ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಪರಿಶೀಲಿಸಿ, ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ ಅವರು ಭರವಸೆ ನೀಡಿದ್ದಾರೆ. ಅವರು ತಮ್ಮ ಭರವಸೆಯನ್ನು ಪೂರೈಸಲು 2026ರ ಫೆಬ್ರವರಿಯಲ್ಲಿ ನಡೆಯಲಿರುವ ಕೇಂದ್ರ ಬಜೆಟ್ ಅಧಿವೇಶನದವರೆಗೆ ಕಾಯುತ್ತೇವೆ. ಬಜೆಟ್ನಲ್ಲಿ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಲಿದ್ದರೆ, ಹೋರಾಟಗಳು ಭುಗಿಲೇಳಲಿವೆ ಎಂದು ಸಿಐಟಿಯು ನಾಯಕಿ ಎಸ್ ವರಲಕ್ಷ್ಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾನಾಡಿದರು. “ಡಿಸೆಂಬರ್ 1ರಿಂದ ರಾಜ್ಯದಲ್ಲಿರುವ ಕೇಂದ್ರ ಸಚಿವ ನಿವಾಸಗಳ ಎದುರು ಸುಮಾರು 40,000 ಅಂಗನವಾಡಿ, ಸಿಬಿಯೂಟ ಹಾಗೂ ಆಶಾ ಕಾರ್ಯಕರ್ತೆಯರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದರು. ಬೆಂಗಳೂರು, ಮಂಡ್ಯ, ತುಮಕೂರು ಹಾಗೂ ಹುಬ್ಬಳ್ಳಿಯಲ್ಲಿ ಧರಣಿಗಳು ಆರಂಭಗೊಂಡಿದ್ದವು. ನಮ್ಮ ಹೋರಾಟಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಡಿ.3ರಂದು ದೆಹಲಿಯಲ್ಲಿ ಕೇಂದ್ರ ಸಚಿವೆ ಅನ್ನಪೂರ್ಣದೇವಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಸಭೆ ನಡೆಸಿದರು” ಎಂದು ತಿಳಿಸಿದ್ದಾರೆ.
“ಸಭೆಯಲ್ಲಿ ಕೇಂದ್ರ ಸರ್ಕಾರವು 2009ರಿಂದ ಬಿಸಿಯೂಟ ನೌಕರರು ಮತ್ತು 2018ರಿಂದ ಅಂಗನವಾಡಿ, ಅಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿಲ್ಲ. ವೇತನ ಹೆಚ್ಚಳ ಮಾಡಬೇಕು. ಬಿಸಿಯೂಟ ನೌಕರರಿಗೆ 12 ತಿಂಗಳೂ ವೇತನ ನೀಡಬೇಕು. ಅವರ ಕೆಲಸವನ್ನು ಕಾಯಂ ಗೊಳಿಸಬೇಕು. ಅಂಗನವಾಡಿ ನೌಕರರಿಗೆ ಇರುವ ‘ಫೇಸ್ ರಿಕಗ್ನಿಷನ್ ಸಿಸ್ಟಮ್’ (ಎಫ್ಆರ್ಎಸ್) ರದ್ದು ಹಿಂಪಡೆಯಬೇಕು. ಅಂಗನವಾಡಿ ಮಕ್ಕಳು ಮತ್ತು ಮಹಿಳೆಯರಿಗೆ ಸಿದ್ದ ಆಹಾರವನ್ನು ಪೂರೈಕೆ ಮಾಡಬಾರದು ಎಂಬ ಹಕ್ಕೊತ್ತಾಯಗಳನ್ನು ಧರ್ಮೇಂದ್ರ ಪ್ರಧಾನ್ ಮತ್ತು ಅನ್ನಪೂರ್ಣದೇವಿ ಅವರ ಮುಂದಿಟ್ಟಿದ್ದೇವೆ. ನಮ್ಮ ಬೇಡಿಕೆಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ” ಎಂದು ವಿವರಿಸಿದ್ದಾರೆ.
“ಸಚಿವರ ಭರವಸೆಯಂತೆ ನಮ್ಮ ಹೋರಾಟವನ್ನು ಮುಂದೂಡಿದ್ದೇವೆ. 2026ರ ಫೆಬ್ರವರಿಯಲ್ಲಿ ಮಂಡನೆಯಾಗುವ ಕೇಂದ್ರ ಬಜೆಟ್ವರೆಗೆ ಕಾಯುತ್ತೇವೆ. ಬಜೆಟ್ನಲ್ಲಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರವು ಕ್ರಮ ಕೈಗೊಳ್ಳದಿದ್ದರೆ, ಮುಂದಿನ ಹೋರಾಟದ ಕುರಿತು ನಿರ್ಧರ ತೆಗೆದುಕೊಳ್ಳುತ್ತೇವೆ” ಎಂದು ವಿವರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಸುನಂದ, ಕರ್ನಾಟಕ ರಾಜ್ಯ ಬಿಸಿಯೂಟ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ ಮತ್ತು ಖಜಾಂಚಿ ಮಹದೇವಮ್ಮ, ಕರ್ನಾಟಕ ರಾಜ್ಯ ಆಶಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಯಮುನಾ ಗಾಂವ್ಕರ್ ಇದ್ದರು.




