ಮತ ಭ್ರಾಂತಿ ಮತ್ತು ಮತಿ ಭ್ರಾಂತಿ ಅಂತ ಕುವೆಂಪು ಹೇಳಿದ್ದು ನಮಗೆ ಪ್ರಸ್ತುತ ಅನ್ನಿಸುತ್ತದೆ. ರಾಜಕೀಯವಾಗಿ ಪಕ್ಷ ನಿಷ್ಠೆ ಎನ್ನುವುದು ಇದ್ದರೆ, ಸೃಜನಶೀಲತೆ ಬತ್ತಿ ಹೋಗುತ್ತದೆ. ಪ್ರಗತಿಶೀಲ ಪಂಥದಲ್ಲಿ ನಿರಂಜನರು ಬರೆದ ಅನೇಕ ಕಥೆಗಳು ಇಂದಿಗೂ ಪ್ರಸ್ತುತ ಎನಿಸಿಕೊಂಡಿವೆ ಎಂದು ಹಿರಿಯ ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.
ಕ್ರಿಯಾ ಮಾಧ್ಯಮ ಹಾಗೂ ಜನ ಶಿಕ್ಷಣ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ, ನಿರಂಜನ ಶತಮಾನ ಸಮಾರೋಪ – ವಿಚಾರ ಸಂಕಿರಣ ಮತ್ತು ‘ನಿರಂಜನ ಮರು ಓದು’ ಸರಣಿ ಬಿಡುಗಡೆ ಕಾರ್ಯಕ್ರಮದಲ್ಲಿ ನಿರಂಜನರ ನಾಲ್ಕು ಪುಸ್ತಕಗಳನ್ನು ಎಲ್ ಎನ್ ಮುಕುಂದರಾಜ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಾಹಿತಿ ಎನ್ ಗಾಯತ್ರಿ, “1954ರಲ್ಲಿ ನಿರಂಜನರು ಬರೆದ ‘ಬನಶಂಕರಿ’ ಕಾದಂಬರಿಯು ಅವರ ಬದುಕಿನ ಅನುಭವದ ಗಟ್ಟಿ ನೆಲೆ. ಕ್ರೌರ್ಯವನ್ನು ಹೇಗೆ ತಣ್ಣಗೆ ನಿರೂಪಿಸಬಹುದು ಎಂದು ನಿರಂಜನ ತೋರಿಸಿದ್ದಾರೆ. ಒಂದು ರೀತಿಯ ಸಾಂಸ್ಥಿಕ ಕ್ರೌರ್ಯವನ್ನು ಈ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಇದು ಮಹಿಳಾ ಲೋಕಕ್ಕೆ ನಿರಂಜನರು ಕೊಟ್ಟ ಅಪರೂಪದ ಕೊಡುಗೆ” ಎಂದು ಅಭಿಪ್ರಾಯಪಟ್ಟರು.
ಮುಂದುವರೆದು, “80ರ ದಶಕದಲ್ಲಿ Personal is political ಎಂಬ ಘೋಷವಾಕ್ಯ ಮಹಿಳಾ ಚಳುವಳಿ ಗಟ್ಟಿಯಾಗಿ ಮೊಳಗುತ್ತಿತ್ತು. ನಿರಂಜನರು ಬರೆದ ಅನೇಕ ಕಥೆಗಳು ಮಹಿಳೆಯರು ಎದುರಿಸುವ ಅನೇಕ ಸಮಸ್ಯೆಗಳ ಬಗ್ಗೆ ಮಾತನಾಡುತ್ತದೆ. ಇಡೀ ಜೀವಮಾನದುದ್ದಕ್ಕೂ ಸುಮಾರು 150 ಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಬಹಿಷ್ಕೃತೆ ಮತ್ತು ಆಜೀವನ ಎಂಬ ಎರಡು ಕಥೆಗಳು ನಿರಂಜನರ ಆತ್ಮ ಕಥನವೇ ಅನಿಸುತ್ತದೆ. ಅವರ ‘ಕೊನೆಯ ಗಿರಾಕಿ’ ಕಥೆಯು ಸಮಾಜವಾದ ತತ್ವದ ಮೂಲವಾದ, ಮಾನವ ಜೀವನದ ಬಗ್ಗೆ ಹೇಳುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎಂ.ಜಿ.ಹೆಗಡೆ, ಪತ್ರಕರ್ತರಾದ ನವೀನ್ ಸೂರಿಂಜೆ, ಪ್ರತಿಭಾ ಭಟ್, ಅನಂತ ಶಾಂದ್ರೇಯ, ರಂಗನಾಥ್ ಕುಂಟನಕುಂಟೆ ಹಾಗೂ ನಿರಂಜನ ಅವರ ಮಗಳಾದ ತೇಜಸ್ವಿನಿ ನಿರಂಜನ ಉಪಸ್ಥಿತರಿದ್ದರು.





