ಕಳೆದ ಏಪ್ರಿಲ್ 21ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಜಸ್ಥಾನದಲ್ಲಿ ತಮ್ಮ ಚುನಾವಣಾ ಭಾಷಣದಲ್ಲಿ ಸುಳ್ಳು ಸುದ್ದಿ ಹಾಗೂ ದ್ವೇಷವನ್ನು ಹರಡಿದ್ದಾರೆ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕೋರಿ ನಾಗರಿಕ ಸಂಸ್ಥೆಗಳು ಹಾಗೂ ಕಾಳಜಿಯುಳ್ಳ ನಾಗರಿಕರು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ರವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ದೂರಿನಲ್ಲಿ ಮೋದಿಯವರ ವಿರುದ್ಧ ತುರ್ತು ಮತ್ತು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಮನೋಜ್ ಕುಮಾರ್ ಮೀನಾ ರವರನ್ನು ಭೇಟಿಯಾದ ತಂಡವು, ಮೋದಿಯ ವಿರುದ್ಧ ನೀಡಿದ ದೂರಿನ ಪ್ರತಿ , ಸಂವಿಧಾನ ಪೀಠಿಕೆ ಮತ್ತು ನೀತಿ ಸಂಹಿತೆ ನಿಯಮಗಳ ಪ್ರತಿಯನ್ನು ನೀಡಿತು.
ಭಾರತೀಯ ಚುನಾವಣಾ ಆಯೋಗವು, ಕಾನೂನಿನ ಪ್ರಕಾರ ಮೋದಿಯವರು ನೀಡಿದ ಭಾಷಣದ ವಿರುದ್ಧ ಕ್ರಮ ಕೈಗೊಂಡು, ಅವರನ್ನು ಅನರ್ಹಗೊಳಿಸಬೇಕು ಮತ್ತು ಅವರನ್ನು ಪ್ರಚಾರ ಮಾಡುವುದರಿಂದ ನಿಷೇಧಿಸಬೇಕೆಂದು ಒತ್ತಾಯಿಸಿತು. ದ್ವೇಷ ಭಾಷಣ ನೀಡುವುದರ ಮೂಲಕ ಸಮಾಜದ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡಿರುವುದಕ್ಕಾಗಿ ಅವರ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿತು.
ಹಿಂದೂ ಸಮಾಜದ ವೋಟುಗಳನ್ನು ಸಂಗ್ರಹಿಸಲು ಸುಳ್ಳು ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದರ ಜೊತೆಗೆ ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಹಬ್ಬಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Today, a delegation of around 20 activists and concerned citizens representing around 12 human rights orgs met the Chief Electoral Officer, Karnataka to file a complaint against @narendramodi for his speech in Rajasthan. https://t.co/SKEwMMZWDc pic.twitter.com/iMdwCAdTkq
— PUCL India (@PUCLindia) April 23, 2024
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾರವರು ಪ್ರತಿಕ್ರಿಯಿಸಿ, ಈ ಘಟನೆಯು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಹಾಗಾಗಿ, ದೂರನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ರವಾನಿಸುವುದಾಗಿ ತಿಳಿಸಿದರು.
ಇದನ್ನು ಓದಿದ್ದೀರಾ? ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿಎಂ ಸಿದ್ದರಾಮಯ್ಯ
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL), ಬಹುತ್ವ ಕರ್ನಾಟಕ, ಆಲ್ ಇಂಡಿಯಾ ಲಾಯೆರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ (AILAJ), ದ್ವೇಷ ಭಾಷಣದ ವಿರುದ್ಧ ಜನಾಂದೋಲನ, ಪೀಪಲ್ಸ್ ವಾಚ್, ನ್ಯಾಷನಲ್ ಫೆಡರೇಶನ್ ಫಾರ್ ಇಂಡಿಯನ್ ವಿಮೆನ್ (NFIW), ನ್ಯಾಷನಲ್ ಅಲೈಯನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ಸ್ (NAPM), ನ್ಯೂ ಟ್ರೇಡ್ ಯೂನಿಯನ್ ಇನಿಶಿಯೇಟಿವ್ (NTUI), ಹ್ಯೂಮನ್ ರೈಟ್ಸ್ ಫೋರಮ್ (HRF), ಲಾ ಅಂಡ್ ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್, ಸೇವ್ ದಿ ನೇಷನ್, ತಮಿಳುನಾಡು ಪೊದುಮೇಡೈ, ಭಾರತ್ ಜೋಡೋ ಅಭಿಯಾನ್, ಮುಂಬೈ, ಸ್ಟೂಡೆಂಟ್ಸ್ ಫಾರ್ ಪೀಪಲ್ಸ್ ಡೆಮಾಕ್ರಸಿ, ಆಲ್ ಇಂಡಿಯಾ ಡೆಮಾಕ್ರೆಟಿಕ್ ವಿಮೆನ್ಸ್ ಅಸೋಸಿಯೇಷನ್ (AIDWA) ಸಂಘಟನೆಗಳು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.





