ಭಾರತದ ಸಂವಿಧಾನ ನೀಡಿರುವ ವಾಗ್ದಾನ ಮತ್ತು ಆಶಯದಂತೆ ದೇಶದ ಪ್ರತಿಯೊಬ್ಬ ನಾಗರಿಕರು ಜಾತಿ, ವರ್ಗ, ವರ್ಣ, ಲಿಂಗ, ಧರ್ಮಗಳಿಂದ ಸಮಾನ ಹಕ್ಕು ಮತ್ತು ಗೌರವಗಳನ್ನು ಹೊಂದಿದ್ದು, ದೇಶದ ಪ್ರಜೆಗಳೇ ಆಗಿರುವ ದಲಿತರು, ಆದಿವಾಸಿಗಳು, ಮಹಿಳೆಯರು, ಅಲ್ಪಸಂಖ್ಯಾತರಿಗೂ ಸಮಾನ ಅವಕಾಶಗಳನ್ನು
ನೀಡುವ ಮತ್ತು ಸಾಮಾಜಿಕ ನ್ಯಾಯ ಒದಗಿಸುವಂತಹ ನೀತಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಆಗ್ರಹಿಸಲು 18 ನವಂಬರ್ 2025 ರಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ರಾಷ್ಟ್ರಿಯ ಮಂಡಳಿ ದೇಶವ್ಯಾಪಿ ಚಳವಳಿಗೆ ನೀಡಿದ್ದ ಕರೆಯಂತೆ ಇಂದು ಬೆಂಗಳೂರಿನ ಫ್ರೀಡಂ
ಪಾರ್ಕಿನಲ್ಲಿ ಪ್ರತಿಭಟನೆ ನಡೆಸಲಾಯಿತು.
“ಜಗತ್ತಿನಾದ್ಯಂತ ವಸಹಾತುಶಾಹಿ ಹಾಗೂ ಬಂಡವಾಳಗಾರರ ಶೋಷಣೆಯ ವಿರುದ್ಧ ನಡೆಸಿದ ಹೋರಾಟದ ಪರಿಣಾಮ ಭಾರತವು ಸೇರಿದಂತೆ ಹಲವು ದೇಶಗಳಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಕೊಂಡಿತ್ತು. ಭಾರತವು ಸ್ವಾತಂತ್ರ್ಯಗೊಂಡು ಎಂಟು ದಶಮಾನಗಳಾಗುತ್ತಿದ್ದರೂ ಸಹ ದೇಶದಲ್ಲಿ ಅನುಸರಿಸಲಾಗುತ್ತಿರುವ ಜಾತಿ ಆಧಾರಿತ ಶೋಷಣೆ, ಅಸ್ಪೃಶ್ಯತೆ, ಧಾರ್ಮಿಕ ಅಸಹಿಷ್ಣುತೆ, ಲಿಂಗ ತಾರತಮ್ಯ ಹಾಗೂ
ಮಹಿಳೆಯರ ಮೇಲಿನ ದೌರ್ಜನ್ಯಗಳು ಶೋಷಣೆ, ದಬ್ಬಾಳಿಕೆಗಳು ಭಾರತದ ಗಣತಂತ್ರ ವ್ಯವಸ್ಥೆಗೆ ಕಳಂಕವಾಗಿ ಪರಿಣಮಿಸಿವೆ.
ರಾಷ್ಟ್ರಿಯ ಅಪರಾಧಗಳ ದಾಖಲೆಯ ವರದಿಯ ಪ್ರಕಾರವೇ ಭಾರತದಲ್ಲಿ ಪ್ರತಿಯೊಂದು ನಿಮಿಷಕ್ಕೆ ಮಹಿಳೆಯರ ಮೇಲೆ ದಲಿತರ ಮೇಲೆ ದೌರ್ಜನ್ಯ ಎಸುಗುವಂತಹ ಪ್ರಕರಣಗಳು ದಾಖಲಾಗುತ್ತಲೇ
ಇವೆ. ಜನರು ಸೇವಿಸುವ ಆಹಾರ, ಉಡುಗೆ ತೊಡುಗೆಗಳ ಮೇಲೆ ಕೆಂಗಣ್ಣು ಬೀರುವಂತಹ ಅಸ್ಪೃಶ್ಯತೆ ಮತ್ತು ಧಾರ್ಮಿಕ ಅಸಹಿಷ್ಣುತೆಯ ಭಾಗವಾಗಿ ಗುಂಪು ಹತ್ಯೆ, ದೌರ್ಜನ್ಯ ಎಸಗುವಂತಹ ಪ್ರಕರಣಗಳು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಮಹಿಳೆಯರ ಮೇಲಿನ ಅತ್ಯಾಚಾರಗಳು, ಕೊಲೆಗಳು ನಾಗರಿಕ ಸಮಾಜ ನಲುಗುವಂತೆ ಮಾಡಿದೆ.
ಬಿಹಾರದ ಬೆಲ್ಚಿ ಪ್ರಕರಣ, ತಮಿಳುನಾಡಿನ ಕಿಲ್ಲ್ವೆನ್ಮಣಿ ಹತ್ಯಾಕಾಂಡ, ಕರ್ನಾಟಕದ ಬದನವಾಳು, ಕೋಲಾರದ ಕಂಬಾಲಪಲ್ಲಿ, ಕೊಪ್ಪಳದ ಮರಕುಂಬಿ, ಮಹಾರಾಷ್ಟ್ರದ ಖೈರ್ಲಾಂಜಿ, ಉತ್ತರ
ಪ್ರದೇಶದ ಹತ್ರಾಸ್, ಗುಜರಾತ್ ಹತ್ಯಾಕಾಂಡ, ಮಣಿಪುರದ ಜನಾಂಗೀಯ ಹಿಂಸಾಚಾರ, ಬಿಲ್ಕಿಸ್ ಬಾನೊ ಪ್ರಕರಣ, ಧರ್ಮಸ್ಥಳದ ಸೌಜನ್ಯ ಪ್ರಕರಣವು ಸೇರಿದಂತೆ ಸರಣೀಕೃತವಾಗಿ ಮುಂದುವರೆಯುತ್ತಲೇ ಇವೆ.
ಸಂವಿಧಾನದ ಬದಲಿ ಮನುಸ್ಮೃತಿಯನ್ನು ಪ್ರತಿಪಾದಿಸುವ ಹುನ್ನಾರಗಳು ಮತೀಯವಾದಿಗಳು ಆರಂಭಿಸುತ್ತಿದ್ದು, ಅಸಹಿಷ್ಣುತೆ ಎಂಬುದು ನ್ಯಾಯಮೂರ್ತಿ ಗವಾಯಿ ಅವರ ಮೇಲೆ ವಕೀಲ ವೃತ್ತಿಯಲ್ಲಿರುವವರು ಶೂ ಎಸೆಯುವಂತಹ ಹೀನಾಯ ಮಟ್ಟಕ್ಕೆ ತಲುಪಿದೆ. ಈ ಮನುಷ್ಯತ್ವ ವಿರೋಧಿ ನಡವಳಿಕೆಗಳು ಸಮಾಜದ ಐಕ್ಯತೆ ಸೌಹಾರ್ದತೆ ಸದ್ಭಾವನೆಯನ್ನು ನಾಶ ಮಾಡುವಂತಹದ್ದಾಗಿದ್ದು ನಾಗರಿಕ ಸಮಾಜಕ್ಕೆ ವಿರುದ್ಧವಾದ ಮೃಗೀಯ ವರ್ತನೆಗಳಾಗಿವೆ. ಆದುದರಿಂದ ಭಾರತದ ಸಂವಿಧಾನದ ಆಶಯದಂತೆ ಜಾತಿ, ಧರ್ಮ, ವರ್ಣ, ಲಿಂಗಗಳ ತಾರತಮ್ಯವಿಲ್ಲದ, ದಲಿತರು, ಆದಿವಾಸಿಗಳು, ಮಹಿಳೆಯರು, ಅಲ್ಪಸಂಖ್ಯಾತರಿಗೂ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸಿಪಿಐ ದೇಶ ವ್ಯಾಪಿ ಚಳವಳಿ ನಡೆಸಲು ಮುಂದಾಗಿದೆ” ಎಂದು ಸಿಪಿಎಂ ಮುಖಂಡರು ತಿಳಿಸಿದರು.






