ರಸ್ತೆ ಬದಿಯಲ್ಲಿ ನಡೆದು ಹೋಗುತ್ತದ್ದ ವೃದ್ಧನಿಗೆ ಜಾಗ ಬಿಡುವಂತೆ ಹಾರ್ನ್ ಮಾಡಿದ ವ್ಯಕ್ತಿಯೊಬ್ಬ, ಬಳಿಕ, ವೃದ್ಧನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ನಾಗದೇವನಹಳ್ಳಿಯಲ್ಲಿ ನಡೆದಿದೆ. ಆರೋಪಿಯನ್ನು ನವೀನ್ ಎಂದು ಗುರುಸಲಾಗಿದ್ದು, ಅತನನ್ನು ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ವೃದ್ಧನನ್ನು ನಂಜುಂಡಪ್ಪ ಎಂದು ಹೇಳಲಾಗಿದೆ. ಅವರು ಫೆಬ್ರವರಿ 22ರ ಸಂಜೆ ಆರ್ಆರ್ ಲೇಔಟ್ನಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಿಂದಿನಿಂದ ಕಾರಿನಲ್ಲಿ ಬಂದ ರಿಲಯನ್ಸ್ ಜಿಯೋ ಫೈಬರ್ ಉದ್ಯೋಗಿಯಾಗಿರುವ ನವೀನ್, ನಂಜುಂಡಪ್ಪ ಅವರಿಗೆ ಜಾಗ ಬಿಡುವಂತೆ ಹಾರ್ನ್ ಮಾಡಿದ್ದಾರೆ. ಆಗಲೇ, ರಸ್ತೆಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ನಂಜುಂಡಪ್ಪ ಮತ್ತೂ ಪಕ್ಕಕ್ಕೆ ಹೋಗಲು ಜಾಗವಿಲ್ಲದೆ, ತಮ್ಮಷ್ಟಕ್ಕೆ ನಡೆದುಹೋಗಿದ್ದಾರೆ. ಆದರೆ, ಪದೇ-ಪದೇ ಹಾರ್ನ್ ಮಾಡಿದ ನವೀನ್, ಬಳಿಕ ಗಲಾಟೆ ಆರಂಭಿಸಿದ್ದು, ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಯ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ; ನವೀನ್ ತನ್ನ ಕಾರನ್ನು ಹಠಾತ್ತನೆ ನಿಲ್ಲಿಸಿ, ಹೊರಗೆ ಬಂದು, ವೃದ್ಧ ವ್ಯಕ್ತಿಯನ್ನು ಢಿಕ್ಕಿ ಹೊಡೆಯಲು ಪ್ರಯತ್ನಿಸುತ್ತಿರುವುದು ಮತ್ತು ಹಲ್ಲೆಗೈದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂಜುಂಡಪ್ಪ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಆರೋಪಿ ನವೀನ್ ವಿರುದ್ಧ ಬಿಎನ್ಎಸ್ ಸೆಕ್ಷನ್ 115(2), 126(2), 351, ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.




