ವಿಶೇಷಚೇತನರನ್ನು ಕುರೂಪಿಗಳು, ಭಿಕ್ಷುಕರು ಎಂದು ಅವಹೇಳನ ಮಾಡಿರುವ ನರೇಂದ್ರ ಬಾಬು ಶರ್ಮಾ ಅಲಿಯಾಸ್ ಬ್ರಹ್ಮಾಂಡ ಗುರೂಜಿ ವಿರುದ್ಧ ದೂರು ದಾಖಲಾಗಿದೆ. ಆತನ ವಿರುದ್ಧ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ವಿಶೇಷಚೇತನ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿ ‘ಗ್ಯಾರಂಟಿ ನ್ಯೂಸ್’ನಲ್ಲಿ ಪ್ರತಿನಿತ್ಯ ಕಾರ್ಯಕ್ರಮ ನಡೆಸುವ ಬ್ರಹ್ಮಾಂಡ ಗುರೂಜಿ, ಮಹಾಲಯ ಅಮಾವಾಸ್ಯೆಯಂದು ಆಚರಿಸಲಾಗುವ ‘ಪಿತೃಪಕ್ಷ’ ಹಬ್ಬದ ಕುರಿತು ಸೆಪ್ಟೆಂಬರ್ 20ರ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಈ ವೇಳೆ, “ಪಿತೃಪಕ್ಷದ ದಿನ ಯಾರೆಲ್ಲ ಮಾಂಸಾಹಾರವನ್ನು ತಮ್ಮ ಪಿತೃಗಳಿಗೆ ಎಡೆ ಇಡುತ್ತೀರಾ. ಆ ಮಾಂಸಾಹಾರದ ಎಡೆಯನ್ನು ನೀವೇ ತಿನ್ನಬಾರದು. ಅದ್ನು ಅಂಗವಿಕಲ, ಕುರೂಪಿ, ಭಿಕ್ಷುಕನಿಗೆ ಕೊಡಿ. ಯಾಕೆಂದರೆ, ನಿಮ್ಮ ಪಿತೃಗಳು ಅವರ ರೂಪದಲ್ಲಿ ಬಂದು ಎಡೆಯನ್ನ ತಿನ್ನುತ್ತಾರೆ” ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಮಾಂಸಾಹಾರವನ್ನು ಹೊಲಸು ಎಂದು ನೋಡುವ ಈ ಬ್ರಹ್ಮಾಂಡ ಗುರೂಪಿ ಮಾಂಸಾಹಾರ ತಿನ್ನುವವರಿಗೂ ಅವಮಾನಿಸಿದ್ದಾರೆ. ತನ್ನ ಮನದಲ್ಲಿರುವ ವಿಕೃತಿಯನ್ನು ಹೊರಹಾಕುವ ಮೂಲಕ ವಿಶೇಷಚೇತನರನ್ನೂ ಅಪಮಾನಿಸಿದ್ದಾರೆ.
ಆತನ ಮಾತುಗಳಿಂದ ನೊಂದ, ವಿಶೇಷಚೇತನ ಹರೀಶ್ ಎಂಬುವರು, ಬ್ರಹ್ಮಾಂಡ ಗೂರುಜಿ ಅಲಿಯಾಸ್ ನರೇಂದ್ರ ಬಾಬು ಶರ್ಮಾ ಮತ್ತು ಗ್ಯಾರಂಟಿ ನ್ಯೂಸ್ ಚಾನೆಲ್ ವಿರುದ್ಧ ದೂರು ದಾಖಲಿಸಿದ್ದಾರೆ.
“ಉತ್ತಮ ಸಂದೇಶಗಳನ್ನು ನೀಡಬೇಕಾದ ಗುರೂಜಿಗಳು ಮೌಡ್ಯತೆ ಬಿತ್ತಿ ಸಮಾಜದಲ್ಲಿ ಶಾಂತಿ ಹಾಳುಮಾಡುತ್ತಿದ್ದಾರೆ. ಹುಟ್ಟಿನಿಂದ ನಾನು ಅಂಗವೈಕಲ್ಯಕ್ಕೆ ತುತ್ತಾಗಿದ್ದೇನೆ. ಅದರೂ, ಸ್ವಾವಲಂಬನೆಯಿಂದ ಜೀವನ ಮಾಡುತ್ತಿದ್ದೇನೆ. ಮೃತಪಟ್ಟವರಿಗೆ ಇಡುವ ಪಿಂಡವನ್ನು ನಮ್ಮಂಥವರಿಗೆ ನೀಡುವಂತೆ ಹೇಳುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹರೀಶ್ ಅವರ ದೂರಿನ ಆಧಾರದ ಮೇಲೆ ನರೇಂದ್ರ ಬಾಬು ಮತ್ತು ನ್ಯೂಸ್ ಚಾನೆಲ್ ವಿರುದ್ಧ ಎನ್ಸಿಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.




