ಕೋಗಿಲು ಬಡಾವಣೆ ಮನೆ ಧ್ವಂಸ ಪ್ರಕರಣದಲ್ಲಿ ಫಕೀರ್ ಕಾಲೋನಿಯ 25-30 ಮಂದಿಗೆ ಜನವರಿ 8ರೊಳಗೆ ಮನೆ ನೀಡಲು ನಿರ್ಧರಿಸಲಾಗಿದೆ. ಹಾಗೆಯೇ ವಸೀಂ ಕಾಲನಿಯಲ್ಲಿರುವವರ ಮಾತೃ ಭಾಷೆ ಬೇರೆ ಯಾವುದೇ ಆದರೂ ಕರ್ನಾಟಕದ ಮೂಲದವರಾಗಿದ್ದರೆ, ಕರ್ನಾಟಕದಲ್ಲೇ ನೆಲೆಸಿದ್ದವರಾದರೆ ಮನೆ ನೀಡಬೇಕು. ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂದು ತೀರ್ಮಾನಿಸಲಾಗಿದೆ.
ಕೋಗಿಲು ಲೇಔಟ್ ನಿರಾಶ್ರಿತರಿಗೆ ಸರ್ಕಾರಿ ಮನೆ ಮಂಜೂರು ಮಾಡುವ ವಿಚಾರದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ವಿಕಾಸಸೌಧದಲ್ಲಿ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಇದನ್ನು ಓದಿದ್ದೀರಾ? ಕೋಗಿಲು ಗೆ ‘ಸರ್ಕಾರಿ ಬೇಲಿ’ : ನಿವಾಸಿಗಳೊಡನೆ ಮಾತಿನ ಚಕಮಕಿ
ಮಾತೃ ಭಾಷೆ ಬೇರೆಯಾಗಿದ್ದರೂ ಹಲವು ತಲೆಮಾರಿನಿಂದ ಕರ್ನಾಟಕದಲ್ಲಿ ವಾಸವಿದ್ದರೂ, ಮೂಲ ತಾಲೂಕು-ಊರು ಯಾವುದೆಂದು ತಿಳಿದು ಅಲ್ಲಿನ ವಿಎ ಹಾಗೂ ದಫೇದಾರ್ ಮೂಲಕ ಪರಿಶೀಲಿಸಿ ಅದಾದ ಬಳಿಕ ನಿರಾಶ್ರಿತರಿಗೆ ಮನೆ ನೀಡಬೇಕು. ಬಡವರು ಬಡವರೇ ಭಾರತೀಯರು ಭಾರತೀಯರೇ. ಆದರೆ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಐದು ವರ್ಷ ಕರ್ನಾಟಕದಲ್ಲಿ ನೆಲೆಸಿದ್ದರೆ ಅಂತಹ ಬಡವರಿಗೆ 1 ಲಕ್ಷ ಮನೆ ನೀಡುವ ಸರ್ಕಾರದ ವಸತಿ ಯೋಜನೆ ಅಡಿಯಲ್ಲಿ ಅರ್ಜಿ ಹಾಕಿ ಮನೆ ಪಡೆಯಬಹುದು. ಒಂದೇ ಕುಟುಂಬದವರು ಮನೆಗಾಗಿ ಎರಡು ಅರ್ಜಿ ಹಾಕಿದರೆ ಒಂದು ರೇಷನ್ ಕಾರ್ಡ್ ಆಧಾರದಲ್ಲಿ ಒಂದು ಮನೆ ನೀಡಬೇಕು. ಹೊರ ರಾಜ್ಯದವರು ಯಾರೆಂದು ಪತ್ತೆಹಚ್ಚುವ ನಿಟ್ಟಿನಲ್ಲಿ ಕನ್ನಡಿಗರಿಗೆ ಮನೆ ನೀಡಲು ತಡ ಮಾಡುವುದು ಸರಿಯಲ್ಲ. ಮೊದಲು ಅರ್ಹರಿಗೆ ಮನೆ ನೀಡಲು ಆರಂಭಿಸಿ ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದನ್ನು ಓದಿದ್ದೀರಾ? ಕೋಗಿಲು ಬಡಾವಣೆ ಮನೆಗಳ ಧ್ವಂಸ: ಕರ್ನಾಟಕ ‘ಬುಲ್ಡೋಜರ್ ರಾಜ್ಯ’ ಎಂದ ಕೇರಳ ಸಿಎಂ ಪಿಣರಾಯಿ
ಸರ್ಕಾರಿ ಜಮೀನಿನಲ್ಲಿ ಯಾರಿಗೋ ಹಣ ನೀಡಿ ಒತ್ತುವರಿ ಮಾಡಲಾಗುತ್ತಿದೆ. ಅಲೆಮಾರಿಗಳಿಗೆ ಭೂ ಒತ್ತುವರಿ ಅಗತ್ಯ ಇಲ್ಲ. ಅವರು ಒಂದೆಡೆ ನೆಲೆಸುವವರಲ್ಲ. ಆದರೆ ಭೂ ಒತ್ತುವರಿದಾರರನ್ನು ಸಹಿಸಲಾಗದು. ಈ ರೀತಿ ಸರ್ಕಾರಿ ಜಮೀನು ಒತ್ತುವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಯಿತು.
ಈ ರೀತಿ ಸರ್ಕಾರಿ ಜಮೀನಿನಲ್ಲಿ ಶೆಡ್ ಹಾಕಿದ ಮಾತ್ರಕ್ಕೆ ಅವರಿಗೆ ಮನೆ ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಆದರೆ ಕೋಗಿಲು ಕ್ರಾಸ್ ಪ್ರಕರಣದಲ್ಲಿ ಬಡವರಿಗೆ ಮಾನವೀಯತೆ ಅಡಿ ಮನೆ ನೀಡಬೇಕಾಗುತ್ತದೆ. ಆದರೆ ಆ ಕೆಲಸ ಕಾನೂನುಬದ್ಧವಾಗಿಯೇ ನಡೆಯಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.





