ದಲಿತರು ಉದ್ಯಮಿಗಳಾಗಲು ಶ್ರಮವಹಿಸಿ ಕೆಲಸ ಮಾಡಬೇಕು. ನಾವು ಮಾಡುವ ಉತ್ಪಾದಕ ವಸ್ತುಗಳು ಹೆಚ್ಚು ಗುಣಮಟ್ಟದ್ದಾಗ ಮಾತ್ರ ನಮ್ಮ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದು ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ(DICCI) ಬುಡಕಟ್ಟು ವಿಭಾಗದ ರಾಷ್ಟ್ರ ಉಪಾಧ್ಯಕ್ಷರಾದ ಡಾ. ರಾಜಾ ನಾಯಕ್ ಹೇಳಿದರು.
ದಲಿತ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ(DICCI) ಕರ್ನಾಟಕ ಅಧ್ಯಾಯ – ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆದ ಉದ್ಯಮ ಜಾಗೃತಿ ಮತ್ತು ಮಹಿಳಾ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ, “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಜನರು ಉದ್ಯಮಿಗಳಾಗಲು ಶ್ರಮಿಸಬೇಕು. ಯಾವುದೇ ಒಂದು ಉದ್ಯಮವನ್ನು ಪ್ರಾರಂಭ ಮಾಡಬೇಕಾದರೆ ಅದಕ್ಕೆ ಸಂಪೂರ್ಣ ಗಮನವನ್ನು ನೀಡಬೇಕು. ನಮ್ಮ ಡಿಕ್ಕಿ ಸಂಸ್ಥೆ ದೊಡ್ಡ ದೊಡ್ಡ ಕನಸುಗಳನ್ನು ಕಾಣುವಂತೆ ಪ್ರೇರಿಪಿಸುತ್ತದೆ. ನಮಗೆ ನಾವು ಆರ್ಥಿಕವ್ಯಕ್ತಿತ್ವ, ಆರ್ಥಿಕ ಶಿಸ್ತುಗಳನ್ನು ರೂಢಿಸಿಕೊಳ್ಳಬೇಕು. ಕೇವಲ ಕೆಲಸಗಾರರಾಗಿ ದುಡಿಯುವುದಷ್ಟೇ ಅಲ್ಲ ಕೆಲಸಕೊಡುವವರನ್ನು ರೂಪಿಸಬೇಕು ಎಂಬುದು ನಮ್ಮ ಧ್ಯೇಯವಾಗಿದೆ” ಎಂದರು.
ಇದನ್ನು ಓದಿದ್ದೀರಾ? ಯುದ್ಧ ವರದಿ | ಇರಾನ್ ಮೇಲೆ ದಾಳಿ; ಭಾರತೀಯರಿಗೆ ಸಹಾಯವಾಣಿ ಬಿಡುಗಡೆ
“ಉದ್ಯಮಿಗಳಾಗಲು ಮುಂದೆ ಬಂದವರಿಗೆ ಉತ್ತಮ ಮಾರ್ಗದರ್ಶನವನ್ನು ನಮ್ಮ ಸಂಸ್ಥೆ ನೀಡುತ್ತದೆ. ಈ ಅವಕಾಶವನ್ನು ತಾವು ಬಳಸಿಕೊಳ್ಳಬೇಕು ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಡಿಯಲ್ಲಿ ಉದ್ಯಮಿಗಳಾಗುವ ಕನಸು ಕಾಣುವವರಿಗೆ ಸಾಕಷ್ಟು ಅವಕಾಶಗಳಿವೆ ಅವುಗಳನ್ನು ಹೆಚ್ಚು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕು” ಎಂದು ತಿಳಿಸಿದರು.
ಕರ್ನಾಟಕ ಅಧ್ಯಾಯದ ಅಧ್ಯಕ್ಷರಾದ ಸಿ. ನರಸಿಂಹಮೂರ್ತಿಯವರು ಮಾತನಾಡಿ, “ನಾವೆಲ್ಲ ತುಂಬಾ ಕಷ್ಟಪಟ್ಟು ಈ ಹಂತಕ್ಕೆ ಬಂದಿದ್ದೇವೆ. ಈ ಹಿಂದೆ ಇದ್ದ ಪದಾಧಿಕಾರಿಗಳು ಈಗ ಇರುವವರು ಎಲ್ಲಾರೂ ಒಂದು ಕುಟುಂಬದಂತೆ ಸಂಘವನ್ನು ಮುನ್ನಡೆಸುತ್ತಿದ್ದೇವೆ ನೀವು ನಮ್ಮ ಜೊತೆ ಸೇರಿ ಹೊಸ ಉದ್ಯಮಿಗಳಾಗಿ ಹೊರ ಹೊಮ್ಮಬೇಕು” ಎಂದರು.
ಮಾಜಿ ಅಧ್ಯಕ್ಷ್ಯರಾದ ಉದ್ಯಮಿ ಬೆಳ್ಳಿ ಗಂಗಾಧರ್ ಮಾತನಾಡಿ, “ಡಿಕ್ಕಿ ಸಂಸ್ಥೆ ದೊಡ್ಡ ದೊಡ್ಡ ಕನಸುಗಳು ಕಾಣುವಂತೆ ಹಾಗೂ ದೊಡ್ಡ ದೊಡ್ಡ ಯೋಚನೆಗಳನ್ನು ಮಾಡುವಂತೆ ಮಾಡುತ್ತದೆ. ಇದು ನಮ್ಮಲ್ಲಿ ಮುಖ್ಯವಾಗಿ ಆಗಬೇಕಿರುವುದು. ಮಾಡುವ ಕೇಲಸದ ಬಗ್ಗೆ ಪ್ರೀತಿ ಮತ್ತು ಗೌರವ ಇದ್ದರೆ ಉತ್ತಮವಾದ ಪಲಿತಾಂಶ ಬರುತ್ತದೆ. ನೀವೆಲ್ಲರು ಅಧ್ಯಯನ ಶೀಲರಾಗಿ ಮತ್ತು ಉದ್ಯಮಿಗಳಾಗಬೇಕು” ಎಂದು ಹೇಳಿದರು.
ದಾವಣಗೆರೆ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಕಬ್ಬೂರುರವರು ಮಾತನಾಡಿ, “ಡಿಕ್ಕಿ ಬೆಂಬಲದಿಂದ ಸಾಕಷ್ಟು ಜನ ಉದ್ಯಮಿಗಳಾಗಿ ರೂಪುಗೊಂಡಿದ್ದಾರೆ. ನಾನು ಸಹ ಸೊನ್ನೆಯಿಂದ ಮೇಲೆದ್ದು ಬರಲು ಈ ಸಂಸ್ಥೆಯ ಮಾರ್ಗದರ್ಶನವಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಜನರಿಗೆ ಮಾರ್ಗದರ್ಶನದ ಕೊರತೆ ಇದೆ ಹಾಗಾಗಿ ಪ್ರಸ್ತುತ ಇರುವ ಅವಕಾಶಗಳ ಬಗ್ಗೆಯೂ ಮಾರ್ಗದರ್ಶನ ಇರುವುದಿಲ್ಲ. ನಾವು ಸಹ ನಮ್ಮ ಜಿಲ್ಲಾ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯಮಿಗಳಿಗೆ ಮಾರ್ಗದರ್ಶನವನ್ನು ನೀಡುವ ಕಾರ್ಯಗಾರಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಅವು ಯಶಸ್ವಿ ಆಗುತ್ತಿವೆ” ಎಂದು ತಿಳಿಸಿದರು.
ಇದೇ ತಿಂಗಳಲ್ಲಿ ಡಿಕ್ಕಿ ಸಂಸ್ಥೆ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಹೊಸ ಯುವ ಮಹಿಳಾ ಉದ್ಯಮಿಗಳಿಗೆ ಮಾರ್ಗದರ್ಶನ ಮತ್ತು ತರಬೇತಿಯ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ತಿಳಿಸಲಾಯಿತು. ಈ ಜಾಗೃತಿ ಕಾರ್ಯಗಾರದಲ್ಲಿ ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್, ಉದ್ಯಮಿ ರವಿ ಹಾಗೂ ಇತರೆ ಪಧಾದಿಕಾರಿಗಳು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು.





