ಧರ್ಮಸ್ಥಳ ಪ್ರಕರಣದ ಕುರಿತು ‘ರಿಪಬ್ಲಿಕ್ ಟಿವಿ’ ಕನ್ನಡದಲ್ಲಿ ನಡೆಸಲಾದ ಚರ್ಚಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗಿಯಾಗಿದ್ದ ಕರ್ನಾಟಕ ರಣಧೀರ ಪಡೆಯ ಹರೀಶ್ ಭೈರಪ್ಪ ಮತ್ತು ವಸಂತ್ ಗಿಳಿಯಾರ್ ನಡುವೆ ಗಲಾಟೆ ನಡೆದಿದೆ. ಈ ವೇಳೆ, ವಸಂತ್ ಗಿಳಿಯಾರ್ ತಮ್ಮ ಪುಢಾರಿಗಳನ್ನು ನ್ಯೂಸ್ ಚಾನೆಲ್ನ ಕಚೇರಿಗೆ ಕರೆಸಿಕೊಂಡು ಹರೀಶ್ ಮತ್ತು ಇತರರೊಂದಿಗೆ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಧರ್ಮಸ್ಥಳದಲ್ಲಿ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆಯಾಗಿ ಇಂದಿಗೆ (ಅಕ್ಟೋಬರ್ 9) 13 ವರ್ಷಗಳಾಗಿವೆ. ನ್ಯಾಯಕ್ಕಾಗಿ ಆಗ್ರಹಿಸಿ ರಾಜ್ಯಾದ್ಯಂತ ಸುಮಾರು 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರತಿಭಟನೆಗಳು ನಡೆದಿವೆ.
ಈ ಹಿನ್ನೆಲೆಯಲ್ಲಿ ಸೌಜನ್ಯ ಮತ್ತು ಧರ್ಮಸ್ಥಳದಲ್ಲಿನ ನೂರಾರು ಅಸಹಜ ಸಾವುಗಳು ಮತ್ತು ಹೂತುಹಾಕಿದ ಪ್ರಕರಣದ ಕುರಿತು ‘ರಿಪಬ್ಲಿಕ್ ಟಿವಿ ಕನ್ನಡ’ ವಾಹಿನಿಯಲ್ಲಿ ಚರ್ಚಾ ಕಾರ್ಯಕ್ರಮ ನಡೆದಿದೆ. ಚರ್ಚೆಯ ವೇಳೆ, ಧರ್ಮಸ್ಥಳದ ಪ್ರತಿಷ್ಠಿತ ಕುಟುಂಬದ ಸಮರ್ಥಕನಾಗಿರುವ ವಸಂತ್ ಗಿಳಿಯಾರ್ ಅವರು ಹರೀಶ್ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಗಿಳಿಯಾರ್ ನಿಂದನೆಯನ್ನು ಹರೀಶ್ ಅವರು ಖಂಡಿಸಿದ್ದು, ಇಬ್ಬರ ನಡುವೆ ಕಾವೇರಿದ ವಾಗ್ವಾದ ನಡೆದಿದೆ. ಈ ವೇಳೆ, ಗಿಳಿಯಾರ್ ತನ್ನ ಸ್ನೇಹಿತ ಪುನೀತ್ ಕೆರೆಹಳ್ಳಿಯ ಹಿಂಬಾಲಕರು ಮತ್ತು ಇನ್ನಿತರ ಪುಡಿರೌಡಿಗಳನ್ನು ವಾಹಿನಿಯ ಕಚೇರಿ ಬಳಿಗೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಗಿಳಿಯಾರ್ ಬೆಂಬಲಿತರು ಚರ್ಚೆಯಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಅತಿಥಿ ಅಬ್ದುಲ್ ರಜಾಕ್ ಅವರೊಂದಿಗೆ ಗಲಾಟೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಪೊಲೀಸ್ ಅಧಿಕಾರಿಗಳು ಹೆಚ್ಚಿನ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದ್ದಾರೆ. ಪುಂಡರನ್ನು ಠಾಣೆಗೆ ಒಯ್ದಿದ್ದಾಗಿ ತಿಳಿದು ಬಂದಿದೆ.
ತಾನೇ ಪುಢಾರಿಗಳನ್ನು ಕರೆಸಿಕೊಂಡು ದಾಂಧಲೆ ನಡೆಸಿ, ಸ್ಥಳದಿಂದ ಪರಾರಿಯಾದ ಗಿಳಿಯಾರ್, ಈಗ ಎಸ್ಜೆ ಪೊಲೀಸ್ ಠಾಣೆಗೆ ತೆರಳಿ ಹರೀಶ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆಂದು ತಿಳಿದು ಬಂದಿದೆ. ವಸಂತ್ ಗಿಳಿಯಾರ್ ನಡೆಸಿದ ದಾಂಧಲೆ ಮತ್ತು ನಿಂದನೆ ವಿರುದ್ಧ ಹರೀಶ್ ಕೂಡ ದೂರು ದಾಖಲಿಸಲು ಮುಂದಾಗಿದ್ದಾರೆ.
ಈ ಲೇಖನ ಓದಿದ್ದೀರಾ?: ಅಲೆಮಾರಿಗಳ ಆರ್ತನಾದಕ್ಕೆ ಹೃದಯ ತೆರೆಯಲಿ ದೆಹಲಿ
ಒಂದು ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಿ, ಚರ್ಚೆಗೆ ಆಹ್ವಾನಿಸುವ ವಾಹಿನಿಯು ತನ್ನ ಕಚೇರಿಗೆ ಬರುವ ಅತಿಥಿಗಳ ರಕ್ಷಣೆ ಮತ್ತು ಆತ್ಮಗೌರವವನ್ನು ಕಾಪಾಡುವ ಜವಾಬ್ದಾರಿಯನ್ನೂ ಹೊತ್ತಿರುತ್ತದೆ. ಆದರೆ, ಗಲಾಟೆ ನಡೆಯುವ ಸಮಯದಲ್ಲಿ ವಸಂತ್ ಗಿಳಿಯಾರ್ ಬೆಂಬಲಿತ ಪುಡಾರಿಗಳನ್ನು ತನ್ನ ಕಚೇರಿಯ ಆವರಣಕ್ಕೆ ಬಿಟ್ಟುಕೊಂಡ ‘ರಿಪಬ್ಲಿಕ್ ಟಿವಿ’ಯ ಉದ್ದೇಶವೇನಿತ್ತು ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಹರೀಶ್ ಅವರು ವಸಂತ್ ಗಿಳಿಯಾರ್ ವಿರುದ್ಧ ಮಾತ್ರವಲ್ಲದೆ, ‘ರಿಪಬ್ಲಿಕ್ ಟಿವಿ’ಯ ವಿರುದ್ಧವೂ ದೂರು ದಾಖಲಿಸಬೇಕು ಎಂಬ ಸಲಹೆಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿವೆ.
ಇದೆಲ್ಲದರ ನಡುವೆ, ರಿಪಬ್ಲಿಕ್ ಟಿವಿ ಸುದ್ದಿವಾಹಿನಿಯು ತನ್ನ ಕಚೇರಿ ಆವರಣದಲ್ಲಿ ನಡೆದ ದಾಂಧಲೆಯ ವಿಡಿಯೋಗಳನ್ನು ತನ್ನ ವಾಹಿನಿಯಲ್ಲಿ ಪ್ರಸಾರ ಮಾಡುವುದೇ? ಗಲಾಟೆಯ ವಿಚಾರದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂದು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.




