ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಬುಲ್ಡೋಜರ್ಗಳು ಸದ್ದು ಮಾಡಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಸ್ಲಂ ನಿವಾಸಿಗಳ 300ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ಸುಮಾರು 300 ಕುಟುಂಬಗಳ ಬದುಕು ಬೀದಿಗೆ ಬಿದ್ದಿದೆ.
ಬೆಂಗಳೂರಿನ ಯಲಹಂಕ ವಲಯದಲ್ಲಿರುವ ಕೋಗಿಲು ಬಡಾವಣೆಯ ಫಕೀರ್ ಕಾಲೋನಿಯ ನಿವಾಸಿಗಳ ಮೇಲೆ ಅಧಿಕಾರಿಗಳು ಅಧಿಕಾರ ದರ್ಪ ಮೆರೆದಿದ್ದಾರೆ. ನಾಲ್ಕು ಜೆಸಿಬಿಗಳೊಂದಿಗೆ ಪೊಲೀಸರ ಸಮ್ಮಖದಲ್ಲಿ ಕಾಲೋನಿಗೆ ನುಗ್ಗಿದ ಅಧಿಕಾರಿಗಳು, ಮನೆಗಳನ್ನು ಉರುಳಿಸಿದ್ದಾರೆ. ಸುಮಾರು 25-30 ವರ್ಷಗಳಿಂದ ಫಕೀರ್ ಕಾಲೋನಿಯಲ್ಲಿ ಪಕ್ಕಾ ಮನೆಗಳನ್ನು ನಿರ್ಮಿಸಿಕೊಂಡು ಬದುಕುತ್ತಿದ್ದವರ ಮನೆಗಳು ಧ್ವಂಸಗೊಂಡಿವೆ. ಸುಮಾರು 3,000ಕ್ಕೂ ಹೆಚ್ಚು ಜನರು ಬೀದಿಪಾಲಾಗಿದ್ದಾರೆ.

ಈ ಕುಟುಂಬಗಳು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು, ಮನೆ ನಿರ್ಮಿಸಿಕೊಂಡಿದ್ದರೆಂದು ಅಧಿಕಾರಿಗಳು ಆರೋಪಿಸಿದ್ದಾರೆ. ಜಾಗವನ್ನು ತೆರವುಗೊಳಿಸಲು ಮನೆಗಳನ್ನು ನೆಲಸಮ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆದರೆ, ಈ ಪ್ರದೇಶದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸಲು ಸರ್ಕಾರವೇ ಅವಕಾಶ ನೀಡಿತ್ತು. ಸರ್ಕಾರದ ಸೂಚನೆಯಂತೆಯೇ ನಾವಿಲ್ಲಿ ಮನೆ ನಿರ್ಮಿಸಿಕೊಂಡು ಬದುಕುತ್ತಿದ್ದೇವೆಂದು ಸಂತ್ರಸ್ತ ನಿವಾಸಿಗಳು ಹೇಳಿಕೊಂಡಿದ್ದಾರೆ.
ಮುಖ್ಯವಾಗಿ, ಒಂದು ವೇಳೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಲ್ಲಿ, ತೆರವುಗೊಳಿಸಲು ಮೂರು ತಿಂಗಳ ಮುನ್ನವೇ ನೋಟಿಸ್ ನೀಡಬೇಕು. ಭೂಮಿಯನ್ನು ಖಾಲಿ ಮಾಡುವಂತೆ ಸೂಚಿಸಬೇಕು. ಬಳಿಕ, ನಂತರದ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿಯಮವಿದೆ. ಆದರೆ, ಫಕೀರ್ ಕಾಲೋನಿಯ ನಿವಾಸಿಗಳಿಗೆ ಈವರೆಗೆ ಯಾವುದೇ ನೋಟಿಸ್ ನೀಡಲಾಗಿಲ್ಲ. ಅಧಿಕಾರಿಗಳು ಏಕಾಏಕಿ ಕಾಲೋನಿಗೆ ನುಗ್ಗಿ, ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸಿದ್ದಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ದಾರುಣವಾಗಿದೆ ಬಾಲ ನ್ಯಾಯ ವ್ಯವಸ್ಥೆ; ನ್ಯಾಯಕ್ಕಾಗಿ ಕಾಯುತ್ತಿದ್ದಾರೆ 50,000 ಬಾಲಾಪರಾಧಿಗಳು
ಅಧಿಕಾರಿಗಳ ದರ್ಪದ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ದುಡಿವ ಜನರ ವೇದಿಕೆಯ ಮುಖಂಡೆ ಪೂಜಾ, “ಬಡ ಜನರ ಮೇಲೆ ಅಧಿಕಾರಿಗಳು ದರ್ಪ ಮೆರೆದಿದ್ದಾರೆ. ಯಾವುದೇ ನೋಟಿಸ್ ಕೊಡದೆ ಏಕಾಏಕಿ ಮನೆಗಳನ್ನು ಧ್ವಂಸಗೊಳಿಸಿದ್ದಾರೆ. ತೆರವು ಕಾರ್ಯಾಚರಣೆಗೆ ನಿಖರವಾದ ಕಾರಣವನ್ನೂ ಕೊಟ್ಟಿಲ್ಲ. ಮನೆಯಲ್ಲಿದ್ದ ವಸ್ತುಗಳು, ದಾಖಲೆಗಳು ಹಾಗೂ ಮಕ್ಕಳು-ವೃದ್ಧರು ಸ್ಥಳದಿಂದ ದೂರ ಹೋಗುವುದಕ್ಕೂ ಅವಕಾಶ ಕೊಟ್ಟಿಲ್ಲ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲರೂ ಬೀದಿಪಾಲಾಗಿದ್ದಾರೆ” ಎಂದು ಹೇಳಿದ್ದಾರೆ.
“ಬಡ ಜನರ ಅಳಲು ಕೇಳುವಂತೆ, ನೆರವು ನೀಡುವಂತೆ ಒತ್ತಾಯಿಸಿ ಸ್ಥಳೀಯ ಶಾಸಕರಾಗಿರುವ ಸಚಿವ ಕೃಷ್ಣ ಬೈರೇಗೌಡರನ್ನು ಭೇಟಿ ಮಾಡಿದೆವು. ಆದರೆ, ಅವರು ನಮ್ಮ ಮಾತು ಕೇಳಿಸಿಕೊಳ್ಳುವುದಕ್ಕೂ ಸಿದ್ದರಿರಲಿಲ್ಲ. ನಮ್ಮನ್ನು ಕಡೆಗಣಿಸಿ, ತಮ್ಮ ಸಹಾಯಕರೊಂದಿಗೆ ಮಾತನಾಡುವಂತೆ ಹೇಳಿದರು. ಆದರೆ, ಅವರೂ ಯಾವುದೇ ಸ್ಪಂದನೆ ನೀಡಲಿಲ್ಲ. ಜಿಬಿಎ ಅಧಿಕಾರಿಗಳು, ಜಿಲ್ಲಾಧಿಕಾರಿ, ಸ್ಲಂ ಬೋರ್ಡ್ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇವೆ. ಆದರೆ, ಯಾರೊಬ್ಬರೂ ಸ್ಪಂದಿಸುತ್ತಿಲ್ಲ” ಎಂದು ಪೂಜಾ ಆರೋಪಿಸಿದ್ದಾರೆ.




