ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ, ಏಳನೇ ಸೆಮಿಸ್ಟರ್ನ ವಿದ್ಯಾರ್ಥಿನಿ ಮೇಲೆ ಆಕೆಯ ಕಿರಿಯ ಸಹಪಾಠಿಯೊಬ್ಬ ಶೌಚಾಲಯದಲ್ಲಿ ಅತ್ಯಾಚಾರವೆಸಗಿದ ಆಘಾತಕಾರಿ ಘಟನೆ ನಡೆದಿದೆ.
ಹನುಮಂತನಗರ ಪೊಲೀಸರು ಬುಧವಾರ, ಎಂಜಿನಿಯರಿಂಗ್ ಕಾಲೇಜಿನ ಐದನೇ ಸೆಮಿಸ್ಟರ್ ವಿದ್ಯಾರ್ಥಿ ಜೀವನ್ ಗೌಡ (21) ಎಂಬಾತನನ್ನು ಅತ್ಯಾಚಾರದ ಆರೋಪದಡಿ ಬಂಧಿಸಿದ್ದಾರೆ. ಆರೋಪಿಯನ್ನು ಈಗ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಈ ಘಟನೆ ಅಕ್ಟೋಬರ್ 10 ರಂದು ನಡೆದಿದೆ ಎನ್ನಲಾಗಿದ್ದು, ಎಫ್ಐಆರ್ ಅಕ್ಟೋಬರ್ 15 ರಂದು ಬಿಎನ್ಎಸ್ ಸೆಕ್ಷನ್ 64 (ಅತ್ಯಾಚಾರಕ್ಕೆ ಶಿಕ್ಷೆ) ಅಡಿಯಲ್ಲಿ ದಾಖಲಾಗಿದೆ.
ಪೊಲೀಸರ ಪ್ರಕಾರ, ವಿದ್ಯಾರ್ಥಿನಿಯು ಆಘಾತ ಮತ್ತು ಭಯದಿಂದ ತಕ್ಷಣ ದೂರು ದಾಖಲಿಸಲಿಲ್ಲ. ನಂತರ ಆಕೆ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಪೊಲೀಸರನ್ನು ಸಂಪರ್ಕಿಸಿದರು. ಗುರುವಾರದಂದು ಘಟನೆಯ ಮಹಜರ್ (ಅಪರಾಧದ ಸ್ಥಳದ ಪುನರ್ನಿರ್ಮಾಣ) ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಫ್ಐಆರ್ ಪ್ರಕಾರ ಆರೋಪಿ ಜೀವನ್ ಸಂತ್ರಸ್ತೆಯೊಂದಿಗೆ ಮಾತನಾಡಲು ಬಯಸಿದ್ದಾನೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಿತಿ ಮೀರಿದ ಭ್ರಷ್ಟಾಚಾರ ನೈತಿಕತೆಯ ಅಧಃಪತನದ ಸಂಕೇತವೇ?
ಮಧ್ಯಾಹ್ನದ ಊಟದ ವಿರಾಮದ ಸಮಯದಲ್ಲಿ, ಆಕೆ ತನ್ನ ಸ್ನೇಹಿತರೊಂದಿಗೆ ಇದ್ದಾಗ ಜೀವನ್ ಆಕೆಗೆ ಪದೇ ಪದೇ ಕರೆ ಮಾಡಿದ್ದಾನೆ. ಆಕೆ ಕೆಳಗೆ ಭೇಟಿಯಾಗಲು ಹೋದಾಗ, ಜೀವನ್ ಆಕೆಯನ್ನು ಏಳನೇ ಮಹಡಿಯ ಆರ್ಕಿಟೆಕ್ಚರ್ ಬ್ಲಾಕ್ಗೆ ಬರಲು ಹೇಳಿದ್ದಾನೆ.
ಸಂತ್ರಸ್ತೆ ಏಳನೇ ಮಹಡಿಗೆ ತಲುಪಿದಾಗ ಪುರುಷರ ಶೌಚಾಲಯಕ್ಕೆ ಎಳೆದುಕೊಂಡು ಬಾಗಿಲಿಗೆ ಬೀಗ ಹಾಕಿ ಅತ್ಯಾಚಾರವೆಸಗಿದ್ದಾನೆ. ಈ ಘಟನೆ ಮಧ್ಯಾಹ್ನ 1:30 ರಿಂದ 1:50 ರ ನಡುವೆ ನಡೆದಿದೆ. ಅತ್ಯಾಚಾರವೆಸಗಿದ ನಂತರವೂ ಆರೋಪಿಯು ಸಂತ್ರಸ್ತೆಗೆ ಕರೆ ಮಾಡಿ ಗರ್ಭನಿರೋಧಕ ಗುಳಿಗೆಯ ಅಗತ್ಯವಿದೆಯೇ ಎಂದು ಕೇಳಿದ್ದಾನೆ. ಆಕೆ ಕರೆಯನ್ನು ಕಡಿತಗೊಳಿಸಿದ್ದಾಳೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.
ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆ ದೇಶವ್ಯಾಪಿ ಆಕ್ರೋಶವನ್ನು ಉಂಟುಮಾಡಿತ್ತು. ಆ ವಿದ್ಯಾರ್ಥಿನಿ ಕಾಲೇಜಿನೊಳಗೇ ಸಹಪಾಠಿಗಳಿಂದಲೇ ಕ್ರೂರವಾಗಿ ದೌರ್ಜನ್ಯಕ್ಕೊಳಗಾದ ವರದಿ ಹೊರಬಿದ್ದ ನಂತರ ವಿದ್ಯಾರ್ಥಿ ಸಮುದಾಯ ಮತ್ತು ನಾಗರಿಕರಿಂದ ಭಾರೀ ಪ್ರತಿಭಟನೆಗಳು ನಡೆದವು. ಈಗ ಬೆಂಗಳೂರು ಎಂಜಿನಿಯರಿಂಗ್ ಕಾಲೇಜಿನಲ್ಲೂ ಇದೇ ರೀತಿಯ ಘಟನೆ ಸಂಭವಿಸಿರುವುದು ಮಹಿಳಾ ಸುರಕ್ಷತೆ ಕುರಿತ ಗಂಭೀರ ಪ್ರಶ್ನೆಗಳನ್ನು ಮತ್ತೊಮ್ಮೆ ಎಬ್ಬಿಸಿದೆ. ಶೈಕ್ಷಣಿಕ ಸಂಸ್ಥೆಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಯನ್ನು ಮತ್ತೆ ಉತ್ತೇಜಿಸಿದೆ.





