ಸರ್ಕಾರ ಶುಕ್ರವಾರ ಹೊರಡಿಸಿರುವ ಆದೇಶದ ಪ್ರಕಾರ ಹೊಸ ವರ್ಷದ ಜನವರಿ ತಿಂಗಳ ಕೊನೆಯ ಗುರುವಾರ ʼಬಿಫೆಸ್ʼ ತೆರೆ ಏಳಲಿದೆ. ಯುವ ಮುಖ ಪಿ.ಬಿ ಮುರಳಿ ನವ ಕಲಾತ್ಮಕ ನಿರ್ದೇಶಕ, ಬಹುಭಾಷಾ ಕಲಾವಿದ ಪ್ರಕಾಶ್ ರೈ 17ನೇ ಬಿಫೆಸ್ ಸಂಚಿಕೆಯ ರಾಯಭಾರಿಯಾಗಲಿದ್ದಾರೆ. ಶುಕ್ರವಾರ ಹಿರಿಯ ಪತ್ರಕರ್ತ ಮುರಳೀಧರ ಖಜಾನೆಯವರು ಈ ದಿನದಲ್ಲಿ ವಿವರವಾದ ವರದಿ ಬರೆದು ಗಮನ ಸೆಳೆದಿದ್ದರು.
ಜನವರಿಯಲ್ಲಿ ನಡೆಯಲಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕಳೆದ ಮೂರು ವರ್ಷಗಳಿಂದ ಉಪ ಕಲಾತ್ಮಕ ನಿರ್ದೇಶಕರಾಗಿ ದುಡಿದಿರುವ ಪಿ. ಬಿ. ಮುರಳಿ ಅವರನ್ನು ಕಲಾತ್ಮಕ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದೆ. ಬಹುಭಾಷಾ ನಟ, ಕನ್ನಡ ನೆಲದ ಪ್ರಕಾಶ್ ರೈ ಅವರನ್ನು 17ನೇ ಬಿಫೆಸ್ ನ ರಾಯಭಾರಿ (Ambassador) ಆಗಿ ಘೋಷಿಸಿದೆ. ಕೋರ್ ಸಮಿತಿಯ ಅಧ್ಯಕ್ಷರಾಗಿ ಸರ್ಕಾರದ ಕಾರ್ಯದರ್ಶಿ, ವಾರ್ತಾ ಮತ್ತು ಸಂಪರ್ಕ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಅದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ಈ ದಿನಕ್ಕೆ ಲಭ್ಯವಾಗಿದೆ.
ʼಗ್ರಹಣ ಹಿಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ; ʼಬಿಫೆಸ್ʼ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಗೊಂದಲದ ಗೂಡುʼ- ಹಿರಿಯ ಪತ್ರಕರ್ತ ಮುರಳೀಧರ ಖಜಾನೆಯವರ ವರದಿ ಈದಿನ.ಕಾಮ್ ನಲ್ಲಿ ಪ್ರಕಟವಾದ ನಂತರ, ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣುತ್ತದೆ. ಆ ಲೇಖನದಲ್ಲಿ ಕರ್ನಾಟಕ ಚಲನಚಿತ್ರರಂಗದಲ್ಲಿ ಒಂದು ಅಕಾಡೆಮಿಕ್ ವಾತಾವರಣ ರೂಪಿಸಿ, ಅಲ್ಲಿ ಚಿತ್ರರಂಗ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹದಿನೈದು ವರ್ಷಗಳ ಹಿಂದೆ ಸರ್ಕಾರ ಕಂಡುಕೊಂಡ ದಾರಿ; ಕರ್ನಾಟಕ ಚಲನಚಿತ್ರ ಅಕಾಡೆಮಿ ಸ್ಥಾಪನೆ ಎಂದು ಪ್ರತಿಪಾದಿಸಲಾಗಿತ್ತು. ಆದರೆ ಇಂದು ಅಲ್ಲಿ ಅಕಾಡೆಮಿಕ್ ವಾತಾವರಣವೇ ಇಲ್ಲದೆ, ಕೇವಲ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಸಲು ಯೋಜಿಸಲಾಗಿರುವ ಸಂಸ್ಥೆಯಂತೆ ಕಾಣುತ್ತಿದೆ. ಈ ಅಕಾಡೆಮಿಯನ್ನು ಸರ್ಕಾರ ಗ್ರಹಣ ಮುಕ್ತಮಾಡಬೇಕಿದೆ ಎಂಬ ವಿವೇಕದ ಧ್ವನಿ ಅದರಲ್ಲಿತ್ತು ಎಂಬುದು ಎಲ್ಲರ ಭಾವನೆ.
ಇದನ್ನೂ ಓದಿ ಗ್ರಹಣ ಹಿಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ: ʻಬಿಫೆಸ್ʼ ಅಂತಾರಾಷ್ಟ್ರೀಯ ಚಿತ್ರೋತ್ಸವ ಎಂಬ ಗೊಂದಲದ ಗೂಡು
ಜನವರಿ ಕೊನೆಯ ಗುರುವಾರ ಬಿಫೆಸ್
ಸರ್ಕಾರದ ಅಧೀನ ಕಾರ್ಯದರ್ಶಿ, ಕನ್ನಡ ಸಂಸ್ಕೃತಿ ವಾರ್ತಾ ಇಲಾಖೆ ಅಕ್ಟೋಬರ್ 30, 2025ರಂದು ಆದೇಶವೊಂದನ್ನು ಹೊರಡಿಸಿದ್ದು ಬಿಫೆಸ್ ಅಂತಾರಾಷ್ಟ್ರೀಯ ಚಲನಚಿತ್ರ ನಿರ್ಮಾಪಕರ ಸಂಘಟನೆಗಳ ಒಕ್ಕೂಟ (International Federation of Film Producers ́ Association-FIAPF)ದ ಹಲವಾರು ನಿಯಮಗಳನ್ನು ಪಾಲಿಸಬೇಕು. ಮೊದಲನೇಯದು ವರ್ಷದ ಖಚಿತವಾದ ದಿನದಲ್ಲೇ ಚಿತ್ರೋತ್ಸವ ನಡೆಯಬೇಕು ಎಂಬುದನ್ನು ಗಣನೆಗೆ ತೆಗೆದುಕೊಂಡು ಬಿಫೆಸ್ ಅನ್ನು ಆಯಾ ಆರ್ಥಿಕ ವರ್ಷದ ಜನವರಿ ಮಾಹೆಯ ಕೊನೆಯ ಗುರುವಾರದಂದು ಬಿಫೆಸ್ನ್ನು ಆರಂಭಿಸಲು ಸೂಚಿಸಿತ್ತು. ಆದರೆ ಯಾವುದೇ ಸಭೆಗಳು ನಡೆದಿರಲಿಲ್ಲ. ಈ ದಿನದಲ್ಲಿ ವರದಿ ಪ್ರಕಟವಾದ ದಿನವೇ, ನವೆಂಬರ್ 21, 2025 ಬಿಫೆಸ್ನ 17 ನೇ ಸಂಚಿಕೆ ಆಯೋಜನೆಗಾಗಿ ಸಂಘಟನಾ ಸಮಿತಿ, ಕೋರ್ ಸಮಿತಿ ಪ್ರಕಟಿಸಿ, 17ನೇ ಸಂಚಿಕೆಯ ರಾಯಭಾರಿಯನ್ನ ಕೂಡ ಆಯ್ಕೆ ಮಾಡಿದೆ.
ಕಲಾತ್ಮಕ ನಿರ್ದೇಶಕರಾಗಿ ಯುವ ಮುಖ: ಪಿ.ಬಿ. ಮುರಳಿ
ಇದು ಕಾಕತಾಳೀಯವೂ ಇರಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ 23 ಮಂದಿಯ ಸಂಘಟನಾ ಸಮಿತಿಯನ್ನು ಪ್ರಕಟಿಸಿದೆ. ಈ ಪಟ್ಟಿಯ ಪ್ರಕಾರ ಈ ಬಾರಿ ಚಿತ್ರೋತ್ಸವಕ್ಕೆ ಕಳೆದ ಮೂರು ವರ್ಷಗಳಿಂದ ಉಪ ಕಲಾತ್ಮಕ ನಿರ್ದೇಶಕರಾಗಿ ದುಡಿದಿರುವ ಪಿ. ಬಿ. ಮುರಳಿ ಅವರನ್ನು ಕಲಾತ್ಮಕ ನಿರ್ದೇಶಕರನ್ನಾಗಿ ಆಯ್ಕೆ ಮಾಡಿದೆ. ಬಹುಭಾಷಾ ನಟ, ಕನ್ನಡ ನೆಲದ ಪ್ರಕಾಶ್ ರೈ ಅವರನ್ನು 17ನೇ ಬಿಫೆಸ್ ನ ರಾಯಭಾರಿ (Ambassador) ಆಗಿ ಘೋಷಿಸಿದೆ. ಕೋರ್ ಸಮಿತಿಯ ಅಧ್ಯಕ್ಷರಾಗಿ ಸರ್ಕಾರದ ಕಾರ್ಯದರ್ಶಿ, ವಾರ್ತಾ ಮತ್ತು ಸಂಪರ್ಕ ಇಲಾಖೆಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಅದೇಶ ಹೊರಡಿಸಲಾಗಿದೆ.





