ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆಗಾಗಿ ಬಂದಿದ್ದ ಶಿಕ್ಷಕಿಯನ್ನು ಅಂಗಡಿ ಮಾಲೀಕನೊಬ್ಬ ತನ್ನ ಮನೆಯ ಕಾಂಪೌಂಡ್ನಲ್ಲಿ ಕೂಡಿ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿ ಅಂಗಡಿ ಮಾಲೀಕನನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟಿ ಹೊಸಹಳ್ಳಿ ನಿವಾಸಿ ಬಿ.ಆರ್. ಸಂದೀಪ್ ಬಂಧಿತ ಆರೋಪಿ. ಹೊಸಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಶೀಲಮ್ಮ ಅವರು ಮನೆ-ಮನೆಗೆ ತೆರಳಿ ಜಾತಿ ಸಮೀಕ್ಷೆ ನಡೆಸುತ್ತಿದ್ದರು. ಅಂತೆಯೇ, ಸಂದೀಪ್ ಮನೆಗೂ ಸಮೀಕ್ಷೆ ನಡೆಸಲು ಬಂದಿದ್ದಾರೆ. ಈ ವೇಳೆ, ಮನೆಯಲ್ಲಿi ಸಂದೀಪ್ ಅವರ ತಾಯಿ ಇದ್ದರು. ಆಕೆಯ ಬಳಿ ಆಧಾರ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೇಳಿದ್ದಾರೆ. ಇದೇ ಸಮಯಕ್ಕೆ ಮನೆಗೆ ಬಂದ ಸಂದೀಪ್, ಶಿಕ್ಷಕಿಯೊಂದಿಗೆ ಜಗಳ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿ ಸಂದೀಪ್, ‘ನೀನು ಯಾವ ಕಂಪನಿಯಿಂದ ಬಂದಿದ್ದೀಯಾ? ಒಟಿಪಿ ಯಾಕೆ ತೆಗೆದುಕೊಳ್ಳುತ್ತಿದ್ದೀಯಾ’ ಎಂದು ಗಲಾಟೆ ಮಾಡಿದ್ದಾರೆ. ಶಿಕ್ಷಕಿ ತನ್ನ ಗುರುತಿನ ಚೀಟಿ ತೋರಿಸಿದರೂ, ಆರೋಪಿ ದಾಂಧಲೆ ನಡೆಸಿದ್ದಾರೆ. ಅಲ್ಲದೆ, ಶಿಕ್ಷಕಿಗೆ ಮನೆಯಿಂದ ಹೊರಹೋಗಲು ಬಿಡದೆ, ಮನೆಯ ಕಾಂಪೌಂಡ್ ಒಳಗೆ ಕೂಡಿ ಹಾಕಿ, ಬೀಗ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ.
ವಾಗ್ವಾದದ ನಂತರ ಶಿಕ್ಷಕಿ ಸುಶೀಲಿಮ್ಮ ಪೊಲೀಸರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಗೇಟ್ ಬೀಗ ತೆಗೆಸಿ, ಶಿಕ್ಷಕಿಯನ್ನು ಹೊರಗೆ ಕರೆತಂದಿದ್ದಾರೆ. ಬಳಿಕ ಶಿಕ್ಷಕಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ಸಂದೀಪ್ನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆತನಿಗೆ ನ್ಯಾಯಾಲಯವು ಜಾಮೀನು ನೀಡಿದೆ.




