ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ್ದವರು, ದಂಡ ಪಾವತಿಸಲು 50% ರಿಯಾಯತಿಯನ್ನು ಸರ್ಕಾರ ಘೋಷಿಸಿದೆ. ರಿಯಾಯತಿ ಅವಕಾಶ ಬಳಸಿಕೊಂಡು ಕಳೆದ 8 ದಿನಗಳಲ್ಲಿ 2,47,777 ವಾಹನಗಳ ಮಾಲೀಕರು ದಂಡ ಪಾವತಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟು 7.02 ಕೋಟಿ ರೂ. ದಂಡ ಸಂಗ್ರಹವಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಸಂಗ್ರಹಿಸಲು ಯೋಜಿಸಿದ್ದ ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರು, ಮತ್ತೆ 50% ರಿಯಾಯತಿ ಅವಕಾಶವನ್ನು ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವವನ್ನು ಸರ್ಕಾರ ಅನುಮೋದಿಸಿದ್ದು, ನವೆಂಬರ್ 21ರಿಂದ ರಿಯಾಯತಿ ದರವನ್ನು ಜಾರಿಗೆ ತಂದಿದೆ.
ರಿಯಾಯತಿಯಲ್ಲಿ ದಂಡ ಪಾವತಿಸಲು ಡಿಸೆಂಬರ್ 12ರವರೆಗೆ ಅವಕಾಶ ಇರಲಿದೆ.
ದಂಡ ಪಾವತಿ ಮಾಡುವವರು ಕೆಎಸ್ಪಿ ಆ್ಯಪ್, ಬಿಟಿಪಿ, ಬೆಂಗಳೂರು ಒನ್, ಕರ್ನಾಟಕ ಒನ್, ಟ್ರಾಫಿಕ್ ಪೊಲೀಸರ ಮೂಲಕ ಪಾವತಿ ಮಾಡಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.





