ಗಾಂಧಿ ಜಯಂತಿಯ ದಿನದಂದು ಶಾಲೆಯ ಪ್ರಾಂಶುಪಾಲರು ಚಪ್ಪಲಿ ಧರಿಸಿ ರಾಷ್ಟ್ರಧ್ವಜದ ಮೇಲೆ ನಿಂತಿರುವ ತಿರುಚಿದ ಚಿತ್ರವನ್ನು ವಿದ್ಯಾರ್ಥಿಯೊಬ್ಬರು ಹಂಚಿಕೊಂಡಿದ್ದರು. ಆ ಚಿತ್ರದ ಆಧಾರದ ಮೇಲೆ ಪ್ರಾಂಶುಪಾಲರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಬೆಂಗಳೂರಿನ ನಾಗಸಂದ್ರದ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ವೇಣುಗೋಪಾಲ್ ಬಿ.ಸಿ ವಿರುದ್ಧ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪ ಹೇಳಿಬಂದಿತ್ತು. ಅದೇ ಶಾಲೆಯ ವಿದ್ಯಾರ್ಥಿಯೊಬ್ಬ ತಮ್ಮ ಪ್ರಾಂಶುಪಾಲರು ಚಪ್ಪಲಿ ಧರಿಸಿ ರಾಷ್ಟ್ರಧ್ವಜದ ಮೇಲೆ ನಿಂತಿರುವಂತೆ ಚಿತ್ರವನ್ನು ತಿರುಚಿ ತಮ್ಮ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಂಚಿಕೊಂಡಿದ್ದರು. ಆ ಚಿತ್ರವನ್ನು ಆಧರಿಸಿ 2024ರ ಅಕ್ಟೋಬರ್ 5ರಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿಸಿದ ಪ್ರಾಂಶುಪಾಲರ ವಿರುದ್ಧ ‘ರಾಷ್ಟ್ರೀಯ ಸಂಕೇತಗಳ ಅವಮಾನ ತಡೆ ಕಾಯ್ದೆ-1971ರ ಸೆಕ್ಷನ್ 2ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.
ತಮ್ಮ ವಿರುದ್ಧ ದಾಖಲಾದ ಪ್ರಕರಣದ ಕಾನೂನುಬದ್ದತೆಯನ್ನುಪ್ರಶ್ನಿಸಿ ವೇಣುಗೋಪಾಲ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.ತಮ್ಮ ಚಿತ್ರವನ್ನು ಎಡಿಟ್ ಮಾಡಿ, ರಾಷ್ಟ್ರಧ್ವಜಕ್ಕೆ ಅಗೌರವ ತೋರಿರುವಂತೆ ಚಿತ್ರಿಸಲಾಗಿದೆ ಎಂದು ವಾದಿಸಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು, ಅರ್ಜಿದಾರ ಪ್ರಾಂಶುಪಾಲರು ಸಲ್ಲಿಸಿದ್ದ ಮೂಲ ಚಿತ್ರ ಮತ್ತು ಎಡಿಟ್ ಮಾಡಿದ ಚಿತ್ರಗಳನ್ನು ಹೋಲಿಸಿ ಪರಿಶೀಲಿಸಿದ್ದಾರೆ. ಬೇರೆಡೆ ತೆಗೆದ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂಬುದನ್ನು ಗಮನಿಸಿದ್ದಾರೆ. ಬಳಿಕ, ಪ್ರಾಂಶುಪಾಲರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಿದ್ದಾರೆ.
ಪ್ರಾಂಶುಪಾಲರ ಚಿತ್ರವನ್ನು ಸಂಪಾದಿಸಿದ್ದಾರೆ ಎನ್ನಲಾದ ವಿದ್ಯಾರ್ಥಿ ಕೂಡ, ಘಟನೆ ಬೆಳಕಿಗೆ ಬಂದ ನಂತರ ಲಿಖಿತ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.




