ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದ ಜನರು ಹೆಚ್ಚಾಗಿ ವಾಸಿಸುತ್ತಿರುವ ಗೋರಿಪಾಳ್ಯ ಪ್ರದೇಶವನ್ನು ಉಲ್ಲೇಖಿಸಿ ಮಾತನಾಡಿದ್ದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಷಾನಂದ ಅವರು, ”ಗೋರಿಪಾಳ್ಯವು ಪಾಕಿಸ್ತಾನವಾಗಿದೆ. ಅದು ಭಾರತದಲ್ಲಿಲ್ಲ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ನ್ಯಾಯಾಧೀಶರೇ ಧಾರ್ಮಿಕ ದ್ವೇಷ ಬಿತ್ತುತ್ತಿದ್ದಾರೆ ಎಂಬ ಆರೋಪ ಮುನ್ನೆಲೆಗೆ ಬಂದಿದೆ.
ನ್ಯಾಯಾಧೀಶರು ಪ್ರಕರಣವೊಂದರ ವಿಚಾರಣೆ ವೇಳೆ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ, ”ಮೈಸೂರು ರಸ್ತೆ ಮೇಲುಸೇತುವೆಗೆ ಹೋಗಿ ನೋಡಿ, ಪ್ರತಿ ಆಟೋರಿಕ್ಷಾದಲ್ಲೂ 10 ಮಂದಿಯಿರುತ್ತಾರೆ. ಇಲ್ಲಿ ಕಾನೂನು ಅನ್ವಯಿಸುವುದಿಲ್ಲ. ಮೈಸೂರು ಮೇಲ್ಸೇತುವೆಯು ಗೋರಿಪಾಳ್ಯದಿಂದ ಎಡಕ್ಕೆ ಮಾರುಕಟ್ಟೆಗೆ ತೆರಳುತ್ತದೆ. ಇದು ಪಾಕಿಸ್ತಾನದಲ್ಲಿದೆ, ಭಾರತದಲ್ಲಲ್ಲ” ಎಂದಿದ್ದಾರೆ.
“ಅಲ್ಲಿಗೆ (ಗೋರಿಪಾಳ್ಯ ಪ್ರದೇಶ) ಎಷ್ಟೇ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡಿದರೂ, ಅಷ್ಟೇ” ಎಂದು ನ್ಯಾಯಾಧೀಶ ವೇದವ್ಯಾಸಾಚಾರ್ ಶ್ರೀಷಾನಂದ ಸಾಯಿ ಹೇಳಿದ್ದಾರೆ.
ಅವರ ಹೇಳಿಕೆ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ, ಅದರಲ್ಲೂ ಜಾತ್ಯತೀತವಾಗಿ ವರ್ತಿಸಬೇಕಾದ ನ್ಯಾಯಾಧೀಶರು ಇಂತಹ ಹೇಳಿಕೆ ನೀಡುವುದು ಅವರ ಹುದ್ದೆ ಮೇಲಿನ ಭರವಸೆಯನ್ನು ಕಳಚುತ್ತದೆ ಎಂದಿದ್ದಾರೆ.
”ನ್ಯಾಯಾಧೀಶರು ಬಳಸಿದ ಪದಗಳು ಅತ್ಯಂತ ಅನಪೇಕ್ಷಿತವಾಗಿವೆ. ಕಾನೂನನ್ನು ಎತ್ತಿಹಿಡಿಯಬೇಕಾದವರು ಸಹ ಭಾರತೀಯ ಮುಸ್ಲಿಮರನ್ನು ಅಮಾನವೀಯರನ್ನಾಗಿ ಉಲ್ಲೇಖಿಸುವುದು ಸರಿಯಲ್ಲ. ಇದು ಭಾರತೀಯ ಮುಸ್ಲಿಮರನ್ನು ವ್ಯವಸ್ಥಿತವಾಗಿ ಅಮಾನವೀಕರಿಸುವುದರ ಭಾಗವಾಗಿದೆ” ಎಂದು ವಸೀಮ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ನ್ಯಾಯಾಂಗದಲ್ಲಿನ ವ್ಯಕ್ತಿಯೊಬ್ಬರು ಈ ರೀತಿ ಮಾಡಿದರೆ, ಭಾರತೀಯ ಮುಸ್ಲಿಮರೊಂದಿಗೆ ಸಾಮಾನ್ಯ ಜನರು ಮತ್ತಷ್ಟು ಅಮಾನುಷವಾಗಿ ನಡೆದುಕೊಳ್ಳುವಂತಾಗುತ್ತದೆ. ನ್ಯಾಯಾಂಗ, ಪೊಲೀಸ್, ಶೈಕ್ಷಣಿಕ ಸಂಸ್ಥೆಗಳು, ಮಾಧ್ಯಮಗಳು, ಸರಕಾರ ಹಾಗೂ ಸಮಾಜದ ದೊಡ್ಡ ಸಂಖ್ಯೆಯು ಭಾರತೀಯ ಮುಸ್ಲಿಮರನ್ನು ಅವರು ಮುಸ್ಲಿಮರು ಎಂಬ ಕಾರಣಕ್ಕೇ ಹೀಗೆ ನಡೆಸಿಕೊಳ್ಳುತ್ತಿದೆ” ಎಂದು ಅವರು ಕಿಡಿಕಾರಿದ್ದಾರೆ.
ಒಂದು ತಿಂಗಳ ಹಿಂದೆ ಕಲಾಪದ ವೇಳೆ ನ್ಯಾಯಾಧೀಶರು ಈ ಹೇಳಿಕೆ ನೀಡಿರುವುದಾಗಿ ಆಲ್ಟ್ನ್ಯೂಸ್ನ ಪತ್ರಕರ್ತ ಮೊಹಮ್ಮದ್ ಝುಬೇರ್ ಮಾಹಿತಿ ಹಂಚಿಕೊಂಡಿದ್ದು, ಈ ವಿಡಿಯೋವನ್ನು ಈಗ ಬಿಜೆಪಿ ಸದಸ್ಯರು ಸೇರಿದಂತೆ ಬಲಪಂಥೀಯ ಖಾತೆಗಳು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಲು ಬಳಸಿಕೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.
“ನ್ಯಾಯಪೀಠದಲ್ಲಿ ಕುಳಿತಿರುವ ಆ ವ್ಯಕ್ತಿಗೆ ನಿಜಕ್ಕೂ ನ್ಯಾಯ ಪ್ರಜ್ಞೆ ಇದ್ದಿದ್ದರೆ ಗೋರಿಪಾಳ್ಯ, ಮಾರ್ಕೆಟ್ ರೋಡ್ಗಳಿಗೆ ಹೋದಾಗ ಅಲ್ಲಿ ‘ಪಾಕಿಸ್ತಾನ’ ಕಾಣುತ್ತಿರಲಿಲ್ಲ. ಬದಲಿಗೆ ಆ ಸ್ಲಂಗಳಲ್ಲಿ ಹೀನಾಯವಾಗಿ ಬದುಕುತ್ತಿರುವ ಮುಸ್ಲಿಮರ ಬಡತನ, ಹಸಿವು, ನಿರುದ್ಯೋಗ, ರೋಗ ರುಜಿನಗಳ ಘೋರ ಸ್ಥಿತಿ ಕಾಣುತ್ತಿತ್ತು. ಅಲ್ಲಿನ ಇಕ್ಕಟ್ಟಾದ ಗಲ್ಲಿಗಳು, ನಾಯಿ ಗೂಡಿನಂತಹ ವಸತಿಗಳು, ತೆರೆದ ಚರಂಡಿ, ಕೆಟ್ಟ ರಸ್ತೆಗಳ ದರ್ಶನ ಆಗುತ್ತಿತ್ತು. ಭಾರತದ ಮುಸ್ಲಿಮರನ್ನು ಇಲ್ಲಿನ ಪ್ರಭುತ್ವ ನಡೆಸಿಕೊಳ್ಳುತ್ತಿರುವ ರೀತಿ, ಮುಸ್ಲಿಮರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಸ್ಥೂಲ ಚಿತ್ರಣ ದೊರಕುತ್ತಿತ್ತು. ಆದರೇನು ಮಾಡುವುದು, ಈ ‘ನ್ಯಾಯಾಧೀಶ’ನಿಗೆ ಸಾಮಾಜಿಕ ನ್ಯಾಯದ ಸಾಮಾನ್ಯ ಜ್ಞಾನವೂ ಇಲ್ಲದಂತಿದೆ. ಬಹುಷಃ ಇವರು ಸಂಘದ ಪ್ರಾಡಕ್ಟ್ ಇರಬಹುದು. ಇಂತವರು ನ್ಯಾಯ ಪೀಠದಲ್ಲಿ ಮುಂದುವರಿಯಕೂಡದು. ಅದು ಭಾರತದ ನ್ಯಾಯಾಂಗಕ್ಕೆ ದೊಡ್ಡ ಅವಮಾನ. ನ್ಯಾಯ ಪೀಠದಲ್ಲಿ ಕೂತು ಮುಸ್ಲಿಮರ ಕುರಿತಾಗಿ ಆತ ಆಡಿರುವ ಮಾತುಗಳು ಜನಾಂಗ ದ್ವೇಷದಿಂದ ಕೂಡಿದೆ. ಇದು ಅಕ್ಷಮ್ಯ” ಎಂದು ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ.




