ದಿನಗಣನೆಯಲ್ಲಿರುವ ವಿಧಾನಸಭಾ ಚುನಾವಣೆಯ ಭರಾಟೆ ಜೋರಾಗಿದೆ. ಬೆಂಗಳೂರಿನಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ಮೋದಿ 36 ಕಿ.ಮೀ ರೋಡ್ ಶೋ ನಡೆಸುತ್ತಿದ್ದಾರೆ. ಶನಿವಾರ ಸುಮಾರು 28 ಕಿ.ಮೀ ರೋಡ್ ಶೋ ನಡೆಸಿದ್ದು, ಮೋದಿ ಸಾಗಿದ ರಸ್ತೆಯುದ್ದಕ್ಕೂ ಸಾವಿರಾರು ಜನರು ನೆರೆದಿದ್ದರು.
ಬೆಂಗಳೂರಿನಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1:00ರವರೆಗೂ ರೋಡ್ ಶೋ ಇತ್ತು. ರೋಡ್ ಶೋ ನಡೆದ ಬೀದಿಗಳಲ್ಲಿ ನೆರೆದಿದ್ದ ಜನರಲ್ಲಿ ಕನಿಷ್ಠ ಶೇ.80ರಷ್ಟು ಮಂದಿಗೂ ಮೋದಿಗೂ ಸಂಬಂಧವೇ ಇಲ್ಲದ್ದು ಕಂಡು ಬಂತು. ಅವರೆಲ್ಲ ಬಿಜೆಪಿ ರಾಜಕೀಯ ನಾಯಕನಿಗಾಗಿ ಕಾದಿದ್ದವರು ಎಂಬುದು ಮೇಲ್ನೋಟ್ಕಕೇ ತಿಳಿಯುತ್ತಿತ್ತು. ಬೆಂಗಳೂರಿನ ಅಂಚಿನ ಹಲವಾರು ಪ್ರದೇಶಗಳಿಂದ ಬೆಳಂಬೆಳಗ್ಗೆ ಎದ್ದ ಜನರನ್ನು ಬಿಜೆಪಿ ಮುಖಂಡರು ದುಡ್ಡು ಕೊಟ್ಟು, ಟೆಂಪೊ ಹತ್ತಿಸಿಕೊಂಡು ನಗರಕ್ಕೆ ಕರೆತಂದಿದ್ದರು.
ಅವರೆಲ್ಲರಿಗೂ ಬಿಜೆಪಿ ಮುಖಂಡರು ₹500 ಕೊಟ್ಟು ಕರೆತಂದಿದ್ದರು. ಹೆಚ್ಚಿನವರು ಬಡವರು. ಒಂದೆರಡು ದಿನದ ಮನೆ ಖರ್ಚಿಗಾದರು ನೆರವಾಗುತ್ತದೆಂದು ಬಂದಿದ್ದರು. ಇದನ್ನು ಮಹಾಕವಿ ಕುವೆಂಪು ರಸ್ತೆಯಲ್ಲಿ ನಿಂತಿದ್ದ ಮಹಿಳೆಯೊಬ್ಬರು ಖಾತ್ರಿ ಪಡಿಸಿದ್ದಾರೆ.
ರೋಡ್ ಶೋ ಮಧ್ಯೆ ಯಾರೇ ರಾಜಕೀಯ ಪಕ್ಷದ ನಾಯಕ ಕಂಡರೂ ಜೈಕಾರ ಕೂಗುತ್ತಿದ್ದವರು ಕೆಲವರಷ್ಟೇ. ಸಮಾರು 70% ಜನರು ಘೋಷಣೆ ಕೂಗದೆ ಸುಮ್ಮನಿದ್ದರು. ಅವರಲ್ಲಿ ”ಹಣ ಕೊಟ್ಟರೆ ಸಾಕು ನಾವಿನ್ನು ಹೊರಡುತ್ತೇವೆ. ನಮ್ಮನ್ನು ನಮ್ಮ ಪ್ರದೇಶಕ್ಕೆ ಬಿಟ್ಟು ಬಿಡಿ. ಮೋದಿಜೀ ಇನ್ನೂ ಯಾವ ಮೂಲೇಲಿ ‘ಹಾಯ್ ಬಾಯ್’ ಮಾಡ್ತಿದ್ದೀರಿ ಬೇಗ ಈ ಕಡೆ ದಯಮಾಡಿಸಿ” ಎಂಬ ಕೊರಗಿನೊಂದಿಗೆ ಮೌನವಾಗಿ ನಿಂತಿದ್ದರು.
ಈ ಸುದ್ದಿ ಓದಿದ್ದೀರಾ?: ಮೋದಿ ರೋಡ್ ಶೋಗಾಗಿ ನೂರಾರು ಮರಗಳ ಮಾರಣಹೋಮ; ಸಾರ್ವಜನಿಕರ ಆಕ್ರೋಶ
ಮನೇಲಿ ಕೂತು ಮಾಡೋದೇನಿದೆ; ಹಣ ಕೊಟ್ರೆ ಒಂದಿನದ್ ಸರಕಾಗುತ್ತೆ
ರೋಡ್ ಶೋನಲ್ಲಿ, ಮೋದಿ ನೋಡಲು ಅಷ್ಟೊಂದು ಕುತೂಹಲವೇ ಎಂದು ಅಲ್ಲೆ ನಿಂತಿದ್ದ ವೃದ್ಧೆಯೊಬ್ಬರನ್ನು ಪ್ರಶ್ನಿಸಿದರೆ, “ಅಯ್ಯೋ ಇಲ್ಲ ₹500 ಕೊಡ್ತೀವಿ ಅಂದ್ರು ಅದಿಕ್ಕೆ ಅಲ್ಲಿಂದ ಇಷ್ಟು ದೂರ ಬಂದ್ವಿ. ಸುಮ್ನೆ ಮನೇಲಿ ಕೂತು ಏನ್ ಮಾಡೋದು, ದುಡ್ಡ್ ಕೊಟ್ರೆ ಏನುಕಾದ್ರು ಆಯ್ತದೆ, ಒಂದಿನದ್ ಮನೆ ಸರಕಾದ್ರು ಸಿಗ್ತದೆ” ಎಂದರು. ಯಾವ್ ಪಕ್ಷ ಬಂದ್ರೆ ಚಂದ ಎಂದು ಪ್ರಶ್ನೆ ಮಾಡಿದಾಗ, “ಯಾರೂ ಸರಿ ಇಲ್ಲ, ಯಾರೂ ಏನೂ ಕೊಟ್ಟಿಲ್ಲ. ಶ್ರೀಮಂತರಿಗೆ ಸೌಕರ್ಯ ಇದೆ ನಮಗಿಲ್ಲ. ಇಲ್ಲಿಗೆ ಬರೋದಕ್ಕೂ ಮುಂಚೆ ಊಟ ಮಾಡ್ತಿದ್ದೆ, ಟೆಂಪೋ ಬಂತು ಅಂತ ಹಂಗೆ ಹತ್ತಿಸಿಕೊಂಡು ಬಂದ್ರು. ಹೊಟ್ಟೆಗಂತು ಇನ್ನೂ ಹಿಟ್ಟಿಲ್ಲ. ಕುಡಿಯಕೆ ನೀರಾದ್ರು ಕೊಟ್ಟಿದ್ದಾರಲ್ಲ ಅದಕ್ಕೆ ನಿಂತಿದ್ದೀವಿ. ಬೇಗ ಮನೆ ಸೇರಿಕೊಂಡರೆ ಸಾಕಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಬೆಲೆ ಏರಿಕೆ ಮಾಡಿರೋರನ್ನ ನೋಡೋ ಕಾತುರ
“ಪ್ರಧಾನಿ ನರೇಂದ್ರ ಮೋದಿ ನೋಡೋಕಂತ ಇಲ್ಲೆ ಕಾಯ್ತಿದ್ದೀವಿ. ಅನ್ನ ಬೇಯಿಸಕಿರೋ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದಾರೆ. ನಮ್ಮಂತ ಬಡವರ ಕಷ್ಟ ಕೇಳದೆ ಊರೂರು ತಿರುಗಾಡ್ತಾ ದೇಶ ಉದ್ಧಾರ ಮಾಡತೀನಿ ಅಂತಿದಾರೆ. ಹತ್ತಿರದಿಂದ ಅವರನ್ನು ಕಾಣೋ ಆಸೆ” ಎಂದು ರೋಡ್ ಶೋಗೆ ಬಂದಿದ್ದ ಬಿಬಿಎಂಪಿ ಪೌರ ಕಾರ್ಮಿಕ ಮಹಿಳೆ ವ್ಯಂಗ್ಯವಾಡಿದರು.
ಪುಕಸಟ್ಟೆ ದುಡ್ಡು ಕೊಡ್ತಾರಾ? ನಮ್ಮ ದುಡ್ಡು ನಮಗೆ
“ದುಡ್ಡು ಕೊಡ್ತೀವಿ ಅಂತ ಅಂದ್ರು ಅದಕ್ಕೆ ನಮ್ಮಮ್ಮ ಹೋಗು ಹೋಗು ಅಂತ ಗೋಳಾಡದ್ರು ಹಾಗಾಗಿ ಬಂದೆ. ಬೆಳಗ್ಗೆ ಬಂದ್ವಿ ನೀರಲ್ಲೆ ಹೊಟ್ಟೆ ತುಂಬಿಸುತ್ತಿದ್ದಾರೆ. ಮೋದಿ ರೋಡ್ ಶೋಗೆ ಬಂದ್ರೆ ₹500 ಕೊಡ್ತೀವಿ ಅಂದ್ರು ಕಾಯ್ತಿದಿವಿ ಮೋದಿ ಬರೋದನ್ನ ನೋಡ್ತೀವಿ. ಅವರೇನು ಪುಕಸಟ್ಟೆ ದುಡ್ಡು ಕೊಟ್ಟಾರ? ನಮ್ಮ ದುಡ್ಡು ನಮಗೇ ಕೊಡ್ತಾರೆ. ಯಾವ ಪಕ್ಷಕ್ಕೆ ಓಟ್ ಹಾಕಬೇಕು ಅನ್ನೋದೆ ದೊಡ್ಡ ತಲೆ ನೋವು. ಯಾರು ಸರಿಯಾದ ರಾಜಕೀಯ ಮಾಡಲ್ಲ. ಏನು ಸೌಲಭ್ಯ ಇಲ್ಲ. ಉದ್ಯೋಗ ಇಲ್ಲ. ಯಾರ ಮೇಲೆ ನಂಬಿಕೆ ಇಡೋದು ಅನ್ನೋದೆ ಗೊತ್ತಿಲ್ಲ. ಜೀವನ ಅತಂತ್ರ ಆಗಿದೆ. ಇದೇ ಸರ್ಕಾರ ಮುಂದೆ ಬಂದ್ರೆ ನಾವು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಬೇಕು” ಎಂದು ಕೊರಗಿದರು.




