ಕರ್ನಾಟಕದ ರಾಜಧಾನಿ ಬೆಂಗಳೂರು ತಂತ್ರಜ್ಞಾನ ಕ್ಷೇತ್ರದ ಹಬ್ ಎಂಬ ಹೆಸರಿಗೆ ಹೆಸರಾದ ನಗರ. ಆದರೆ, ಇದೇ ನಗರದಲ್ಲಿ 2025ರ ನವೆಂಬರ್ ತಿಂಗಳಲ್ಲಿ ನಡೆದ ಒಂದು ಘೋರ ಘಟನೆಯು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಒಬ್ಬ ದುರುಳ ತನ್ನ ಪತ್ನಿಗೆ ಪಾದರಸ ಇಂಜೆಕ್ಷನ್ ಮೂಲಕ ಕೊಂದ ಘಟನೆಯು ಸಮಾಜದಲ್ಲಿ ಆತಂಕ ಮೂಡಿಸಿದೆ.
ಹೌದು, ಈ ದುರುಳ ವ್ಯಕ್ತಿ ತನ್ನ ಪತ್ನಿಗೆ ಪಾದರಸ ಚುಚ್ಚುಮದ್ದು ನೀಡಿ ಕೊಂದಿದ್ದಾನೆ. ಸಾವಿಗೂ ಮುನ್ನ ಪೊಲೀಸರಿಗೆ ಮಾಹಿತಿ ನೀಡಿರುವ ಮಹಿಳೆ, ‘ತನ್ನ ಪತಿ ಮತ್ತು ಮಾವ ನನ್ನನ್ನು ಕೊಲ್ಲಲು ಸಂಚುಹೂಡಿ, ವೈದ್ಯಕೀಯ ದಂಪತಿಗಳ ನೆರವು ಪಡೆದಿದ್ದಾರೆ’ ಎಂದು ಆರೋಪಿಸಿದ್ದಾರೆ.
ಮೃತ ಮಹಿಳೆಯನ್ನು ವಿದ್ಯಾ ಎಂದು ಗುರುತಿಸಲಾಗಿದೆ. ಅವರು ಕಳೆದ ವಾರ ಮೃತಪಟ್ಟಿದ್ದಾರೆ. ಅವರು ತಮ್ಮ ಮೇಲಾದ ದೌರ್ಜ್ಯದ ಕುರಿತು ಪೊಲೀಸರಿಗೆ ವಿವರಿಸಿರುವಂತೆ, ಅವರಿಗೆ ಫೆಬ್ರವರಿ 26ರಂದು ಆಕೆಯ ಪತಿ ಪಾದರಸವನ್ನು ಇಂಜೆಕ್ಟ್ ಮಾಡಿದ್ದಾರೆ.
“SLN ಡಯಾಗ್ನೋಸ್ಟಿಕ್ ಸೆಂಟರ್ ಎಂಬಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ ಮತ್ತು ಆಕೆಯ ಪತಿ ನನ್ನ ಗಂಡನಿಗೆ ಕ್ಲೋರೋಪಾರ್ಫ್, ಸಿರಿಂಜ್ ಹಾಗೂ ಮರ್ಕ್ಯುರಿಯನ್ನು ನೀಡಿದ್ದರು. ಅವುಗಳನ್ನು ಬಳಸಿಕೊಂಡ ನನ್ನ ಪತಿ, ನಾನು ಫೆಬ್ರವರಿ 26ರ ರಾತ್ರಿ ಮಲಗಿದ್ದಾಗ, ಕ್ಲೋರೋಫಾರ್ಮ್ ಮೂಲಕ ನನ್ನ ಪ್ರಜ್ಞೆ ತಪ್ಪಿಸಿ, ಪಾದರಸವನ್ನು ಇಂಜೆಕ್ಟ್ ಮಾಡಿದ್ದಾರೆ” ಎಂದು ವಿವರಿಸಿರುವುದಾಗಿ ವರದಿಯಾಗಿದೆ.
“ಮರುದಿನ ಸಂಜೆ ವೇಳೆಗೆ ನನಗೆ ಪ್ರಜ್ಞೆ ಬಂದಿತು. ಆಗ, ನನ್ನ ಕಾಲು ಊದಿಕೊಂಡಿತ್ತು. ನನ್ನ ಬಲ ತೊಡೆಯಲ್ಲಿ ತೀವ್ರ ನೋವಾಗುತ್ತಿತ್ತು. ಕೆಲ ದಿನಗಳಲ್ಲಿಯೇ ನನ್ನ ಆರೋಗ್ಯ ಸ್ಥಿತಿ ಹದಗೆಟ್ಟು, ಮಾರ್ಚ್ 7ರಂದು ಅತ್ತಿಬೆಲೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದೆ. ಅಲ್ಲಿಂದ, ಆಕ್ಸ್ಫರ್ಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ, ವೈದ್ಯರು ಪರೀಕ್ಷಿಸಿದಾಗ, ನನ್ನ ದೇಹದಲ್ಲಿ ಪಾದರಸ ಇರುವುದು ಪತ್ತೆಯಾಯಿತು” ಎಂದು ಸಾವಿನ ಅಂಚಿನಲ್ಲಿದ್ದ ಮಹಿಳೆ ಪೊಲೀಸರಿಗೆ ವಿವರಿಸಿದ್ದರೆಂದು ತಿಳಿದುಬಂದಿದೆ.
“ನನ್ನ ಪತಿ ಬಸವರಾಜ್ ಮತ್ತು ಅವನ ತಂದೆ ಮರಿಶ್ವಾಮಾಚಾರಿ ನನ್ನನ್ನು ಕೊಲ್ಲುವ ಉದ್ದೇಶದಿಂದ ತನ್ನ ದೇಹಕ್ಕೆ ಪಾದರಸವನ್ನು ಚುಚ್ಚಿದ್ದಾರೆ. ಅವರಿಬ್ಬರು ನನಗೆ ನಿರಂತರ ಕಿರುಕುಳ ನೀಡಿ, ಅವಮಾನಿಸುತ್ತಿದ್ದರು. ಮನೆಯೊಳಗೆ ಕೂಡಿಹಾಕುತ್ತಿದ್ದರು” ಎಂದು ವಿದ್ಯಾ ಆರೋಪಿಸಿದ್ದರು.
ದೇಹದಲ್ಲಿ ಪಾದರಸ ಇದ್ದಿದ್ದರಿಂದ ಆಕೆಯ ಮೂತ್ರಪಿಂಡಗಳು ಸೇರಿದಂತೆ ಬಹು ಅಂಗಗಳು ಹಾನಿಯಾಗಿದ್ದವು. ಆಕೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ಅಲ್ಲಿ ನಿಯಮಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಆದಾಗ್ಯೂ, ಆಕೆ 9 ತಿಂಗಳ ಜೀವನ್ಮರಣ ಹೋರಾಟದ ಬಳಿಕ ಇತ್ತೀಚೆಗೆ ಮೃತಪಟ್ಟಿದ್ದಾರೆ.
ಈಕೆಯ ಪತಿ ನೀಡಿದ ಪಾದರಸ ಇಂಜೆಕ್ಷನಿಂದಲೇ ಸಾವು ಸಂಭವಿಸಿದೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ವಿದ್ಯಾ ತಂದೆ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರು ಆಧರಿಸಿ ಖಾಸಗಿ ಕಾರ್ಖಾನೆಯ ಎಂಜಿನ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಬಸವರಾಜು ಅವರನ್ನು ಪೊಲೀಸರು ನವೆಂಬರ್ 25ರಂದು ಬಂಧಿಸಿದ್ದಾರೆ. ಆರೋಪಿ ತಂದೆ, ಮೃತಳ ಮಾವ ಮಾವಮರಿಸ್ವಾಮಾಚಾರಿ ವಿರುದ್ಧ ದೂರು ದಾಖಲಾಗಿದೆ.
ಇತ್ತೀಚೆಗೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಜನರಲ್ ಸರ್ಜನ್ ಡಾ. ಮಹೇಂದ್ರ ರೆಡ್ಡಿ ತನ್ನ ಪತ್ನಿ, ಅದೇ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿ ಕೆಲಸ ಮಾಡುತ್ತಿದ್ದ ಡಾ.ಕೃತಿಕಾ ಎಂ. ರೆಡ್ಡಿ ಅವರಿಗೆ ಅನಸ್ಥೇಷಿಯಾ ಔಷಧವನ್ನು ಇಂಜೆಕ್ಟ್ ಮಾಡಿ ಕೊಲೆ ಮಾಡಿದ್ದಾರೆ. ಇದೇ ವರ್ಷದ ಏಪ್ರಿಲ್ನಲ್ಲಿ ಘಟನೆ ನಡೆದಿದ್ದು, ಆರೂ ತಿಂಗಳ ನಂತರ ಅಕ್ಟೋಬರ್ 14ರಂದು ಆರೋಪಿಯನ್ನು ಬಂಧಿಸಲಾಗಿದ್ದು, ಸತ್ಯ ಬೆಳಕಿಗೆ ಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದರ್ಶನ್ ಕೊಲೆ: ಪೊಲೀಸರಿಂದಲೇ ಕೃತ್ಯ – ಆರೋಪ; ಸಿಐಡಿ ತನಿಖೆಗೆ ಪ್ರಕರಣ
ಕೃತಿಕಾ ಅವರು ಅಜೀರ್ಣ, ಗ್ಯಾಸ್ಟ್ರಿಕ್ ಹಾಗೂ ರಕ್ತ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದರು. ಅವರ ಆರೋಗ್ಯ ಸಮಸ್ಯೆಯನ್ನು ಮುಚ್ಚಿಟ್ಟು ತಮಗೆ ವಿವಾಹ ಮಾಡಿದ್ದಾರೆ ಎಂದು ಮಹೇಂದ್ರ ರೆಡ್ಡಿ ಸಿಟ್ಟಾಗಿದ್ದರು. ಅದೇ ಕಾರಣಕ್ಕಾಗಿ, ಆಕೆಯನ್ನು ಕೊಲ್ಲಲು ಸಂಚುಹೂಡಿದ್ದ ಮಹೇಂದ್ರ ರೆಡ್ಡಿ, 2025ರ ಏಪ್ರಿಲ್ 21ರಂದು ‘ಗ್ಯಾಸ್ಟ್ರಿಕ್ ಸಮಸ್ಯೆಗೆ ಚಿಕಿತ್ಸೆ’ ನೀಡುವುದಾಗಿ ಹೇಳಿ, ಅನಸ್ಥೇಶಿಯಾ ಇಂಜೆಕ್ಷನ್ ಕೊಟ್ಟು, ಕೊಲೆ ಮಾಡಿದ್ದರು.
ಇಂತಹ ವೈದ್ಯಕೀಯ ಕೊಲೆಗಳು ಇತ್ತೀಚೆಗೆ ಹೆಚ್ಚುತ್ತಲೇ ಇವೆ. ಈಗ, ಪತ್ನಿಗೆ ಪಾದರಸ ಇಂಜೆಕ್ಟ್ ಮಾಡುವ ಮೂಲಕ ಆಕೆಯನ್ನು ಪತಿ ದಾರುಣವಾಗಿ ಕೊಂದಿದ್ದಾನೆ. ಅಷ್ಟಕ್ಕೂ ಈ ವ್ಯಕ್ತಿಗೆ ಪಾದರಸದಂತಹ ಮಾರಕ ವಿಷ ಹೇಗೆ ಸಿಕ್ಕಿತು? ಮಾನವನ ದೇಹಕ್ಕೆ ಮಾರಕವಾದ ಈ ಪಾದರಸವನ್ನು ಜನರನ್ನು ಕೊಲ್ಲಲು ಬಳಸುತ್ತಿರುವುದು ಆತಂಕಕಾರಿ ವಿಷಯ. ಥರ್ಮಾಮೀಟರ್, ಕೆಲವು ಔಷಧಗಳು ಮತ್ತು ಕೈಗಾರಿಕಾ ಉತ್ಪನ್ನಗಳಲ್ಲಿ ಬಳಸುವ ಪಾದರಸವನ್ನು ಯಾವುದೇ ನಿಯಂತ್ರಣವಿಲ್ಲದೆ ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನ ಜಾರಿಗೆ ತರುವ ಅಗತ್ಯವಿದೆ. ಈ ನಿಯಮಗಳನ್ನು ಜಾರಿಗೆ ತರುವ ಮೂಲಕ ಇನ್ನಾದರೂ ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯದಂತೆ ನೋಡಿಕೊಳ್ಳಬಹುದಾಗಿದೆ. ಈ ಘಟನೆಯೊಂದನ್ನೇ ಎಚ್ಚರಿಕೆ ಗಂಟೆಯಾಗಿ ಸರ್ಕಾರ ಸ್ವೀಕರಿಸಿ, ಮುಂದೆ ಇಂತಹ ಘಟನೆ ನಡೆಯದಂತೆ ತಡೆಯುವತ್ತ ಕಾರ್ಯನಿರ್ವಹಿಸಬೇಕಿದೆ.





