ತಮ್ಮ ಏಕೈಕ ಮಗಳನ್ನು ಕಳೆದುಕೊಂಡು ದುಃಖವನ್ನು ಎದುರಿಸುತ್ತಿದ್ದ ಬೆಂಗಳೂರಿನ ನಿವೃತ್ತ ‘ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್’ (ಬಿಪಿಸಿಎಲ್) ಅಧಿಕಾರಿಯೊಬ್ಬರು ಹಂಚಿಕೊಂಡಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಮಗಳ ಸಾವಿಗೆ ಸಂಬಂಧಿಸಿದಂತೆ ಕೆಲವು ಔಪಚಾರಿಕ ಕೆಲಸಗಳನ್ನು ಮುಗಿಸುವಾಗ ಎಲ್ಲ ಹಂತದಲ್ಲಿಯೂ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ನಿರಾಸಕ್ತಿಯ ಕುರಿತು ಅವರು ವಿವರಿಸಿದ್ದಾರೆ.
ಬಿಪಿಸಿಎಲ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಕೆ ಶಿವಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಅವರ 34 ವರ್ಷದ ಮಗಳು ಅಕ್ಷಯ, 2025ರ ಸೆಪ್ಟೆಂಬರ್ 18ರಂದು ಮೆದುಳಿನ ರಕ್ತಸ್ತಾವದಿಂದಾಗಿ ಮನೆಯಲ್ಲಿ ನಿಧನರಾದರು. ಆಕೆಯ ಸಾವಿನ ಬಳಿಕ ಅಗತ್ಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಮತ್ತು ಅಗತ್ಯ ದಾಖಲೆಗಳನ್ನು ಪಡೆಯಲು ಆ್ಯಂಬುಲೆನ್ಸ್ ನಿರ್ವಾಹಕರು ಮತ್ತು ಪೊಲೀಸ್ ಅಧಿಕಾರಿಗಳಿಂದ ಹಿಡಿದು ಸ್ಮಶಾನ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿಯ ಸಿಬ್ಬಂದಿಯವರೆಗೆ ಬಹುತೇಕ ಎಲ್ಲರಿಗೂ ಲಂಚ ನೀಡಬೇಕಾಯಿತು ಎಂದು ಬರೆದುಕೊಂಡಿದ್ದಾರೆ.
“ಇತ್ತೀಚೆಗೆ ನನ್ನ ಏಕೈಕ ಮಗಳು 34ನೇ ವಯಸ್ಸಿನಲ್ಲಿ ಮೃತಪಟ್ಟರು. ಅವರ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್ ಸಿಬ್ಬಂದಿ, ಎಫ್ಐಆರ್ ದಾಖಲಿಸಲು ಪೊಲೀಸರು, ಮರಣೋತ್ತರ ವರದಿಗಾಗಿ ಪಡೆಯಲು ರಶೀದಿಗಾಗಿ ಸ್ಮಶಾನ ಸಿಬ್ಬಂದಿಗಳು ಹಾಗೂ ಮರಣ ಪ್ರಮಾಣಪತ್ರಕ್ಕಾಗಿ ಬಿಬಿಎಂಪಿ ಕಚೇರಿಯಲ್ಲಿ ಲಂಚ ಕೇಳಲಾಗುತ್ತಿದೆ. ಎಲ್ಲರೂ ನಗದು ರೂಪದಲ್ಲಿ ಹಣ ನೀಡುವಂತೆ ಬೇಡಿಕೆ ಇಡುತ್ತಾರೆ” ಎಂದು ಆರೋಪಿಸಿದ್ದಾರೆ.
“ತನ್ನ ಏಕೈಕ ಮಗುವನ್ನು ಕಳೆದುಕೊಂಡ ತಂದೆಯ ಬಗ್ಗೆ ಇವೆರಲ್ಲರಿಗೂ ಯಾವುದೇ ಸಹಾನುಭೂತಿಯೂ ಇಲ್ಲ. ತುಂಬಾ ದುಃಖದ ಸ್ಥಿತಿ. ನನ್ನ ಬಳಿ ಹಣವಿತ್ತು, ನಾನು ಪಾವತಿಸಿದೆ. ಬಡವರು ಏನು ಮಾಡುತ್ತಾರೆ” ಎಂದು ಅವರು ಪ್ರಶ್ನಿಸಿದ್ದಾರೆ.
“ಕಸವನಹಳ್ಳಿಯ ಆಸ್ಪತ್ರೆಯಿಂದ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ನನ್ನ ಮಗಳ ಮೃತದೇಹವನ್ನು ಸಾಗಿಸಲು ಆ್ಯಂಬ್ಯುಲೆನ್ಸ್ ಚಾಲಕ 3,000 ರೂ.ಗೆ ಬೇಡಿಕೆ ಇಟ್ಟಿದ್ದರು. ಎಫ್ಐಆರ್ ದಾಖಲಿಸಲು ಪೊಲೀಸರು ಲಂಚ ಕೇಳಿದರು. ನಾನು ಅವರಿಗೆ ಪೊಲೀಸ್ ಠಾಣೆಯ ಹೊರಗೆ ಹಣ ಪಾವತಿಸಿದೆ. ಪೊಲೀಸ್ ಅಧಿಕಾರಿಗಳಿಗೆ ಕುಟುಂಬವಿದೆಯೇ? ಈಗಾಗಲೇ ಆಘಾತಕ್ಕೆ ಒಳಗಾಗಿರುವ ವ್ಯಕ್ತಿಯ ಬಳಿ ಹಣ ಕೇಳುವ ಅವರಿಗೆ ಭಾವನೆ ಇದೆಯೇ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಬಿಬಿಎಂಪಿಯಿಂದ ಮರಣ ಪ್ರಮಾಣಪತ್ರವನ್ನು ಪಡೆಯಲು ನಾವು ಹೆಣಗಾಡಿದ್ದೇವೆ. ಐದು ದಿನಗಳ ಕಾಲ ಕಚೇರಿಗೆ ಅಲೆದಾಡಿದ ಬಳಿಕ ಅವರು ‘ಜಾತಿ ಸಮೀಕ್ಷೆ ನಡೆಯುತ್ತಿರುವುದರಿಂದ ಯಾರೂ ಲಭ್ಯವಿಲ್ಲ’ವೆಂದು ಹೇಳಿದರು. ಅಂತಿಮವಾಗಿ, ನಾನು ಹಿರಿಯ ಬಿಬಿಎಂಪಿ ಅಧಿಕಾರಿಯನ್ನು ಸಂಪರ್ಕಿಸಿದ್ದರಿಂದ ಪ್ರಮಾಣಪತ್ರ ದೊರೆಯಿತು. ಆದರೆ, ಅಧಿಕೃತ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕಕ್ಕಿಂತ ಹೆಚ್ಚು ಹಣವನ್ನು ನಾನು ಪಾವತಿದ್ದರಿಂದಲೇ ಪ್ರಮಾಣಪತ್ರ ದೊರೆಯಿತು” ಎಂದು ಅವರು ವಿವರಿಸಿದ್ದಾರೆ.
“In connection with the incident mentioned in Sivakumar’s tweet, one PSI and one Police Constable of Bellandur Police Station have been immediately suspended.
— DCP Whitefield Bengaluru (@dcpwhitefield) October 30, 2025
ಈ ಪೋಸ್ಟ್ ಭಾರೀ ವೈರಲ್ ಆಗಿದೆ. ಆದಾಗ್ಯೂ, ಪೋಸ್ಟ್ಅನ್ನು ಈಗ ಶಿವಕುಮಾರ್ ಅಳಿಸಿದ್ದಾರೆ. ಆದರೆ, ಅವರ ಪೋಸ್ಟ್ ಸಂಬಂಧ ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬೆನ್ನಲ್ಲೇ, ಬೆಂಗಳೂರಿನ ವೈಟ್ಫೀಲ್ಡ್ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆಯ ಒಬ್ಬ ಪಿಎಸ್ಐ ಮತ್ತು ಒಬ್ಬ ಪೊಲೀಸ್ ಕಾನ್ಸ್ಟೆಬಲ್ಅನ್ನು ಅಮಾನತು ಮಾಡಿದ್ದಾರೆ.
ಶಿವಕುಮಾರ್ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ವೈಟ್ಫೀಲ್ಡ್ ಡಿಸಿಪಿ, “ಶಿವಕುಮಾರ್ ಅವರ ಟ್ವೀಟ್ನಲ್ಲಿ ಉಲ್ಲೇಖಿಸಲಾದ ಘಟನೆಗೆ ಸಂಬಂಧಿಸಿದಂತೆ, ಬೆಳ್ಳಂದೂರು ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಒಬ್ಬ ಪೊಲೀಸ್ ಕಾನ್ಸ್ಟೆಬಲ್ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಯಾವುದೇ ಸಂದರ್ಭದಲ್ಲೂ ಪೊಲೀಸ್ ಇಲಾಖೆ ಇಂತಹ ಅಸಭ್ಯ ಅಥವಾ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ” ಎಂದು ಹೇಳಿದ್ದಾರೆ.




