ಫೆಬ್ರವರಿ 21 ಮತ್ತು 22ರಂದು ಬೆಂಗಳೂರು ನಗರದ ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್ ಆರ್ಟ್ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಉತ್ಸವ ‘ಒಂದೆಡೆ ರಂಗೋತ್ಸವ’ವು ನಡೆಯಲಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಭಾರತೀಯ ಸಾಮಾಜಿಕ ಸಂಸ್ಥೆ, ರಾಜ್ಯ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಸಹಕಾರದಲ್ಲಿ ‘ಒಂದೆಡೆ’ ಸಂಘಟನೆಯು ಈ ಉತ್ಸವವನ್ನು ಆಯೋಜಿಸುತ್ತಿದೆ.
ಎರಡು ದಿನಗಳ ಈ ಲಿಂಗತ್ವ ಅಲ್ಪಸಂಖ್ಯಾತರ ಸಾಂಸ್ಕೃತಿಕ ಸಮ್ಮಿಲನ ಫೆಬ್ರವರಿ 21 ಅಂದರೆ ಇಂದು ಬೆಳಿಗ್ಗೆ 11.00 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಅದಕ್ಕೂ ಮುನ್ನವೇ ವೈಷ್ಣವಿ ನಾಟ್ಯಶಾಲಾ ತಂಡದ ಸದಸ್ಯರಿಂದ ಭರತನಾಟ್ಯ ಪ್ರದರ್ಶನಗೊಳ್ಳಲಿದೆ. ಬಳಿಕ ರಂಗಪಯಣ ತಂಡವು `ಅಕ್ಕೆ-ಕರುಣೆಗೊಂದು ಸವಾಲು’ ರಂಗ ಪ್ರಸ್ತುತಿ ನೀಡಲಿದೆ.
ಇದನ್ನು ಓದಿದ್ದೀರಾ? ಮಹಿಳೆಯರ ಸುರಕ್ಷತೆಗೆ ʼಸಖಿ ಆಟೋʼ ಸೇವೆ: ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆ
ಮಧ್ಯಾಹ್ನದ ಬಳಿಕ ವೈಷ್ಣವಿ ನಾಟ್ಯಶಾಲಾ ತಂಡದ ಸದಸ್ಯರ ಭರತನಾಟ್ಯ ಪ್ರದರ್ಶನವಿರಲಿದ್ದು, ಬಳಿಕ ಕವಿಗೋಷ್ಠಿಯಲ್ಲಿ ಸಮುದಾಯದ ಸದಸ್ಯರು ಕವನ ವಾಚಿಸಲಿದ್ದಾರೆ. ನಂತರ ಸಾಧನ ಮಹಿಳಾ ಸಂಘವು ‘ಹಸಿವು ಕನಸು’ ರಂಗ ಪ್ರಸ್ತುತಿ ಪ್ರದರ್ಶಿಸಲಿದೆ. ಒಂದೆಡೆ ರಂಗ ತಂಡವು ಕರಗಾಟ ಪ್ರಸ್ತುತಪಡಿಸಲಿದೆ. ಜತೆಗೆ ಸಮುದಾಯದ ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವಿರಲಿದೆ.

ಫೆಬ್ರವರಿ 22ರಂದು ಒಂದೆಡೆ ರಂಗತಂಡ ಮತ್ತು ಉತ್ತರ ಕರ್ನಾಟಕ ಜೋಗಪ್ಪ ಸಂಘದ ಸದಸ್ಯರು ಚೌಡಕಿ ಪದ ಹಾಡಲಿದ್ದಾರೆ. ಬಳಿಕ ರೂಮಿ ಹರೀಶ್ ಅವರ ಎ ಟು ಇ’ ಏಕವ್ಯಕ್ತಿ ಪ್ರದರ್ಶನವಿರಲಿದೆ. ಊಟದ ವಿರಾಮದ ಬಳಿಕ ‘ಪರಿವರ್ತಿತ ಲಿಂಗತ್ವ’ ಸಮುದಾಯವು ‘ತಲ್ಕಿ’ ನಾಟಕ ಪ್ರದರ್ಶನ ನೀಡಲಿದೆ. ಒಂದೆಡೆ ತಂಡದಿಂದ ಸಾಂಸ್ಕೃತಿಕ ಹಾಡುಗಳ ಗಾಯನ ಇರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.





