“ನಮ್ಮ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಘೋಷಿಸಲಾಗಿದೆ. ಆದರೆ, ಸಮಾಜದಲ್ಲಿ ಇನ್ನೂ ಸಮಾನತೆ ದೊರೆತಿಲ್ಲ. ಸಮಾನತೆ ಪಡೆಯಲು ಹೆಣ್ಣು ಮಕ್ಕಳು ಹೋರಾಟದ ಹಾದಿ ಹಿಡಿಯಬೇಕಾಗಿದೆ” ಎಂದು ಎಸ್ಯುಸಿಐ ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಎಂ.ಎನ್ ಶ್ರೀರಾಮ್ ಹೇಳಿದರು.
ಶುಕ್ರವಾರ ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್)ಯ ಜಿಲ್ಲಾ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಎಲ್ಲರೂ ಸಮಾನರಾಗಿರಲು ಸಾಧ್ಯವಿಲ್ಲ ಎಂಬ ತಪ್ಪಾದ ವ್ಯಾಖ್ಯಾನ ಪ್ರಚಲಿತವಾಗಿದೆ. ಅದು ಸುಳ್ಳು. ಸ್ವಾರಸ್ಯಕರವಾದ ಪೌರಾಣಿಕ ಕಥೆಗಳ ಮೂಲಕ ಹುಟ್ಟಿನಿಂದ ‘ಮಹಾನತೆ’ ಸಾಧಿಸಬಹುದು ಎಂದು ಪ್ರಚಾರ ಪಡಿಸಲಾಗುತ್ತಿದೆ. ಆದರೆ, ‘ಮಹಾನತೆ’ ಸಾಧಿಸಲು ಸತತ ಪ್ರಯತ್ನ ಪರಿಶ್ರಮ ಹಾಗೂ ಹೋರಾಟದಿಂದಷ್ಟೇ ಸಾಧ್ಯ ಎಂದು ಮಹಾನ್ ಮಹಿಳಾ ಸಾಧಕೀಯರಾದ ಮೇರಿ ಕ್ಯೂರಿ, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ತೋರಿಸಿಕೊಟ್ಟಿದ್ದಾರೆ” ಎಂದರು.
“ಕಾನೂನು ರಕ್ಷಕರೇ ಇಂದು ಅನ್ಯಾಯಗಳನ್ನು ಎಸಗುತ್ತಿದ್ದಾರೆ. ಕಥುವಾದಲ್ಲಿ ನಡೆದ ಅತ್ಯಾಚಾರ ಘಟನೆಗಳಲ್ಲಿ ದೂರನ್ನು ಸಹ ಪೊಲೀಸರು ಸ್ವೀಕರಿಸಲಿಲ್ಲ. ಹೋರಾಟದಿಂದ ಅಸಾಧ್ಯವಾದದನ್ನು ಸಾಧಿಸಬಹುದು. ಈ ಸತಿಸಹಗಮನ ಪದ್ದತಿಯಂತಹ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ್ದರಿಂದಲೇ ಸಾಕಷ್ಟು ಪರಿಹಾರ ದೊರೆತಿದೆ” ಎಂದರು.
ಎಐಎಂಎಸ್ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ಮಾತನಾಡಿ, “ಇಂದಿನ ಸಮಾಜದಲ್ಲೂ ಮಹಿಳಾ ಮೇಲಾಧಿಕಾರಿಗಳನ್ನು ಕೆಳಗಿನ ಪುರುಷರು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲಾರದಂತಹ ಪರಿಸ್ಥಿತಿ ಇದೆ. ಬೆಂಗಳೂರಿನ ಹಲವಾರು ಘಟನೆಗಳಲ್ಲಿ ಹೆಣ್ಣು ಮಕ್ಕಳು ಪುರುಷರ ಮಾತುಗಳಿಗೆ ಒಪ್ಪದಿದ್ದಾಗ ಅವರನ್ನು ದೌರ್ಜನ್ಯದ ಮೂಲಕ ಬಗ್ಗಿಸಲಾಗುತ್ತಿದೆ. ಪುರುಷ ಪ್ರಧಾನ ಧೋರಣೆಯ ವಿರುದ್ಧ ಹೋರಾಡುವುದರ ಜತೆಗೆ ಹೆಣ್ಣು ಮಕ್ಕಳು ಹಿಂದಿನ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಹೋರಾಡಬೇಕು. ಇದರ ಅಗತ್ಯವಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಎಡ ಪ್ರಜಾಸತ್ತಾತ್ಮಕ ಪರ್ಯಾಯ ರಾಜಕೀಯ ರಂಗ ರೂಪಿಸಲು ಸಿಪಿಐ(ಎಂ) ತೀರ್ಮಾನ
ಈ ಸಮ್ಮೇಳನದಲ್ಲಿ ವಿವಿಧ ಬಡಾವಣೆಗಳಿಂದ ಗೃಹಿಣಿಯರು, ಉದ್ಯೋಗಸ್ಥ ಹೆಣ್ಣುಮಕ್ಕಳು, ನಾನಾ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ನಾನಾ ಸ್ತರದ ಮಹಿಳೆಯರು ಪ್ರತಿನಿಧಿಗಳಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಿ!, ಮರ್ಯಾದಾ ಹತ್ಯೆ, ಬಾಲ್ಯ ವಿವಾಹ, ಸ್ತ್ರೀ ಭ್ರೂಣಹತ್ಯೆ ನಿಲ್ಲಿಸಿ!!, ಮಹಿಳೆಯರಿಗೆ ಶಿಕ್ಷಣ-ಆರೋಗ್ಯ-ಉದ್ಯೋಗ ಭದ್ರತೆ ಖಾತ್ರಿಪಡಿಸಿ!!! ಎಂಬ ಮೂರು ಘೋಷವಾಕ್ಯಗಳೊಂದಿಗೆ ಈ ಸಮ್ಮೇಳನ ನಡೆಯಿತು.





