ಅಪರಾಧ ಆರೋಪ ಹೊತ್ತಿದ್ದ ಯುವಕ ದರ್ಶನ್ ಎಂಬಾತ ಇತ್ತೀಚೆಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಆತನನ್ನು ಪೊಲೀಸರೇ ಕೊಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಆತನ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ.
ಬೆಂಗಳೂರಿನ ವಿವೇಕನರದ ಸೊಣ್ಣೆನಹಳ್ಳಿ ನಿವಾಸಿಯಾಗಿರುವ ದರ್ಶನ್ನನ್ನ (23) ನವೆಂಬರ್ 12ರಂದು ಪೊಲೀಸರು ಅಕ್ರಮವಾಗಿ ಬಂಧಿಸಿಟ್ಟಿದ್ದರು. ಸುಮಾರು ಮೂರು ದಿನಗಳ ಕಾಲ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದ್ದರು. ಬಳಿಕ, ಆತನನ್ನು ರಿಯಾಬ್ ಸೆಂಟರ್ಗೆ ಸೇರಿಸಿದ್ದರು ಎಂದು ಆರೋಪಿಸಲಾಗಿದೆ. ರಿಯಾಬ್ ಸೆಂಟರ್ಗೆ ಸೇರಿದ ಕೆಲವೇ ದಿನಗಳಲ್ಲಿ ದರ್ಶನ್ ಸಾವನ್ನಪ್ಪಿದ್ದಾರೆ.
ದರ್ಶನ್ ಸಾವು ಸಾಮಾನ್ಯ ಸಾವಲ್ಲ. ಅದು ಕೊಲೆ. ಪೊಲೀಸರೇ ಆತನನ್ನು ಕೊಂಡಿದ್ದಾರೆ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ. ವಿವೇಕನಗರ ಪೊಲೀಸ್ ಠಾಣೆಯ ಪೊಲೀಸರವಿರುದ್ಧ ದೂರು ನೀಡಿದ್ದಾರೆ.
“ಮೂರು ದಿನಗಳ ದರ್ಶನ್ನನ್ನು ಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದ ಪೊಲೀಸರು, ಆತನ ಮೇಲೆ ಲಾಠಿ, ಪೈಪ್ನಿಂದ ಹಲ್ಲೆ ನಡೆಸಿದ್ದರು. ಈ ಹಲ್ಲೆಯನ್ನು ಮರೆಮಾಚಲು ರಿಯಾಬ್ ಸೆಂಟರ್ಗೆ ಸೇರಿಸಿದ್ದರು. ಆದರೆ, ರಿಯಾಬ್ ಸೆಂಟರ್ನಲ್ಲಿಯೂ ಆತನಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಹೀಗಾಗಿ, ರಿಯಾಬ್ ಸೆಂಟರ್ಗೆ ಸೇರಿದ ಎಂಟೇ ದಿನಗಳಲ್ಲಿ ದರ್ಶನ್ ಸಾವನ್ನಪ್ಪಿದ್ದಾರೆ. ಇದೊಂದು ಕೊಲೆ” ಎಂದು ದರ್ಶನ್ ಪೋಷಕರು ಆರೋಪಿಸಿರುವುದಾಗಿ ‘ಟಿವಿ9 ಕನ್ನಡ’ ವರದಿ ಮಾಡಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವೇಕನಗರ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್, ಪವನ್ ಸೇರಿದಂತೆ ನಾಲ್ಕು ಪೊಲೀಸರು ಮತ್ತು ಯೂನಿಟಿ ರಿಯಾಬ್ ಸೆಂಟರ್ ಮಾಲೀಕರ ವಿರುದ್ಧ ಕೊಲೆ ಮತ್ತು ಅಟ್ರಾಸಿಟಿ ಪ್ರಕರಣ ದಾಖಲಾಗಿದೆ. ಕಸ್ಟಡಿಯಲ್ ಡೆತ್ ಎಂದು ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾವಣೆ ಮಾಡಲಾಗಿದೆ.




