ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯಲ್ಲಿನ ಬೇಗೂರಲ್ಲಿ ನೂರಾರು ಗೂಂಡಾಗಳು ಬುಧವಾರ ರಾತ್ರೋರಾತ್ರಿ ಏಕಕಾಲಕ್ಕೆ ನುಗ್ಗಿ, ಪೊಲೀಸರೇ ಎದುರಲ್ಲೇ ದಲಿತರ ಮನೆ ಮತ್ತು ದೇವಸ್ಥಾನವನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.
ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸುಮಾರು ಒಂದು ಎಕರೆ ಜಮೀನಿನಲ್ಲಿ ಮುನಿಸ್ವಾಮಿ ಎಂಬುವರು 1970ರಿಂದಲೂ ಜಮೀನನ್ನು ಉಳಿಮೆ ಮಾಡಿಕೊಂಡು, ಅದೇ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು ಎನ್ನುವ ಮಾಹಿತಿ ಇದೆ.
ಜಮೀನಿನ ಮುಂಭಾಗದಲ್ಲಿರುವ ಪ್ರೆಸ್ಟೀಜ್ ಕಂಪನಿ ಈ ಭೂಮಿಯನ್ನು ತನ್ನ ವಶಕ್ಕೆ ಪಡೆಯಲು ಸಾಕಷ್ಟು ಸಲ ಪ್ರಯತ್ನಿಸಿದ್ದು ಎನ್ನುವ ಆರೋಪವವನ್ನು ಮುನಿಸ್ವಾಮಿ ಕುಟುಂಬ ಸದಸ್ಯರು ಮಾಡುತ್ತಿದ್ದು, ಬುಧವಾರ ರಾತ್ರೋರಾತ್ರಿ ನೂರಾರು ಗೂಂಡಾಗಳು ಧಾವಿಸಿ, ತಾವು ವಾಸವಿದ್ದ ಮನೆ ಮತ್ತು ಪಕ್ಕದ ದೇವಸ್ಥಾನವನ್ನು ನೆಲಸಮಗೊಳಿಸಿದ್ದಾರೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿರಿ: Ground Report | ಗೂಂಡಾಗಳಿಂದ ದಲಿತರ ಮನೆ, ದೇವಾಲಯ ಧ್ವಂಸವಾದರೂ ಬೇಗೂರು ಪೊಲೀಸರು ನಿರ್ಲಕ್ಷ್ಯ ತಾಳಿದ್ದೇಕೆ?
ಮುನಿಸ್ವಾಮಿ ಕುಟುಂಬದಲ್ಲಿ 12 ಜನ ಸದಸ್ಯರಿದ್ದು, ರಾತ್ರಿ ಮಲಗಿದ ವೇಳೆ ಆಗಮಿಸಿದ ಗೂಂಡಾಗಳು ಎಲ್ಲರನ್ನು ಎಚ್ಚರಿಸಿ, ಏಕಾಏಕಿ ಮನೆಯನ್ನು ಧ್ವಂಸ ಮಾಡಿದ್ದಾರೆ. ಕೃತ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದ ಇಬ್ಬರು ಕುಟುಂಬದ ಯುವಕರನ್ನು ಗೂಂಡಾಗಳು ರಾತ್ರಿ ಅಪಹರಿಸಿದ್ದು, ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಪೊಲೀಸ್ಟ್ ಸ್ಟೇಷನ್ ಹತ್ರ ಅವರನ್ನು ಬಿಟ್ಟು ಹೋಗಿದ್ದಾರೆ ಎಂದು ಸಂತ್ರಸ್ತರು ಹೇಳಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಒಳಮೀಸಲಾತಿ ಸಮೀಕ್ಷೆ; ಜಾತಿ ಹೇಳಿಕೊಳ್ಳುವ ಸಂಕಟದಲ್ಲಿ ದಲಿತರು
ಮನೆ ಧ್ವಂಸ ಮಾಡುತ್ತಿರುವ ಬಗ್ಗೆ ಬೇಗೂರು ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ನೀಡಿದರೂ ಪೊಲೀಸರು ಸ್ಪಂದಿಸಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಠಾಣಾ ಅಧಿಕಾರಿಗಳು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಈ ದಿನ.ಕಾಮ್ ಜೊತೆ ಮಾತನಾಡಿದ ಮನೆ ಕಳೆದುಕೊಂಡ ಸಂತ್ರಸ್ತರು, “ಪೊಲೀಸರ್ ಸಮ್ಮುಖದಲ್ಲೇ ಗೂಂಡಾಗಳು ಮನೆ ಮತ್ತು ದೇವಸ್ಥಾನವನ್ನು ಧ್ವಂಸ ಮಾಡಿದ್ದಾರೆ. ಪೊಲೀಸ್ ಕೃತ್ಯ ಎಸಗಿದವರ ಜೊತೆ ಶ್ಯಾಮೀಲಾಗಿದ್ದು, ಅವರ ನಿರ್ಲಕ್ಷ್ಯವೇ ಗೂಂಡಾಗಳಿಗೆ ಬಲಕೊಟ್ಟಿದೆ” ಎಂದು ಆರೋಪಿಸಿದ್ದಾರೆ.





