ಬೆಂಗಳೂರಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕನ್ನಡ ಜಾಗೃತಿ ಸಮಿತಿ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಮ್ಮಟ ಉದ್ಘಾಟಿಸಿ ಮಾತನಾಡಿದ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ‘ಕನ್ನಡಕ್ಕೆ ಸಮಸ್ಯೆ, ಸವಾಲುಗಳಿವೆ ಹೊರತು ಸಾವಿಲ್ಲ’ ಎಂದು ಹೇಳಿದರು.
“ಕನ್ನಡಪರ ಕೆಲಸ ಅಧಿಕಾರವಲ್ಲ. ಅದುವೇ ಕರ್ತವ್ಯ. ಪರಿಭಾಷೆ ಬದಲಾವಣೆ ಕಾಲಘಟ್ಟದಲ್ಲಿದ್ದೇವೆ. ಭಾಷೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ಜಾಗೃತಿ ಸಮಿತಿ ಸದಸ್ಯರ ಕಾರ್ಯ ಮಹತ್ವದ್ದು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನ ಜಿಲ್ಲಾ ಸಮಿತಿಗೆ ನೇಮಿಸಿ ವಿಕೆಂದ್ರೀಕರಣಗೊಳಿಸುವ ಕೆಲಸ ಮಾಡಲಾಯಿತು. ಆಡಳಿತದಲ್ಲಿ ಕನ್ನಡ ಎಷ್ಟರ ಮಟ್ಟಿಗೆ ಅನುಷ್ಠಾನ ಆಗಿದೆ ಎನ್ನುವುದು ಸದಸ್ಯರ ಬಹುಮುಖ್ಯ ಜವಾಬ್ದಾರಿ”.
” ‘ಕನ್ನಡಿಗರನ್ನು ಉಳಿಸಿದರೆ ಕನ್ನಡ ಉಳಿಯುತ್ತದೆ’. ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ ನೀಡುವುದರ ಮೂಲಕ ಪ್ರೋತ್ಸಾಹಿಸಬೇಕು. ನಾಡಿನ ಸಾಹಿತಿಗಳು, ಚಿಂತಕರು ಕನ್ನಡ ಉಳಿಸಿದರೆ, ಕನ್ನಡಪರ ಹೋರಾಟಗಾರರು ಕಾಪಾಡಿಕೊಂಡು ಬಂದಿದ್ದಾರೆ. ಹಿಂದೆಲ್ಲಾ ಬೆಂಗಳೂರು ಮಾರ್ವಾಡಿಗಳ ಪಾಲಾಗುತ್ತೆ, ದಿನಕಳೆದಂತೆ ತಮಿಳರ ಪಾಲಾಗುತ್ತೆ ಪದೇ ಪದೇ ಹೇಳಲಾಗುತಿತ್ತು. ಆದರೇ, ಅದಕ್ಕೆಲ್ಲ ಕನ್ನಡಿಗರು ಅವಕಾಶ ಮಾಡಿಕೊಡಲಿಲ್ಲ. ಅಂತಹ ಹೇಳಿಕೆಗಳು ಸುಳ್ಳಾಗಿವೆ”.
“ಕನ್ನಡಿಗರು ನಿರಾಭಿಮಾನಿಗಳು ಎನ್ನುವುದೇ ಆಗಿದ್ದರೆ ಕನ್ನಡ ಇದಿಷ್ಟು ದಿನ ಉಳಿಯುತ್ತಿರಲಿಲ್ಲ. ಸಹಜವಾಗಿ ಕನ್ನಡಕ್ಕೆ ಸಮಸ್ಯೆ, ಸವಾಲುಗಳಿವೆ ಹೊರತು ಸಾವಿಲ್ಲ. ಕನ್ನಡ ಉಳಿಯಬೇಕಿರುವುದು ಶಿಕ್ಷಣದಲ್ಲಿ. ಇಲ್ಲವಾದಲ್ಲಿ ಕನ್ನಡದ ಮಹತ್ವ ಸಾಹಿತ್ಯ, ಸಂಗೀತ, ಕಲೆ, ಸಂಸ್ಕೃತಿ ಎಲ್ಲಾ ಕ್ಷೇತ್ರಗಳಲ್ಲಿಯೂ ನೆಲೆ ಕಳೆದುಕೊಳ್ಳಲಿದೆ. ಶಿಕ್ಷಣ ಎಂದರೆ ಕೇವಲ ತೆರ್ಗಡೆ ಹೊಂದುವುದಲ್ಲ. ಕನ್ನಡವನ್ನು ಜಾಗತೀಕರಣಗೊಳಿಸಬೇಕು. ನಿರಾಧಾಧಾಯಕ ಪರಿಸ್ಥಿತಿ ಇದ್ದರು ಕನ್ನಡದ ಪರಂಪರೆ ಅಂದಿನಿಂದ ಹಿಡಿದು ಇಂದಿನವರೆಗೆ ಉಳಿದಿದೆ. ಅದರ ಪರಂಪರೆ ಮುಂದುವರೆದಿದೆ”.
ನಾಶ ಹೊಂದುತ್ತಿರುವ 20 ಭಾಷೆಗಳಲ್ಲಿ ಕನ್ನಡವು ಸೇರಿದೆ ಎಂದು ವೆಬ್ಸೈಟ್ ವೊಂದು ಹೇಳುತ್ತಿದೆ. ಇದು ಹೇಗಿದೆ ಎಂದರೆ ಭೀಮನಿಗೆ ಮೀಸೆ ಇಲ್ಲದಕ್ಕೂ, ಇರುವುದಕ್ಕೂ ಶ್ಲೋಕ ನೀಡುತ್ತೇವೆ. ಅದೇ ಭೀಮ ಇದ್ದನಾ? ಎನ್ನುವುದನ್ನು ಯಾರು ಹೇಳಲ್ಲ. ಇದೇ ಸಧ್ಯದ ಕನ್ನಡದ ಪರಿಸ್ಥಿತಿ. ಕನ್ನಡ ಕಲಿಯದವರಿಗೆ ಕರ್ನಾಟಕದಲ್ಲಿ ಉದ್ಯೋಗ ದೊರೆಯಬಾರದು. ಸರ್ಕಾರ ಕಠಿಣ ಕ್ರಮಕ್ಕೆ ಬದ್ಧವಾಗಬೇಕು.

ಕನ್ನಡಕ್ಕೆ ಸಾಕಷ್ಟು ಬಿಕ್ಕಟ್ಟುಗಳು ಇದ್ದರು ಸಹ, ಆಡಳಿತದಲ್ಲಿ ಕನ್ನಡ ಸಾಕಷ್ಟು ರೀತಿಯಲ್ಲಿ ಅನುಷ್ಠಾನ ಆಗಿದೆ. ದೆಹಲಿ, ತಮಿಳುನಾಡು, ಆಂಧ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಕನ್ನಡ ಪೀಠಗಳಿವೆ. ಆದರೇ, ಕರ್ನಾಟಕದಲ್ಲಿ ಹೆಚ್ಚಿಗೆ ಇಲ್ಲ. ಅದುವೇ ನಮ್ಮ ದುರ್ದೈವ. ಹೊರ ರಾಜ್ಯಗಳಲ್ಲಿ ಜನ ಚಳುವಳಿಗಳೇ, ಭಾಷಾ ಚಳುವಳಿಗಳಾಗಿ ಮೂಢಿ ಬಂದವು. ಆದರೇ, ಕರ್ನಾಟಕದಲ್ಲಿ ಬೇರೆಯದ್ದೆ ದಾಟಿಯಲ್ಲಿ ಸಾಗಿದೆ.
ಡಿ. ದೇವರಾಜ ಅರಸು ಕಾಲದಲ್ಲಿ ಸಂಸ್ಕೃತ ಮೂರನೇ ಭಾಷೆಯಾಗಿ ಪರಿಗಣಿಸಿ ಕನ್ನಡ ಆಧ್ಯತೆಯ ಮೊದಲ ಬಾಷೆಯಾಯಿತು. ಬದಲಾದ ಪರಿಸ್ಥಿತಿಯಲ್ಲಿ ಗುಂಡೂರಾವ್ ಆಡಳಿತಾವಧಿಯಲ್ಲಿ ಸಂಸ್ಕೃತ ಮೂರನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಬಂತು. ಆ ಸಂಧರ್ಭದಲ್ಲಿ ನಡೆದ ಚಳವಳಿಗಳಲ್ಲಿ ಪ್ರಮುಖವಾದದ್ದು ಗೋಕಾಕ್ ಚಳವಳಿ. ಆದರೇ, ವರದಿ ಇದುವರೆಗೂ ಅನುಷ್ಠಾನ ಆಗಲಿಲ್ಲ. ಅರಸು ಕಾಲದಿಂದ ಆರಂಭವಾದ ಹೋರಾಟ, ಮುಂದುವರಿದು 2014ರಲ್ಲಿ ಪೋಷಕರ ಆಯ್ಕೆಯೇ ಅಂತಿಮ ಎನ್ನುವ ಆದೇಶ ಬಂತು. ನ್ಯಾಯಾಲಯದಲ್ಲಿ ಪ್ರಕರಣ ಇಂದಿಗೂ ನಡೆಯುತ್ತಿದೆ. ಕನ್ನಡ ಕಡ್ಡಾಯಗೊಳಿಸಲು ಸಂಧಿಗ್ನ ಪರಿಸ್ಥಿತಿ ಇರುವಾಗ ಪರಿಹಾರ ಕಂಡುಕೊಳ್ಳಬೇಕು. ಕನ್ನಡ ಉಳಿಸುವ ಕಾರ್ಯಸೂಚಿ ಸಿದ್ಧಪಡಿಸಬೇಕು ಎಂದು ಸುಧೀರ್ಘವಾಗಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ. ಸಂತೋಷ ಹಾನಗಲ್ಲ ಮಾತನಾಡಿ, ವಿಧಾನಸೌಧ ಮೂರನೇ ಮಹಡಿಯಲ್ಲಿ ನಿಗಧಿಯಾಗಿದ್ದ ಸಭೆಯನ್ನು ಅನಿವಾರ್ಯ ಕಾರಣಗಳಿಂದಾಗಿ ಬದಲಾವಣೆ ಮಾಡಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರ್ಕಾರದ ಸ್ವಾಯುತ್ತ ಸಂಸ್ಥೆಯಾಗಿದ್ದು, ಶಾಸನಬದ್ಧ ಅಧಿಕಾರಗಳನ್ನು ಹೊಂದಿದೆ.
ಈ ಸುದ್ದಿ ಓದಿದ್ದೀರಾ? ಮುಂದುವರೆದ ಮೋದಿ ಮುಸ್ಲಿಂ ದ್ವೇಷ ಭಾಷಣ; ವಿಪಕ್ಷಗಳ ಟೀಕೆಗೆ ರಾಮನ ಎಳೆದುತಂದ ಮೋದಿ
ವಿಶೇಷ ಎಂದರೆ ಇಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರೇ ಕನ್ನಡ ಕಾವಲು ಪಡೆಯ ಮೊದಲ ಅಧ್ಯಕ್ಷರಾಗಿದ್ದರು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರ ಅವಧಿಯಲ್ಲಿ ರಚನೆಯಾಯಿತು. ಅಂದಿನಿಂದ ಇಂದಿನವರೆಗೆ 16 ಜನ ಅಧ್ಯಕ್ಷರು, 10 ಜನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಜಾಗೃತಿ ಸಮಿತಿಯನ್ನು ಜಾರಿಗೆ ತಂದವರು ಡಾ. ಬರಗೂರು ರಾಮಚಂದ್ರಪ್ಪನವರು. ರಾಜ್ಯದಾದ್ಯಂತ ಕರ್ನಾಟಕ ಸರ್ಕಾರ ಜಿಲ್ಲೆ, ಮಹಾನಗರ ಪಾಲಿಕೆ ಸೇರಿದಂತೆ
249 ಜನರನ್ನು ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನಾಗಿ ರಾಜ್ಯಪಾಲರ ಆದೇಶದನ್ವಯ ನಾಮ ನಿರ್ದೇಶನ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.





