ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳಗಳು, ರಸ್ತೆ ಬದಿ, ಕೆರೆಗಳ ಪಕ್ಕದಲ್ಲಿ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ತಡೆಯಲು ಬಿಬಿಎಂಪಿ ಭಾರೀ ಕಸರತ್ತು ನಡೆಯುತ್ತಿತ್ತು. ಕಸವನ್ನು ಬಿಬಿಎಂಪಿ ಕಸದ ವಾಹನಕ್ಕೆ ನೀಡದೆ, ಎಲ್ಲೆಂದರಲ್ಲಿ ಎಸೆಯುತ್ತಿದ್ದವರಿಗೆ ದಂಡವನ್ನೂ ವಿಧಿಸುತ್ತಿತ್ತು. ಆದರೂ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದನ್ನು ತಪ್ಪಿಸಲು ಸಾಧ್ಯವಾಗಿರಲಿಲ್ಲ. ಇದೀಗ, ‘ಗ್ರೇಟರ್ ಬೆಂಗಳೂರು ಅಥಾರಿಟಿ’ (ಜಿಬಿಎ) ಹೊಸ ಕ್ರಮಕ್ಕೆ ಮುಂದಾಗಿದ್ದು, ಕಸ ಎಸೆಯುವವರನ್ನು ಗುರುತಿಸಿ, ಅವರ ಮನೆಯ ಮುಂದೆಯೇ ಕಸ ಸುರಿಯುವ ಕ್ರಮಕ್ಕೆ ಮುಂದಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಕಸದ ಕವರ್ಗಳನ್ನು ಎಸೆಯುವವರ ಮನೆಗಳ ಮುಂದೆಯೇ ಕಸ ಸುರಿಯುವ ಅಭಿಯಾನವನ್ನು ಗುರುವಾರದಿಂದ ಆರಂಭಿಸಿದೆ. ಗುರುವಾರ, ಮಾರ್ಷಲ್ಗಳು, ಪೌರಕಾರ್ಮಿಕರು ಹಾಗೂ ಆರೋಗ್ಯ ಅಧಿಕಾರಿಗಳ ತಂಡವು ಆಟೋಗಳಲ್ಲಿ ಕಸ ಕೊಂಡೊಯ್ದು ನಗರದ ದತ್ತಾತ್ರೇಯ ನಗರ, ಎಸ್ಆರ್ ನಗರ, ಸಂಪಂಗಿರಾಮನಗರ ಸೇರಿದಂತೆ ಹಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆದಿದ್ದವರ ಮನೆಯ ಎದುರೇ ಸುರಿದು, 500 ರೂ. ದಂಡವನ್ನೂ ವಿಧಿಸಿದ್ದಾರೆ.
Garbage being dumped at litter bugs homes across 190 wards in GBA, BSWML imposed a fine ranging from 1000 rupees to 10 thousand rupees on litterbugs. @XpressBengaluru,@NewIndianXpress,@mg_chetan,@ramupatil_TNIE,@aknisreekarthik,@DKShivakumar,@KareeGowda_IAS,@GBAChiefComm pic.twitter.com/p7FHgT8nTn
— Yacoob (@yacoobExpress) October 30, 2025
ಮನೆ ಎದುರು ಕಸ ಸುರಿಯುವ ಕ್ರಮದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಎಸ್ಡಬ್ಲ್ಯೂಎಂಎಲ್ ವ್ಯವಸ್ಥಾಪಕ ನಿರ್ದೇಶಕ ಕರೀ ಗೌಡ, “ಕಸ ಎಸೆಯುವವವರ ವಿರುದ್ಧ ಅಭಿಯಾನ ಪ್ರಾರಂಭವಾಗಿದೆ. ನಮ್ಮ ಮಾರ್ಷಲ್ಗಳು ಎಲ್ಲೆಂದರಲ್ಲಿ ಕಸ ಸುರಿಯುವವರ ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದಾರೆ. ಅವರ ಮನೆಗಳನ್ನೂ ಗುರುತಿಸಿದ್ದಾರೆ. ಕಸ ಎಸೆದವರನ್ನು ಗುರುತಿಲಾಗಿದ್ದು, ಅವರ ಮನೆಗಳ ಎದುರು ಆಟೋ ಟಿಪ್ಪರ್ಗಳ ಮೂಲಕ ಕಸ ಸುರಿಯಲಾಗುತ್ತಿದೆ” ಎಂದು ಹೇಳಿದ್ದಾರೆ.
ನಗರ ವಾಸಿಗಳು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸ, ಒಣ ಕಸಗಳಾಗಿ ವಿಂಗಡಿಸಿ ಕಸ ಸಂಗ್ರಹಣೆಗೆ ಬರುವ ಆಟೋಗಳಿಗೆ ಕೊಡಬೇಕು. ಆದರೆ, ಹಲವೆಡೆ, ಜನರು ಎಲ್ಲ ಕಸವನ್ನೂ ಒಟ್ಟಿಗೆ ಸೇರಿಸಿ ಕವರ್ಗಳಲ್ಲಿ ಕಟ್ಟಿ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುವುದು ಮುಂದುವರೆದಿದೆ. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಅಗತ್ಯ ಮತ್ತು ಅನಿವಾರ್ಹ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




