“ಕೋಗಿಲು ಲೇಔಟ್ ಸ್ಲಂ ನಿವಾಸಿಗಳ ಹೋರಾಟ ಸಮಿತಿಯು 10ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳನ್ನು ಒಳಗೊಂಡಿದೆ. ನಾವು ಸಾಂವಿಧಾನಿಕ ಮೌಲ್ಯಗಳು ಮತ್ತು ಶಾಂತಿಯುತ ಹೋರಾಟಕ್ಕೆ ಬದ್ಧರಾಗಿದ್ದೇವೆ. ಮನೆಗಳು ನೆಲಸಮವಾದ ಎಲ್ಲರಿಗೂ ಪುನರ್ವಸತಿ ಕಲ್ಪಿಸುವವರೆಗೆ ನಾವು ಹೋರಾಟವನ್ನು ಮುಂದುವರಿಸುತ್ತೇವೆ” ಎಂದು ದುಡಿಯುವ ಜನರ ವೇದಿಕೆ ವತಿಯಿಂದ ಮನೋಹರ್ ಎಲವರ್ತಿ ಹೇಳಿದರು.
ಕೋಗಿಲು ಲೇಔಟ್ ಸ್ಲಂ ನಿವಾಸಿಗಳ ಹೋರಾಟ ಸಮಿತಿಯಿಂದ ಜಿಬಿಎ ನಡೆಸಿದ ಮನೆ ತೆರವುಗೊಳಿಸುವ ಕಾರ್ಯಾಚರಣೆಯಿಂದ ಭಾದಿಸಲ್ಪಟ್ಟ ಸಮುದಾಯಕ್ಕೆ ಪುನರ್ವಸತಿ ಕಲ್ಪಿಸುವಂತೆ ಕೋರಿ ಸಾರ್ವಜನಿಕ ಸಭೆ ಆಯೋಜಿಸಲಾಯಿತು. ಇದರಲ್ಲಿ ಪ್ರಗತಿಪರ ಸಂಘಟನೆಗಳಾದ ದುಡಿಯುವ ಜನರ ವೇದಿಕೆ, ಜನವಾದಿ ಮಹಿಳಾ ಸಂಘಟನೆ, ಸ್ಲಂ ಜನರ ಸಂಘಟನೆ, ಕರ್ನಾಟಕ ಜನಾಂದೋಲನ ಸಂಘಟನೆ, ಕರ್ನಾಟಕ ಜನಶಕ್ತಿ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಜೇಶನ್, NFIW, CITU ಹಾಗೂ ಇನ್ನಿತರ ಜನಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಂವಿಧಾನದ ಪೀಠಿಕೆ ಓದುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಇದನ್ನು ಓದಿದ್ದೀರಾ? ಕೋಗಿಲು ಗೆ ‘ಸರ್ಕಾರಿ ಬೇಲಿ’ : ನಿವಾಸಿಗಳೊಡನೆ ಮಾತಿನ ಚಕಮಕಿ
ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಅವರು “ಯಾವುದೇ ಪೂರ್ವ ಸೂಚನೆ ಇಲ್ಲದೇ ಮನೆಗಳನ್ನು ನೆಲಸಮಗೊಳಿಸಿದ್ದಾರೆ. ಇವರಿಗೆ ತಕ್ಷಣವೇ ಪುನರ್ವಸತಿ ಕಲ್ಪಿಸಬೇಕು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಮಾಡಿರುವ ಶಿಫಾರಸುಗಳನ್ನು ಕೂಡಲೇ ಜಾರಿಗೆ ತರಬೇಕು” ಎಂದರು.
ಸ್ಲಂ ಜನರ ಸಂಘಟನೆಯಿಂದ ಐಸ್ಸಾಕ್ ಅಮೃತರಾಜ್ ಮಾತನಾಡಿ, “ಸ್ಲಂ ಜನರ ರಕ್ಷಣೆಗಾಗಿ ಕಾಯಿದೆ ಇದೆ. ಕರ್ನಾಟಕದಲ್ಲಿ 545ಕ್ಕೂ ಹೆಚ್ಚು ಸ್ಲಮ್ ಗಳು ಸರ್ಕಾರಿ ಜಾಗದಲ್ಲಿವೆ. ಅವುಗಳನ್ನು ಉಳಿಸಿಕೊಂಡಿರುವ ಸಂಘಟನೆಗಳ ಬೆಂಬಲವೂ ನಿಮಗಿದೆ, ಮನೆ ಸಿಗುವವರೆಗೂ ನಿಮ್ಮೊಂದಿಗೆ ನಮ್ಮ ಸಂಘಟನೆ ನಿಲ್ಲುತ್ತದೆ” ಎಂದರು.
CITU ಉಮೇಶ್ ಅವರು ಮಾತನಾಡಿ, “ಭಾರತದಲ್ಲಿ ಆರ್ಟಿಕಲ್ 19 ಪ್ರಕಾರ ಜನಗಳು ಸ್ವತಂತ್ರವಾಗಿ ಎಲ್ಲಾದರೂ ಬದುಕುವ ಹಕ್ಕಿದೆ, ಭಾರತೀಯರನ್ನು ಮುಸಲ್ಮಾನರೆನ್ನುವ ಕಾರಣಕ್ಕಾಗಿ ವಿದೇಶಿಯರೆಂದು ಹಣೆ ಪಟ್ಟಿ ಹಚ್ಚುವುದು ಅಪರಾಧ, ನಮ್ಮ ಮನೆಗಳನ್ನು ಕಿತ್ತುಕೊಂಡು ನಮ್ಮನ್ನು ನಿರಾಶ್ರಿತರನ್ನಾಗಿಸಿದ್ದಾರೆ, ಜನರಿಗೆ ಪುನರ್ವಸತಿ ಕಲ್ಪಿಸಲೇಬೇಕು” ಎಂದರು.

ದುಡಿಯುವ ಜನರ ವೇದಿಕೆ ವತಿಯಿಂದ ನಂದಿನಿ ಮಾತನಾಡಿ, “ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ ‘ಸರ್ವಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸೀಕ ಜೈನರುಧ್ಯಾನ’ ಎಂದಿದ್ದಾರೆ. ಈ ಸಾಲು ಈ ನಾಡಿನಲ್ಲಿ ಎಲ್ಲಾ ಧರ್ಮಕ್ಕೆ ಸೇರಿದ ಜನರು ವಾಸ ಮಾಡುವ ಅವಕಾಶವಿದೆ ಎಂಬುದನ್ನು ಸಾರುತ್ತದೆ. ಮುಲಭೂತ ಹಕ್ಕಾದ ಬದುಕಿನ ಹಕ್ಕಿನ ಉಲ್ಲಂಘನೆಯಾಗಿದೆ, ಸಂವಿಧಾನವನ್ನು ಪಾಲಿಸಿ ಜನರಿಗೆ ಪುನರ್ವಸತಿ ಕೊಡಿ. ವಿಪಕ್ಷಗಳ ಮಾತಿಗಾಗಲಿ ಇನ್ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಜನರಿಗೆ ಮನೆಗಳನ್ನು ಹಂಚಬೇಕು” ಎಂದು ಒತ್ತಾಯಿಸಿದರು.
ಕರ್ನಾಟಕ ಜನಾಂದೋಲನ ಸಂಘಟನೆ ವತಿಯಿಂದ ಮರಿಯಪ್ಪ, “ಇದುವರೆಗೂ ಸರ್ಕಾರ ನೀಡಿದ ವಾಗ್ದಾನಗಳನ್ನು ಈಡೇರಿಸಿಲ್ಲ, ಹೋರಾಟ ಒಂದೇ ದಾರಿ, ನಮ್ಮ ಗುರಿ ಮುಟ್ಟುವವರೆಗೂ ನಾವು ಒಗ್ಗಟ್ಟಿನಿಂದ ಇರೋಣ” ಎಂದರು. ಹೋರಾಟ ಸಮಿತಿಯ ಬ್ಯಾನರ್ ಬಿಡುಗಡೆ ಮಾಡುವುದರ ಮೂಲಕ ಕಾರ್ಯಕ್ರಮ ಸಮಾಪ್ತವಾಯಿತು.





