ಮನರೇಗಾವನ್ನು ‘ವಿಬಿ ಜಿ ರಾಮ್ ಜಿ’ ಎಂದು ಹೆಸರು ಬದಲಿಸಿರುವುದು ಮಾತ್ರವಲ್ಲ, ಇಡೀ ಯೋಜನೆಯ ನಿಯಂತ್ರಣವನ್ನು ಕೇಂದ್ರ ಸರ್ಕಾರ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಯಾವ ರಾಜ್ಯಕ್ಕೆ ಎಷ್ಟು ಅನುದಾನ ಬಿಡುಗಡೆ ಮಾಡಬೇಕು ಅನ್ನೋದನ್ನೂ ಕೇಂದ್ರವೇ ನಿರ್ಧರಿತ್ತದೆ. ದುಡಿವ ಜನರ ಕೆಲಸದ ಹಕ್ಕನ್ನು ಕಸಿದುಕೊಳ್ಳುತ್ತದೆ. ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೇರುತ್ತದೆ ಎಂದು ಕೃಷಿ ತಜ್ಞ, ಚಿಂತಕ ಕೆ.ಪಿ ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮನರೇಗಾ ರಕ್ಷಣಾ ಒಕ್ಕೂಟ-ಕರ್ನಾಟಕ ಆಯೋಜಿಸಿದ್ದ ‘ಉದ್ಯೋಗ ಖಾತರಿ ಧ್ವಂಸದ ವಿಬಿ ಜಿ ರಾಮ್ ಜಿ ಕಾನೂನಿನ ಅಪಾಯಗಳು ಮತ್ತು ಮುನ್ನೆಚ್ಚರಿಕೆ’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. “ಮನರೇಗಾ ಯೋಗಜನೆಗೆ 90% ಅನುದಾನವನ್ನು ಕೇಂದ್ರ ಕೊಡುತ್ತಿತ್ತು. 10%ಅನ್ನು ರಾಜ್ಯಗಳ ಭರಿಸುತ್ತಿದ್ದವು. ಯಾವ ಪ್ರದೇಶಕ್ಕೆ ಎಷ್ಟು ಉದ್ಯೋಗಗಳ ಬೇಡಿಕೆ ಇದೆ ಎಂಬುದನ್ನು ಗ್ರಾಮ ಸಭೆಗಳು ನಿರ್ಧರಿಸುತ್ತಿದ್ದವು. ಅದಕ್ಕೆ ಅನುಗುಣವಾಗಿ ಉದ್ಯೋಗ ಮತ್ತು ಅನುದಾನ ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಈಗ ಯಾವ ರಾಜ್ಯದ ಯಾವ ಪ್ರದೇಶಕ್ಕೆ ಎಷ್ಟು ಉದ್ಯೋಗ ಕೊಡಬೇಕು ಎಂಬುದನ್ನೂ ಕೇಂದ್ರವೇನಿರ್ಧರಿಸಲಿದೆ. ಅಲ್ಲದೆ, ಅನುದಾನದಲ್ಲಿ ಕೇಂದ್ರದ ಪಾಲನ್ನು60%ಗೆ ಇಳಿಸಿದೆ. 40% ಅನುದಾನವನ್ನು ರಾಜ್ಯಗಳೇ ಭರಿಸಬೇಕೆಂದು ಹೇಳುತ್ತಿದೆ. ಇಡೀ ತೆರಿಗೆ ವ್ಯವಸ್ಥೆಯಲ್ಲಿ 75% ಆದಾಯವನ್ನು ಪಡೆಯುವ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನ್ಯಾಯೋಚಿತವಾಗಿ ದೊರೆಯಬೇಕಾದ ಅನುದಾನವನ್ನ ಕಡಿತ ಮಾಡಿ,ಹೆಚ್ಚಿನ ಹೊರೆ ಹೇರಿ ವಂಚಿಸುತ್ತಿದೆ” ಎಂದು ಆರೋಪಿಸಿದ್ದಾರೆ.
“ಕೇಂದ್ರಕ್ಕೆ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವುದು ದಕ್ಷಿಣ ಭಾರತದ ರಾಜ್ಯಗಳು. ಆದರೆ, ಇಲ್ಲಿನ ಹಣವನ್ನು ಕಿತ್ತುಕೊಂಡು ಕೇಂದ್ರವು ಹೆಚ್ಚಾಗಿ ಉತ್ತರದ ರಾಜ್ಯಗಳಿಗೆ ಹಂಚುತ್ತಿದೆ. ಹೀಗಾಗಿ, ಈ ಯೋಜನೆಗೆ ವಿರೋಧ ವ್ಯಕ್ತವಾಗುವುದು ಕೇವಲ ದಕ್ಷಿಣದ ರಾಜ್ಯಗಳು ಮತ್ತು ಬಂಗಾಳದಲ್ಲಿ ಮಾತ್ರ ಎಂಬುದು ಕೇಂದ್ರ ಸರ್ಕಾರಕ್ಕೆ ಗೊತ್ತಿದೆ. ಯಾಕೆಂದರೆ, 60:40 ಅನುದಾನ ಕ್ರಮದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೆ 40% ಅನುದಾನವನ್ನೂ ಕೇಂದ್ರವೇ ಪರೋಕ್ಷವಾಗಿ ಕೊಡುತ್ತದೆ. ಆದ್ದರಿಂದ, ಅವರಾರೂ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ, ದಕ್ಷಿಣ ಭಾರತದ ರಾಜ್ಯಗಳಿಗೆ ಅನುದಾನ ಕಡಿತ ಮಾಡಿ ಹೆಚ್ಚಿನ ಹೊರೆಯಾಗುವಂತೆ ಮಾಡಿದೆ” ಎಂದು ದೂರಿದ್ದಾರೆ.
“ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರು ದೊರೆಯುತ್ತಿಲ್ಲವೆಂದು ರೈತರು ಹೇಳುತ್ತಿದ್ದಾರೆ ಎಂಬ ಕಾರಣವೊಡ್ಡಿ, ಯೋಜನೆಯಡಿ ಕೆಲಸದ ದಿನಗಳನ್ನು 60 ದಿನ ಮನರೇಗಾ ಕೆಲಸ ಸ್ಥಗಿತಗೊಳಿಸಲು ಕೇಂದ್ರ ಹೊಂಚುಹಾಕಿದೆ. ಆದರೆ, ಅದನ್ನ ನಿರ್ಧರಿಸುವ ಹೊಣೆಯನ್ನು ರಾಜ್ಯಗಳಿಗೆ ಬಿಟ್ಟಿದೆ. ಇದರಿಂದ, ರಾಜ್ಯ ಸರ್ಕಾರಗಳು ಜನರ ಆಕ್ರೋಶಕ್ಕೆ ಗುರಿಯಾಗುತ್ತವೆ. ಕೇಂದ್ರವು ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತದೆ. ಆದಾಗ್ಯೂ, ಮನರೇಗಾ ಅಡಿ ದಿನದ ಕೂಲಿ 390 ರೂ. ಇದೆ. ಆದರೆ, ಕೃಷಿ ಕೂಲಿಯು 600 ಇದೆ. ಮಾಡಿದೆ. ಆದರೂ, ಕೃಷಿ ಕೆಲಸಕ್ಕೆ ಕಾರ್ಮಿಕರು ದೊರೆಯುತ್ತಿಲ್ಲ ಎಂಬುದಕ್ಕರ ಕಾರಣ, ಮನರೇಗಾವಲ್ಲ ನಗರೀಕರಣದ ಹೊಡೆತ” ಎಂದು ವಿವರಿಸಿದ್ದಾರೆ.
“ವಿಬಿ ಜಿ ರಾಮ್ ಜಿ ಎಂಬುದು ಘಾತುಕ ಯೋಜನೆ. ಆದರೆ, ಈ ಯೋಜನೆಯಡಿ ಅನುದಾನದಲ್ಲಿ ಕೇಂದ್ರದ ಪಾಲನ್ನು 80%ಗೆ ಹೆಚ್ಚಿಸಿದರೂ, ಎಲ್ಲ ಸರ್ಕಾರಗಳು, ರಾಜಕಾರಣಿಗಳು ಒಪ್ಪಿಕೊಳ್ಳುವ ಆತಂಕವಿದೆ. ಯಾಕೆಂದರೆ, ನಮ್ಮರಾಜಕಾರಣಿಗಳು ಗುತ್ತಿಗೆದಾರರ ಮೇಲುಗೈ ಕಾಣುವ ಕಾಮಗಾರಿಗಳನ್ನು ಒಳಗೊಳ್ಳುವುದರಿಂದ, ಯೋಜನೆಯನ್ನು ಒಪ್ಪಿಕೊಳ್ಳಬಹುದು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ನಾಯಕ ಇಂಧೂದರ ಹೊನ್ನಾಪುರ, “ಬಿಜೆಪಿ ದೇಶದ ಅಧಿಕಾರ ಹಿಡಿದಾಗಿನಿಂದ ಭಾರತದ ಪ್ರಗತಿಯಲ್ಲಿ ಹಿಂಚಲನೆ ಆರಂಭವಾಗಿದೆ. ಈಗ, ಮನರೇಗಾ ಯೋಜನೆಯನ್ನು ಮಣ್ಣುಪಾಲು ಮಾಡುತ್ತಿದೆ. ಕೇಂದ್ರ ಈ ಹೊಸ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಹಿಮ್ಮೆಟ್ಟಲು ಎಲ್ಲ ಜನಪರ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಮಾಡುತ್ತೇವೆ” ಎಂದಿದ್ದಾರೆ.
“ಮನರೇಗಾ ಉಳಿಸುವ ಹೋರಾಟದಲ್ಲಿ ಕಾಂಗ್ರೆಸ್ ಮುಂಚೂಣಿಗೆ ಬರುತ್ತಿಲ್ಲ. ಕಾಂಗ್ರೆಸ್ಅನ್ನು ನೆಚ್ಚಿ ಹೋರಾಟ ಕಟ್ಟಲು ಸಾಧ್ಯವೂ ಇಲ್ಲ. ಇದು ಜನರ ಹೋರಾಟವೇ ಆಗಬೇಕು. ಕೂಲಿ ಕಾರ್ಮಿಕರು, ರೈತರು, ದಲಿತರು ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕು” ಎಂದರು.
ಈ ಲೇಖನ ಓದಿದ್ದೀರಾ?: ವಿಶೇಷ ಅಧಿವೇಶನದ ಹಿಂದೆ ಅಧಿಕಾರ ಹಂಚಿಕೆ ಮುಂದೂಡುವ ರಾಜಕಾರಣ ಅಡಗಿದೆಯೇ?
ಕಾರ್ಯಕ್ರಮದಲ್ಲಿ ಮಾತನಾಡಿದ ರೈತ ಸಂಘದ ಎನ್.ಡಿ ವಸಂತ್ ಕುಮಾರ್, “ರೈತ ಸಂಘವು ಮನರೇಗಾ ಕಾಯ್ದೆ ಉಳಿವಿಗಾಗಿನ ಹೋರಾಟದಲ್ಲಿ ಸಕ್ರಿಯವಾಗಿ ಇರಲಿದೆ. ಹೊಸ ಕಾಯ್ದೆ ತಂದಿರುವ ಬಿಜೆಪಿ ಸರ್ಕಾರ, ಎಲ್ಲರನ್ನು ಮೂರ್ಖರನ್ನಾಗಿಸುವ ಜಾಣ ನಡೆ ಅನುಸರಿಸಿದೆ. ದೇಶಾದ್ಯಂತ ಉದ್ಯೋಗ ಖಾತರಿ ನೀಡುವ ಕಾಯ್ದೆಯನ್ನೇ ತಲೆಕೆಳಗೆ ಮಾಡಲು ಬಿಜೆಪಿ ಹುನ್ನಾರ ಹೆಣೆದಿದೆ. ಅತ್ಯುತ್ತಮ ಕಾಯ್ದೆಯನ್ನು ಜಾರಿಗೆ ತಂದಿದ್ದ ಕಾಂಗ್ರೆಸ್ಗೆ ಅದನ್ನು ಉಳಿಸಿಕೊಳ್ಳುವ, ಸಮರ್ಥವಾಗಿ ಹೋರಾಟ ರೂಪಿಸಲಾಗದೆ ಮೂರ್ಖನಂತಾಗಿದೆ. ಕಾಯ್ದೆಯ ಉಳಿವಿಗಾಗಿ ಎಲ್ಲರೂ ಹೋರಾಟ ಕಟ್ಟಬೇಕಾಗಿದೆ” ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಶಾರಾದಾ ಗೋಪಾಲ್, ಪ್ರಕಾಶ್ ಕಮ್ಮರಡಿ, ಮೈತ್ರೇಯಿ ಕೃಷ್ಣನ್, ಚೆನ್ನಮ್ಮ, ರೇಣುಕ, ಪುಟ್ಟ ಮಾದು, ಪರಶುರಾಮ, ಮಹಾಂತೇಶ್, ಗುತ್ತೆಮ್ಮ ಸುಣಗಾರ್, ಕೆ ಮಂಜುನಾಥ್ ಇದ್ದರು.




