ದಟ್ಟಮಂಜಿನ ಕಾರಣದಿಂದಾಗಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಳಿಗ್ಗೆ 5: 30ರಿಂದ ಕನಿಷ್ಟ 41 ವಿಮಾನಗಳ ಹಾರಾಟ ವಿಳಂಬವಾಗಿದೆ.
ಗುರುವಾರ ಬೆಳಿಗ್ಗೆ ನಗರದಲ್ಲಿ ದಟ್ಟ ಮಂಜು ಆವರಿಸಿತ್ತು. ವಿಮಾನ ನಿಲ್ದಾಣದ ಸುತ್ತಲಿನ ದಟ್ಟವಾದ ಮಂಜು ಸ್ಪಷ್ಟವಾದ ಗೋಚರತೆಯನ್ನು ಕಡಿಮೆ ಮಾಡಿತ್ತು. ಹೀಗಾಗಿ, ವಿಮಾನಗಳ ಕಾರ್ಯಾಚರಣೆ ವಿಳಂಬವಾಯಿತು. ಹವಾಮಾನ ಇಲಾಖೆಯೂ ಸಾಧಾರಣ ಮಳೆಯ ಎಚ್ಚರಿಕೆಯನ್ನು ನೀಡಿತ್ತು.
ವಿಮಾನ ನಿಲ್ದಾಣದ ಸುತ್ತಮುತ್ತ ದಟ್ಟವಾದ ಮಂಜು ಮತ್ತು ಮೋಡ ಆವರಿಸಿಕೊಂಡಿದ್ದರಿಂದ, ವಾತಾವರಣವು ಕತ್ತಲೆಯಂತೆ ಬಾಸವಾಗುತ್ತಿತ್ತು. ಪರಿಣಾಮ, ಪೈಲಟ್ಗಳು ಮುಂಜಾನೆಯ ಸಮಯದಲ್ಲಿ ಸುರಕ್ಷಿತವಾಗಿ ಕಾರ್ಯನಿರ್ವಹಿಸಲು ಹೆಣಗಾಡುವಂತಾಗಿತ್ತು.ಬೆಳಗ್ಗೆ 10 ಗಂಟೆಯವರೆಗೂ ಹವಾಮಾನವು 20°C ತಾಪಮಾನವನ್ನು ಹೊಂದಿತ್ತು. ಜೊತೆಗೆ, ಗೋಚರತೆಯು 1,500 ಮೀಟರ್ಗಳಿಗೆ ಸೀಮಿತವಾಗಿತ್ತು.
ವಾತಾವರಣೆದಲ್ಲಿ ಗಾಳಿಯು ಗಂಟೆಗೆ 14 ಕಿ.ಮೀ ವೇಗದಲ್ಲಿ ಬೀಸುತ್ತಿತ್ತು. ಮಂಜು ಕವಿದ ವಾತಾವರಣವಿತ್ತು. 800 ಅಡಿ ಮತ್ತು 1,200 ಅಡಿ ಎತ್ತರಗಳಲ್ಲಿ ಚದುರಿದ ಮೋಡಗಳಿದ್ದವು.
ಈ ಸುದ್ದಿ ಓದಿದ್ದೀರಾ? ರಾಜ್ಯದ ಐದು ಜಿಲ್ಲೆಗಳಲ್ಲಿ ಭಾರೀ ಮಳೆ; ಚಳಿ ಅಬ್ಬರ
ಸಮಯ ದೂಡಿದಂತೆ ವಾತಾವರಣದಲ್ಲಿ ಸುಧಾರಣೆ ಕಂಡುಬರುವ ನೀರಿಕ್ಷೆಯಿದ್ದು ಮಧ್ಯಾಹ್ನದ ವೇಳೆಗೆ ಸ್ಪಷ್ಟ ಹವಾಮಾನವನ್ನು ನೀರಿಕ್ಷಿಸಲಾಗಿದೆ. ದಿನದ ತಾಪಮಾನ 18°C ಮತ್ತು 28°C ನಡುವೆ ಇರಬಹುದು ಎಂದು ಊಹಿಸಲಾಗಿದೆ.
ದಟ್ಟ ಮಂಜಿನಿಂದಾಗಿ ಉಂಟಾದ ಈ ಅಡಚಣೆಯು ಅಂತಾರಾಷ್ಟ್ರೀಯ ಸಂಚಾರದ ಮೇಲೆ ಪರಿಣಾಮ ಬೀರಿದೆ. ಇದು ಇತ್ತೀಚಿನ ದಿನಗಳಲ್ಲಿ ನಡೆದ ಮತ್ತೊಂದು ಘಟನೆಯಾಗಿದೆ.





