ಬೆಂಗಳೂರಿನಲ್ಲಿ ನಡೆದ ಕನ್ನಡ ಜಾಗೃತಿ ಸಮಿತಿ ಸದಸ್ಯರ ಒಂದು ದಿನದ ರಾಜ್ಯಮಟ್ಟದ ಕಮ್ಮಟದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಮಾತನಾಡಿ, ” ರಾಜ್ಯ ಸರ್ಕಾರ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಕನಿಷ್ಠ ಉತ್ತೀರ್ಣ ಅಂಕಗಳನ್ನು ಶೇ. 33% ಕ್ಕೆ ಇಳಿಸುವ ನಿರ್ಧಾರ ಅವೈಜ್ಞಾನಿಕ ಹಾಗೆಯೇ ಕನ್ನಡ ಭಾಷೆ ಕಲಿಕೆಗೆ ಮಾರಕ ಎಂದು ಅಭಿಪ್ರಾಯಪಟ್ಟರು.
ಸರ್ಕಾರದ ನಿರ್ಧಾರ ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲಿ ಕನ್ನಡ ಕಲಿಕೆಗೆ ತೊಡಕಾಗಲಿದ್ದು, ಕನ್ನಡ ಭಾಷೆ ಕಲಿಕೆಯ ಗಂಭೀರ ಸ್ವರೂಪ ಕಳೆದುಕೊಳ್ಳಲಿದೆ. ಇದನ್ನ ಎಲ್ಲರೂ ಒಕ್ಕೋರಲಿನಿಂದ ವಿರೋಧಿಸಬೇಕಿದೆ. ಶಿಕ್ಷಣ ತಜ್ಞರ ಸಮಿತಿಯ ‘ರಾಜ್ಯ ಶಿಕ್ಷಣ ನೀತಿ’ 1250 ಪುಟಗಳ ವರದಿಯನ್ನು ಹಸ್ತಾಂತರ ಮಾಡಿ ಆರು ತಿಂಗಳೇ ಕಳೆದಿದೆ. ಸರ್ಕಾರ ಸಾರ್ವಜನಿಕವಾಗಿ ಚರ್ಚೆಗೆ ತರುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.
ನಿಕಟಪೂರ್ವ ಎಲ್ಲಾ ಅಧ್ಯಕ್ಷರುಗಳ ಕೊಡುಗೆ ಪ್ರಾಧಿಕಾರಕ್ಕಿದೆ. ಭವಿಷ್ಯಕ್ಕೆ ಹೆಜ್ಜೆಯಿಡುವಾಗ ಮೌಲ್ಯ ಬಹು ಮುಖ್ಯವಾದದ್ದು. ದಿನನಿತ್ಯದ ಕನ್ನಡ ಸಮಸ್ಯೆಗಳನ್ನ ಬಗೆಹರಿಸಲು ಪರಿಹಾರ ಕಂಡುಕೊಳ್ಳಬೇಕು. ರಾಜ್ಯದಾದ್ಯಂತ ಬರುವ ಸಮಸ್ಯೆಗಳನ್ನು ಆಯಾ ಜಿಲ್ಲೆಯ ಸದಸ್ಯರು ಪರಿಹರಿಸಬೇಕು. ಆ ನಿಟ್ಟಿನಲ್ಲಿ ಕನ್ನಡ ಜಾಗೃತಿ ಸಮಿತಿ ಸದಸ್ಯರ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದರು.
ಮುಂಬರುವ ದಿನಗಳಲ್ಲಿ ಕನ್ನಡ ಸಬಲೀಕರಣ ಯೋಜನೆ ಭಾಗವಾಗಿ ನೂರು ಪುಸ್ತಕ ಹೊರತರುವುದಾಗಿದ್ದು. ಈಗಾಗಲೇ 41 ಪುಸ್ತಕಗಳು ಸಿದ್ಧತೆಯಲ್ಲಿವೆ. ಮುಖ್ಯವಾಗಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ವಿದ್ಯಾರ್ಥಿಗಳು ಓದುವಂತಾಗಬೇಕು ಎಂದರು.
ರಾಜ್ಯ ಬೌಗೋಳಿಕವಾಗಿ 230ಕ್ಕೂ ಹೆಚ್ಚು ಭಾಷೆಗಳನ್ನು ಹೊಂದಿದೆ. ಅದರಲ್ಲೂ ಆಡಳಿತ, ಶೈಕ್ಷಣಿಕ, ವ್ಯವಹಾರ ಸೇರಿದಂತೆ ಎಲ್ಲದರಲ್ಲೂ ಸಂಪೂರ್ಣ ಅನುಷ್ಠಾನವಾಗುವಂತೆ ಆಗಬೇಕಿದೆ. ಉದ್ಯೋಗ ಸೃಷ್ಟಿ ಬಗ್ಗೆ ಅಂಕಿ ಅಂಶಗಳು ಸಿಗುತ್ತಿಲ್ಲ. ಉದ್ಯೋಗ ಸೃಷ್ಟಿ ಬಗ್ಗೆ ಹೇಳಿಕೆಗಳಿವೆ. ನಮ್ಮದೇ ರಾಜ್ಯದಲ್ಲಿ ಕನ್ನಡಿಗರು ಉದ್ಯೋಗ ಪಡೆಯಲು ಕೌಶಲ್ಯ ತರಭೇತಿ ಪಡೆಯುವುದು ಅತ್ಯಗತ್ಯ. ಪೈಪೋಟಿಯಲ್ಲಿ ಉದ್ಯೋಗ ಪಡೆಯುವಂತಾಗಬೇಕು.
ಕನ್ನಡದಲ್ಲಿ ವಿದ್ಯಾರ್ಥಿಗಳು ಅನುತ್ತಿರ್ಣ ಹೊಂದಲು ಕಾರಣ ಹುಡುಕುವುದು, ಪಠ್ಯ ಪುಸ್ತಕ ಸರಳೀಕರಣ, ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೆಲಸ, ಮದರಸಗಳಲ್ಲಿ ಕನ್ನಡ ಕಲಿಕೆ ಕಾರ್ಯರೂಪದಲ್ಲಿದೆ ಎಂದು ಹೇಳಿದರು.

ಮಾಜಿ ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯ ಮಾತನಾಡಿ,” ‘ಸೈನಿಕರು ಹೇಗೆ ದೇಶ ಕಾಯುತ್ತಾರೋ, ಆ ಭಾವನೆಯಂತೆಯೇ ಕನ್ನಡ ಜಾಗೃತಿ ಸಮಿತಿ ಸದಸ್ಯರು ಕನ್ನಡದ ಕಾವಲು ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆಯಿದೆ’. ಯಾವುದೇ ಅಪೇಕ್ಷೆ ಇರದೇ ಕನ್ನಡದ ಸೇವೆ ಮಾಡಲು ಅವಕಾಶ ಇರುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ” ಮಾತ್ರ ಎಂದರು.
ಕನ್ನಡ ಉಳಿಸಲು ಸಾಕಷ್ಟು ಸವಾಲುಗಳು ನಮ್ಮ ಮುಂದಿವೆ. ಭಾಷಾ ತಜ್ಞರಿಗೆ ಅರಿವಿದೆ ಭಾಷೆಗಳ ಸಾವು ಯಾವುದೇ ಕಾರಣ, ಪ್ರೇರಣೆ ಇರದೆ ಭಾಷೆಗಳು ಸಾಯುವುದು ನ್ಯಾಯವಲ್ಲ. ಕನ್ನಡಕ್ಕೆ ಆತಂಕದ ಸ್ಥಿತಿ ಈಗಲೂ ಇದೇ. ಬೇರೆ ಭಾಷೆಗಳಿಗಿರುವ ನಿರಾತಂಕ ಕನ್ನಡಕ್ಕಿಲ್ಲ. ಭಾಷೆಯ ತೊಡಕು ಸಾಕಷ್ಟಿದ್ದು, ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಬೇಕು.
ಹೊರ ರಾಜ್ಯದಲ್ಲಿ ಆಯಾ ಭಾಷೆಗಳ ಸಂವಹನ ಇದೇ. ಅದೇ ಪರಿಸ್ಥಿತಿ ನಮ್ಮಲ್ಲಿ ಇದುವರೆಗೆ ನಿರ್ಮಾಣವಾಗಿಲ್ಲ. ಕನ್ನಡ ಉಳಿಸಿ, ಬೆಳೆಸುವ ಸವಾಲು ಮುಂದಿದೆ. ಆಡಳಿತ ವರ್ಗ ಕನ್ನಡ ನಿರ್ಲಕ್ಷಿಸಿ ಆಂಗ್ಲ ಪರವಾಗಿದ್ದಾರೆ. ಕನ್ನಡ ಹೆಚ್ಚು ಬಳಸುವ ಪ್ರಯತ್ನ ಆಗಬೇಕು. ಅನ್ಯ ಭಾಷೆಯ ವ್ಯಾಮೋಹ, ಮಡಿವಂತಿಕೆ ಬಿಡಬೇಕು.
ಕನ್ನಡದ ಮೇಲಿನ ಹಿಡಿತ ಮುಖ್ಯವಾದದ್ದು ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ನಿರಂತರ ಅಭ್ಯಾಸ, ಆಸಕ್ತಿಯಿಂದ ಸಾಧ್ಯವಿದೆ. ಕನ್ನಡ ಉಳಿಸುವ ಕೆಲಸ ಜನರೇ ಕೈಗೆತ್ತಿಕೊಳ್ಳಬೇಕು ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕನ್ನಡಕ್ಕೆ ಸಮಸ್ಯೆ, ಸವಾಲುಗಳಿವೆ ಹೊರತು ಸಾವಿಲ್ಲ: ನಾಡೋಜ ಡಾ ಬರಗೂರು ರಾಮಚಂದ್ರಪ್ಪ
ಕಾರ್ಯಕ್ರಮದಲ್ಲಿ ಡಾ, ಸಂಧ್ಯಾರೆಡ್ಡಿ, ಪ್ರೊ. ಎ.ಬಿ. ರಾಮಚಂದ್ರಪ್ಪ, ಡಾ. ವಿ.ಪಿ. ನಿರಂಜನಾರಾಧ್ಯ, ಡಾ. ರವಿಕುಮಾರ್ ನೀಹ, ಟಿ. ತಿಮೇಶ್, ಟಿ. ಗುರುರಾಜ್, ದ್ರಾಕ್ಷಾಯಣಿ ಹುಡೇದ್, ವಿರೂಪಣ್ಣ ಕಲ್ಲೂರ, ಯಾಕೂಬ್ ಖಾದರ್ ಗುಲ್ವಾಡಿ ಸೇರಿದಂತೆ ಇನ್ನಿತರರು ಇದ್ದರು.





