ಕೈಗಾರಿಕೆ ಸ್ಥಾಪನೆ ಹೆಸರಿನಲ್ಲಿ ರೈತರಿಂದ ಭೂಸ್ವಾಧೀನದ ಮೂಲಕ ಪಡೆದುಕೊಂಡ ಭೂಮಿಯ ಒಡೆತನವನ್ನು ಯಾವುದೇ ಕಾರಣಕ್ಕೂ ಉದ್ಯಮಿಗಳ ಒಡೆತನಕ್ಕೆ ಹಸ್ತಾಂತರಿಸಬಾರದು. ಸರ್ಕಾರವೇ ಒಡೆತನವನ್ನು ಉಳಿಸಿಕೊಳ್ಳಬೇಕು. ಇದರಿಂದ ಭೂಮಿ ದುರ್ಬಳಕೆ ತಡೆಯಲು ಸಾಧ್ಯ ಎಂದು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ನ್ಯಾಯಮೂರ್ತಿ ವಿ ಗೋಪಾಲಗೌಡ ಪ್ರತಿಪಾದಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್ಎಸ್) ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಬೆಂಗಳೂರಿನಲ್ಲಿ ಆಯೋಜಿಸಿದ್ದ ‘ಬದಲಾಗುತ್ತಿರುವ ಭೂ ನೀತಿ ಹಾಗೂ ಸಂಬಂಧಗಳು’ ವಿಷಯ ಕುರಿತು ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.
“ಸಂವಿಧಾನದ ತಿರುಳು ತಿಳಿಯದವರು ಜನಪ್ರತಿನಿಧಿಗಳಾಗುತ್ತಿದ್ದಾರೆ. ಸಂವಿಧಾನ ಬದ್ದ ,ಶಾಸನ ಬದ್ದ ಕರ್ತವ್ಯಗಳನ್ನು ಸರಿಯಾಗಿ ಸರ್ಕಾರಗಳು ನಿರ್ವಹಿಸುತ್ತಿಲ್ಲ. ಸರ್ಕಾರಗಳು ಗ್ರಾಮಗಳ ಅಭಿವೃದ್ಧಿ ಯನ್ನು ಕಡೆಗಣಿಸಿವೆ. ಅಭಿವೃದ್ಧಿ ಹೆಸರಿನಲ್ಲಿ ವಿವೇಚನಾ ರಹಿತ ನಗರೀಕರಣವನ್ನು ಪ್ರೊತ್ಸಾಹಿಸುತ್ತಿವೆ. ಇದರಿಂದ ಪ್ರತಿ ಹಳ್ಳಿಗಳು ಕೊಳಗೇರಿಗಳಾಗುತ್ತಿವೆ. ಭೂ ರಹಿತ ಕೃಷಿಕರಿಗೆ ಭೂಮಿ ಒದಗಿಸುವ ಮೂಲಕ ರೈತರ ಬದುಕಿಗೆ ಭದ್ರತೆ ಒದಗಿಸಬೇಕು. ಆದರೆ, ಬಗರ್ ಹುಕುಂ ಹಾಗೂ ಅರಣ್ಯ ಸಾಗುವಳಿ ರೈತರಿಗೆ ಭೂಮಿ ಹಕ್ಕು ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿವೆ” ಎಂದು ವಿಷಾಧಿಸಿದರು.
“ಪ್ರಗತಿಪರ ಭೂ ಸುಧಾರಣೆಗೆ ಹೆಸರಾಗಿದ್ದ ಕರ್ನಾಟಕ ರಾಜ್ಯ ಇಂದು ಕಾರ್ಪೊರೇಟ್ ಭೂ ಕಬಳಿಕೆಗೆ ಕುಖ್ಯಾತಿ ಪಡೆಯುತ್ತಿದೆ. ಬಡವರು, ದಲಿತರಿಗೆ ಭೂಮಿ ಹಕ್ಕು ನೀಡುವ ,ಉಳುವವನೇ ಭೂಮಿ ಒಡೆಯ ಎಂಬ ಕರ್ನಾಟಕ ಭೂ ಸುಧಾರಣಾ ಕಾಯ್ದೆಗಳನ್ನು ದುರ್ಬಲಗೊಳಿಸಲಾಗಿದೆ. ಈಗ ಉಳ್ಳವರೇ ಭೂಮಿ ಒಡೆಯರು ಎಂಬಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ದೇವರಾಜ ಅರಸು ಜಾರಿಗೊಳಿಸಿದ್ದ ಕಾಯ್ದೆಯನ್ನು ನಿರ್ನಾಮ ಮಾಡಿ, ಜಾರಿಯಾಗಿರುವ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020ಅನ್ನು ರದ್ದುಪಡಿಸಬೇಕು. ಗ್ರಾಮೀಣ ವಸತಿ ರಹಿತರಿಗೆ ಭೂಮಿ ಒದಗಿಸಲು ಜನಪರ ಭೂಮಿ ನೀತಿಯನ್ನು ಅಂಗೀಕರಿಸಬೇಕು. ನೂರಾರು ವರ್ಷಗಳ ಹಿಂದಿನ ದಾಖಲೆಗಳಲ್ಲಿ ಅರಣ್ಯ ಎಂದು ಇದೆ ಎಂಬ ಕಾರಣದಿಂದ ಕಂದಾಯ ಹಕ್ಕು ದಾಖಲೆಗಳನ್ನು ಹೊಂದಿರುವ ರೈತರನ್ನು ಒಕ್ಕಲೆಬ್ಬಿಸುವುದು ಕಾನೂನು ಬಾಹಿರ ಕ್ರಮ” ಎಂದು ತಿಳಿಸಿದರು.’
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಯೋಜಕ ವಿ ನಾಗರಾಜ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ರಾಜ್ಯಾಧ್ಯಕ್ಷ ಎಂ.ಪುಟ್ಟಮಾದು ,ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, ಜಿಎನ್ ನಾಗರಾಜ್ ,ಯು ಬಸವರಾಜ, ಹೆಚ್ ಆರ್ ನವೀನ್ ಕುಮಾರ್ ಮುಂತಾದವರು ಮಾತಾನಾಡಿದರು.
ದುಂಡು ಮೇಜಿನ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ ವಹಿಸಿದ್ದರು.




