ಸಾಮಾಜಿಕವಾಗಿ ತೊಡಗಿಸಿಕೊಂಡ ನಾಟಕ ಪ್ರದರ್ಶನಗಳ ಮೂಲಕವೇ ಗುರುತಿಸಿಕೊಂಡಿರುವ ಜಂಗಮ ಕಲೆಕ್ಟಿವ್ ಆರಂಭವಾಗಿ ಆರು ವರ್ಷವಾಗುತ್ತಿದ್ದು ಸಂಭ್ರಮದ ಭಾಗವಾಗಿ ನವೆಂಬರ್ 22ರಂದು ತಂಡದ ಜನಪ್ರಿಯ ನಾಟಕ ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ನಾಟಕವು ರಂಗಶಂಕರದಲ್ಲಿ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 3:30 ಮತ್ತು ಸಂಜೆ 7:30 ಗಂಟೆಗೆ ಎರಡು ಪ್ರದರ್ಶನಗಳಿರಲಿವೆ.
ಕಳೆದಾರು ವರ್ಷಗಳಿಂದ ಜಾತಿ, ಗುರುತು, ರಾಜಕೀಯ ಮತ್ತು ಸಮಾಜದ ವಾಸ್ತವಗಳನ್ನು ಪ್ರಶ್ನಿಸುವ, ಸವಾಲು ಹಾಕುವ ನಾಟಕಗಳನ್ನು ಕಟ್ಟಿಕೊಳ್ಳುವ ಮೂಲಕವೇ ಹೆಸರುವಾಸಿಯಾಗಿರುವ ಜಂಗಮ ಕಲೆಕ್ಟಿವ್, ನಾಟಕ ಮಾತ್ರವಲ್ಲದೆ ಉಚಿತ ಛಾಯಾಗ್ರಹಣ ಕಾರ್ಯಾಗಾರ, ಡಾಕ್ಯುಮೆಂಟರಿ ಪ್ರದರ್ಶನ, ಚಲನಚಿತ್ರ ತರಗತಿಗಳುಗಳನ್ನು ನಡೆಸುತ್ತಾ ಬಂದಿದೆ. ಜತೆಗೆ ಜಾತಿ ರಾಜಕೀಯ, ಸಾಂಸ್ಕೃತಿಕ ರಾಜಕೀಯ ಮೊದಲಾದವುಗಳ ಬಗ್ಗೆ ಮುಕ್ತ ಸಂವಾದಗಳನ್ನೂ ಆಯೋಜಿಸಿದೆ.
ಇದನ್ನು ಓದಿದ್ದೀರಾ? ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’: ಸಾಮಾಜಿಕ ಮೌಲ್ಯವಾಗದ ಲಿಬರಲ್ ಮುಖ
“ನಾಟಕ ನಮಗೆ ಕೇವಲ ವೇದಿಕೆಯ ಪ್ರದರ್ಶನವಲ್ಲ. ಅದು ನಾವು ಬದುಕುತ್ತಿರುವ ಜಗತ್ತನ್ನು ಪ್ರಶ್ನಿಸುವ ಒಂದು ಮಾರ್ಗ ಮತ್ತು ಹೊಸ ಸಾಧ್ಯತೆಗಳನ್ನು ಒಟ್ಟಿಗೆ ಕಲ್ಪಿಸಿಕೊಳ್ಳುವ ಒಂದು ಪ್ರಯತ್ನ” ಎಂದು ಸದಸ್ಯರೊಬ್ಬರು ಹೇಳಿದ್ದಾರೆ.
ಲಕ್ಷ್ಮಣ ಕೆ.ಪಿ. ನಿರ್ದೇಶನದ ನನ್ನಜ್ಜ, ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ, ದಕ್ಲಕಥಾ ದೇವಿಕಾವ್ಯ, ವಿ ದಿ ಪೀಪಲ್ ಆಫ್ ಇಂಡಿಯಾ, ಶ್ರದ್ಧಾ ರಾಜ್ ನಿರ್ದೇಶನದ ರುಮುರುಮುರುಮು, ಚಂದ್ರಶೇಖರ ಕೆ ಅವರ ಪಂಚಮ ಪದ, ಚಂದ್ರಶೇಖರ ಕೆ ಸಾಂಗ್ ಆಫ್ ದ ಗೆಟ್ಟೊ — ಚಿಕ್ಕ ಚಲನಚಿತ್ರ ಜಂಗಮ ಕಲೆಕ್ಟಿವ್ನ ಪ್ರಮುಖ ನಾಟಕಗಳು.

ಈ ನಾಟಕಗಳು ಐಟಿಎಫ್ಓಕೆ (ಕೇರಳ ಅಂತಾರಾಷ್ಟ್ರೀಯ ನಾಟಕೋತ್ಸವ, ತ್ರಿಶೂರ್), ಮೆಟಾ (ಮಹೀಂದ್ರ ಎಕ್ಸಲೆನ್ಸ್ ಇನ್ ಥಿಯೇಟರ್ ಅವಾರ್ಡ್ಸ್, ನವದೆಹಲಿ), ಕೆಎನ್ಎಂಎ (ಕಿರಣ್ ನಾದಾರ್ ಮ್ಯೂಸಿಯಂ ಆಫ್ ಆರ್ಟ್, ನವದೆಹಲಿ), ಟಾಟಾ ಲಿಟ್ ಫೆಸ್ಟ್ (ಮುಂಬೈ), ಸೆರಂಡಿಪಿಟಿ ಆರ್ಟ್ಸ್ ಫೆಸ್ಟಿವಲ್ (ಗೋವಾ) ಮತ್ತು ಧಮ್ಮಾ ನಾಟಕೋತ್ಸವ (ಚೆನ್ನೈ) ಸೇರಿದಂತೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಪ್ರಮುಖ ಉತ್ಸವಗಳಿಗೆ ಆಹ್ವಾನಿಸಲ್ಪಟ್ಟಿವೆ. ಹಾಗೆಯೇ ಜಂಗಮಾ ಕಲಾವಿದರು ಮೆಟಾ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ (ಸಂತೋಷ್ ದಿಂಡಗೂರು) ಮತ್ತು ಅತ್ಯುತ್ತಮ ಸಹನಟ (ಭರತ್ ಡಿಂಗ್ರಿ) ಪ್ರಶಸ್ತಿಗಳನ್ನು ಪಡೆದಿದ್ದಾರೆ.





