗಿದೆ.
ಈ ತಿಂಗಳಲ್ಲಿ ಆಸ್ಪತ್ರೆಗೆ ಬರುತ್ತಿರುವ ರೋಗಿಗಳಲ್ಲಿ ಹೆಚ್ಚಿನವರು ಕೆಮ್ಮು, ಗಂಟಲು ಕಿರಿಕಿರಿ, ಸೀನು, ಆಸ್ತಮಾ ಲಕ್ಷಣಗಳು ಹಾಗೂ ಉಸಿರಾಟದ ಸೋಂಕುಗಳ ಸಮಸ್ಯೆಗೆ ತುತ್ತಾಗಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ.
ಕಳೆದ ಎರಡು ವಾರಗಳಲ್ಲಿ ಉಸಿರಾಟದ ತೊಂದರೆ ಎದುರಿಸುತ್ತಿರುವ ರೋಗಿಗಳ ಸಂಖ್ಯೆ 20% ಮತ್ತು ಮೂಗು-ಗಂಟಲಿಗೆ ಅಲರ್ಜಿ/ಇನ್ಫೆಕ್ಷನ್ಗೆ ತುತ್ತಾಗಿರು ರೋರಿಗಳ ಸಂಖ್ಯೆ 30% ಏರಿಕೆಯಾಗಿದೆ ಎಂದು ಶ್ವಾಸಕೋಶ ವಿಭಾಗದ ವೈದ್ಯರು ತಿಳಿಸಿದ್ದಾರೆ.
ಇನ್ನು, ಮಾಲಿನ್ಯ ಕಾರಣದಿಂದಾಗಿ ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳೂ ಹೆಚ್ಚಾಗಿವೆ ಎಂದು ಕಣ್ಣಿನ ವೈದ್ಯರು ಹೇಳುತ್ತಿದ್ದಾರೆ. “ಈ ವರ್ಷ ಕಣ್ಣಿನ ಕಿರಿಕಿರಿ ಹಾಗೂ ಕಣ್ಣು ಕೆಂಪಾಗುವಿಕೆ ಪ್ರಕರಣಗು ಸುಮಾರು 30% ರಷ್ಟು ಹೆಚ್ಚಾಗಿವೆ. 2024ರ ಡಿಸೆಂಬರ್ಗೆ ಹೋಲಿಸಿದರೆ, ಕಾಂಜಂಕ್ಟಿವಿಟಿಸ್ ಪ್ರಕರಣಗಳು ಸುಮಾರು 60% ರಷ್ಟು ಹೆಚ್ಚಾಗಿವೆ. ಕಣ್ಣಿನ ಮೇಲ್ಮೈ ಮತ್ತು ಕಣ್ಣುಗಳನ್ನು ತೇವವಾಗಿಡಲು ಕಾರಣವಾಗುವ ಮೈಬೊಮಿಯನ್ ಗ್ರಂಥಿಗಳ ಮೇಲೆ ಪರಿಣಾಮ ಬೀರುವ PM2.5 ನಂತಹ ಸೂಕ್ಷ್ಮ ಕಣಗಳು ಗಾಳಿಯಲ್ಲಿ ಹೆಚ್ಚುತ್ತಿರುವುದು, ಕಣ್ಣಿನ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ” ಎಂದು ನೇತ್ರಶಾಸ್ತ್ರಜ್ಞ ಡಾ. ನರೇನ್ ಶೆಟ್ಟಿ ಹೇಳಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಪಾಕಿಸ್ತಾನಕ್ಕೆ ಸಾಲ ನೀಡಲು ಅಂತಾರಾಷ್ಟ್ರೀಯ ವಿತ್ತ ನಿಧಿ ಹೇರಿದ 11 ಷರತ್ತುಗಳೇನು?
“ಈ ವರ್ಷ ಅನಾರೋಗ್ಯಕ್ಕೆ ತುತ್ತಾದವರು ಗುಣಮುಖರಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಒಂದು ವಾರದೊಳಗೆ ನಿವಾರಣೆಯಾಗಬೇಕಿದ್ದ ಸೋಂಕುಗಳು, ಈಗ ಎರಡು ವಾರಗಳವರೆಗೆ ಕಾಡುತ್ತವೆ. ಎರಡು-ಮೂರು ದಿನಗಳಲ್ಲಿ ವಾಸಿಯಾಗುವ ವೈರಲ್ ಕಾಯಿಲೆಗಳು 10 ದಿನಗಳವರೆಗೆ ಇರುತ್ತವೆ. ರೋಗಲಕ್ಷಣಗಳ ತೀವ್ರತೆಯೂ ಹೆಚ್ಚಾಗಿದೆ” ಎಂದು ವೈದ್ಯರು ಗಮನಿಸಿದ್ದಾರೆ.
ಹೆಚ್ಚು ಮಾಲಿನ್ಯವಿದ್ದ ದಿನಗಳಲ್ಲಿ ಮುಂಜಾನೆಯ ನಡಿಗೆಯನ್ನು ಕೈಬಿಡಬೇಕು. ಚಳಿಯ ಮಂಜಿನಿಂದ ಮಾಲಿನ್ಯಕಾರಕ ವಸ್ತುಗಳ ನೆಲದ ಹತ್ತಿರವೇ ಉಳಿಯುವುದರಿಂದ, ಮುಂಜಾನೆಯ ನಡಿಗೆ ವೇಳೆ ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಜೊತೆಗೆ, ಬೆಚ್ಚಗಿನ, ಪೌಷ್ಟಿಕ-ಭರಿತ ಆಹಾರವನ್ನು ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ದತ್ತಾಂಶದ ಪ್ರಕಾರ, ಡಿಸೆಂಬರ್ 5ರಿಂದ 16ರ ನಡುವೆ ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕವು (AQI) ತೃಪ್ತಿದಾಯಕ ಮತ್ತು ಮಧ್ಯಮ ಮಟ್ಟದಲ್ಲಿತ್ತು. ವಾಯು ಗುಣಮಟ್ಟ ಸೂಚಕವನ್ನು 0-50 (ಉತ್ತಮ), 51-100 (ತೃಪ್ತಿದಾಯಕ), 101-200 (ಮಧ್ಯಮ), 201-300 (ಕಳಪೆ), 301-400 (ತುಂಬಾ ಕಳಪೆ) ಮತ್ತು 401+ (ತೀವ್ರ) ಎಂದು ವರ್ಗೀಕರಿಸಲಾಗಿದೆ.




