ವೈದ್ಯೆಯಾಗಿದ್ದ ಪತ್ನಿಯನ್ನು ಕೊಂದಿದ್ದಾರೆಂಬ ಆರೋಪ ಹೊತ್ತಿರುವ ಬೆಂಗಳೂರಿನ ಸರ್ಜನ್ (ಶಸ್ತ್ರಚಿಕಿತ್ಸಕ), ಕೊಲೆ ಮಾಡಿದ ಕೆಲವೇ ನಿಮಿಷದಲ್ಲಿ ತನ್ನ ಪ್ರೇಯಸಿಗೆ ‘ನಿನಗಾಗಿ ನನ್ನ ಪತ್ನಿಯನ್ನು ಕೊಂದಿದ್ದೇನೆ’ ಎಂದು ಸಂದೇಶ ಕಳಿಸಿದ್ದರು ಎಂಬುದು ವರದಿಯಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಪ್ರಕಾರ, ಆರೋಪಿ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ಅವರು ಡಿಜಿಟಲ್ ಪಾವತಿ ಆ್ಯಪ್ನಲ್ಲಿ ತನ್ನ ಪ್ರೇಯಸಿಗೆ ಸಂದೇಶ ಕಳಹಿಸಿದ್ದಾರೆ. ಅವರ ಫೋನ್ಅನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಿದಾಗ ಈ ಸಂದೇಶ ಪತ್ತೆಯಾಗಿದೆ.
ಆರೋಪಿಯ ಪ್ರೇಯಸಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆಕೆಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವರದಿಯು, ಮೃತ ವೈದ್ಯೆಯ ಅಂಗಗಳಲ್ಲಿ ಹೆಚ್ಚಿನ ಪ್ರಮಾಣದ ಅರಿವಳಿಕೆ ಔಷಧ ಇರುವುದನ್ನು ದೃಢಪಡಿಸಿದೆ. ಇದು ಅಪರಾಧ ಕೃತ್ಯವನ್ನು ಸೂಚಿಸುತ್ತದೆ. ಅವರ ಮನೆಯಲ್ಲಿ ತಪಾಸಣೆ ನಡೆಸಿದಾಗ, ಕ್ಯಾನುಲಾ ಸೆಟ್, ಇಂಜೆಕ್ಷನ್ ಟ್ಯೂಬ್ ಹಾಗೂ ಇತರ ವೈದ್ಯಕೀಯ ವಸ್ತುಗಳು ಪತ್ತೆಯಾಗಿವೆ. ಆ ವಸ್ತುಗಳು ಸೇರಿದಂತೆ ಪ್ರಮುಖ ಪುರಾವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹೇಂದ್ರ ತನ್ನ ಪತ್ನಿ, ಚರ್ಮರೋಗ ತಜ್ಞೆ ಡಾ. ಕೃತಿಕಾ ರೆಡ್ಡಿಗೆ ಅಧಿಕ ಪ್ರಮಾಣದಲ್ಲಿ ಅರಿವಳಿಕೆ ಔಷಧ ನೀಡಿ, ಕೊಂದಿದ್ದಾರೆ. ಘಟನೆಯು ಏಪ್ರಿಲ್ 21ರಂದು ನಡೆದಿದ್ದರೂ, ತಡವಾಗಿ ಪ್ರಕರಣ ದಾಖಲಾಗಿತ್ತು. ಕೃತಿಕಾ ಅವರ ತಂದೆ ತಮ್ಮ ಮಗಳನ್ನು ಆಕೆಯ ಪತಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಅಕ್ಟೋಬರ್ 15ರಂದು ಆರೋಪಿಯನ್ನು ಬಂಧಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಹಿಂದುತ್ವವಾದಿಗಳ ಕೃತ್ಯಕ್ಕೆ ಮುಸ್ಲಿಮರ ಹೆಸರು!
“ಇಲ್ಲಿಯವರೆಗೆ ಸಂಗ್ರಹಿಸಲಾದ ಪುರಾವೆಗಳು ಡಾ. ಮಹೇಂದ್ರ ಕೃತ್ಯ ಎಸಗಿದ್ದಾರೆ ಎಂಬುದನ್ನು ಸೂಚಿಸುತ್ತವೆ. ಯಾಕೆಂದರೆ, ಆರಂಭದಲ್ಲಿ ಆಕೆಯನ್ನು ಆಸ್ಪತ್ರೆಗೆ ಕರೆತಂದದ್ದೂಆತನೇ. ಆದರೆ, ಆಕೆಗೆ ಏನಾಗಿದೆ ಎಂಬುದನ್ನು ಆತ ತಿಳಿಸಿರಲಿಲ್ಲ. ಬದಲಾಗಿ, ಆಕೆ ಹಲವು ಸಮಯಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು, ಚಿಕಿತ್ಸೆ ಪಡೆಯುತ್ತಿದ್ದರೆಂದು ಹೇಳಿಕೊಂಡಿದ್ದರು. ಆದರೆ, ಆಕೆಗೆ ನಿದ್ರಾಜನಕಗಳನ್ನು ಚುಚ್ಚುಮದ್ದು ನೀಡಲಾಗಿದೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಇದು ದುರುದ್ದೇಶಪೂರಿತ ಕೃತ್ಯವೆಂದು ಕಾಣುತ್ತಿದೆ” ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕಳೆದ ವರ್ಷ ಮೇ 26ರಂದು ಮಹೇಂದ್ರ ಮತ್ತು ಕೃತಿಕಾ ವಿವಾಹವಾದರು. ಅವರಿಬ್ಬರೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.




