“ನಾಟಕಗಳಲ್ಲಿ ದಲಿತರು ಎಂದರೆ ಹಳೆಯ ಬಟ್ಟೆ ಧರಿಸಿರುತ್ತಾರೆ, ಕಪ್ಪಾಗಿರುತ್ತಾರೆ, ಯಾವಾಗಲೂ ಬಗ್ಗಿ ನಿಂತಿರುತ್ತಾರೆ, ಇಂಗ್ಲೀಷ್ ಮಾತನಾಡಲು ಬರಲ್ಲ ಎಂಬಂತೆ ಬಿಂಬಿಸಲಾಗುತ್ತದೆ. ಇದು ನಿಜವಾಗಿಯೂ ಅವರ ಗುರುತಾ? ಹಾಗಿದ್ದಾಗ ನಾವು ಬದಲು ಮಾಡಬೇಕಾಗಿರುವುದು ಏನು? ರಂಗದಲ್ಲಿ ದಲಿತರು ಎಂದರೆ ಹೀಗೆಯೇ ಎಂಬ ಭಂಗಿಗಳೆಲ್ಲವೂ ಬದಲಾಗಬೇಕಿದೆ. ಸಮಾಜ ಕಟ್ಟಿದ ಕೆಟ್ಟ ರಚನೆಯನ್ನೇ ನಾವು ಮುಂದುವರೆಸುತ್ತಿದ್ದೇವೆ” ಎಂದು ರಂಗಭೂಮಿ ನಿರ್ದೇಶಕ, ಬರಹಗಾರ, ಶಂಕರನಾಗ್ ರಂಗಭೂಮಿ ಪ್ರಶಸ್ತಿ ವಿಜೇತ ಲಕ್ಷ್ಮಣ್ ಕೆ ಪಿ ಹೇಳಿದರು.
ಭಾನುವಾರ ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ನಡೆದ ಸಮಾಜಮುಖಿ ಸಾಹಿತ್ಯ ಸಮ್ಮೇಳನದ ‘ರಂಗಭೂಮಿ – ಹೊಸ ರಂಗರೂಪದ ಹುಡುಕಾಟ ಅಲಕ್ಷಿತ ಅನುಭವ ಲೋಕ’ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, “ಪರಿಸರದ ವಿಚಾರದಲ್ಲಿ ನಾವು ನೋಡಿದಾಗ ಮರುರಚನೆ, ಮರುಬಳಕೆ ಉತ್ತಮ. ಅದು ಬೇಕೇ ಬೇಕು. ನಾವು ಪ್ಲಾಸ್ಟಿಕ್ ಮೊದಲಾದವುಗಳ ಮರುಬಳಕೆ ಮಾಡಬೇಕಾಗುತ್ತದೆ. ಆದರೆ ಸಾಂಸ್ಕೃತಿಕವಾಗಿ ಮರುಬಳಕೆ ಎಂಬುದು ಕಲೆಯ ಕೊಲೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ದಲಿತ ಸಾಹಿತಿಗಳು ಮಹಿಳಾ ಬರಹಗಾರರಿಗೆ ಬೆಂಬಲ ನೀಡುವುದು ಅಗತ್ಯ: ದು ಸರಸ್ವತಿ
“ಕನ್ನಡ ರಂಗಭೂಮಿಯಲ್ಲಿ ಪುರಾಣವನ್ನೇ ಹೇಳಲಾಗುತ್ತದೆ. ಮತ್ತೆ ಮತ್ತೆ ಪುರಾಣಗಳನ್ನು ಎತ್ತಿ ಪ್ರಸ್ತುತಪಡಿಸಲಾಗುತ್ತದೆ. ಕೊಳೆತ ವಸ್ತುಗಳನ್ನೇ ಒಳ್ಳೆಯ ವಸ್ತು ಎಂದು ಪ್ರಸ್ತುತಪಡಿಸಲಾಗುತ್ತಿದೆ. ಪುರಾಣದ ಬಗ್ಗೆಗಿನ ವ್ಯಾಮೋಹ ಬಿಡದಿದ್ದರೆ ಹೊಸ ರಂಗರೂಪಗಳು ರೂಪುಗೊಳ್ಳುವುದು ಬಹಳ ಕಷ್ಟ” ಎಂದು ಅಭಿಪ್ರಾಯಿಸಿದರು.
“ರಾಮನ ನೋವು, ಕರ್ಣನ ನೋವು ನನ್ನ ನೋವು ಅಂದುಕೊಂಡು ಈ ಸಮುದಾಯಗಳಿಗೆ ಸಾಕಾಗಿದೆ. ಇವರುಗಳ ನೋವು ನಮ್ಮ ನೋವುಗಳಲ್ಲ. ಸೀತೆಯ ಮೂಲಕ, ದ್ರೌಪದಿಯ ಮೂಲಕ ಹೆಣ್ಣನ್ನು ನೋಡಬೇಕಾಗಿಲ್ಲ. ನನ್ನ ಮೂಲಕನೇ ನಾನು ಹೆಣ್ಣು ಎಂಬುವುದಿರಬೇಕು” ಎಂದೂ ಹೇಳಿದರು.
ಈ ಗೋಷ್ಠಿಯಲ್ಲೇ ಮಾತನಾಡಿದ ರಂಗಕರ್ಮಿ, ನಾಟಕಕಾರ, ನಟ ಮಹಾದೇವ ಹಡಪದ, “ಬುದ್ಧ, ಬಸವಣ್ಣನ ನಂತರ ಹೊಸ ಜಗತ್ತನ್ನು ಜ್ಯೋತಿ ಬಾ ಫುಲೆ ಅವರು ನಮಗೆ ಹೊಸ ಜಗತ್ತನ್ನು ತೆರೆದು ತೋರಿಸಿದವರು. ಇದಾದ ಬಳಿಕ ಬಾಬಾ ಸಾಹೇಬರು ಹೊಸ ಜಗತ್ತನ್ನು ಇನ್ನೊಂದು ಹಂತಕ್ಕೆ ಕರೆದೊಯ್ದರು. ಅದಾದ ಬಳಿಕ ನಮ್ಮೊಳಗೆ ಅರಿವು ಎಂಬುದು ಬುದ್ಧ, ಬಸವಣ್ಣ, ಜ್ಯೋತಿ ಬಾ ಫುಲೆಯಿಂದ ಒಂದಾಗಿ ಶೈಕ್ಷಣಿಕವಾಗಿ ಬೇರೆ ತರಹದ ಅರಿವು ನಮ್ಮೊಳಗೆ ಬಂದಿದೆ” ಎಂದರು.
ಇದನ್ನು ಓದಿದ್ದೀರಾ? ಕೇಂದ್ರ ಸರ್ಕಾರ ಕೋಟ್ಯಂತರ ಜನ ಮಾತನಾಡುವ ಭಾಷೆಗಳನ್ನು ತುಳಿದು ಸಂಸ್ಕೃತವನ್ನು ಪೋಷಿಸುತ್ತಿದೆ: ಹಂಪನಾ
“ನಾವು ಮಾಡಿದ ಒಂದು ನಾಟಕದಲ್ಲಿ ಸಲಿಂಗರತಿಯೋರ್ವನ ಪಾತ್ರವಿದೆ. ಈ ನಾಟಕ ಮುಗಿದ ಬಳಿಕ ಒಂದೆರಡು ಮಂದಿ ಕಾದು ತಮ್ಮ ನೋವನ್ನು ಹಂಚಿಕೊಳ್ಳುತ್ತಿದ್ದರು. ಅವರ ನೋವುಗಳನ್ನು ತಿಳಿದಾಗ ಜೋಗತಿಯರ ಸ್ಥಿತಿಯ ಬಗ್ಗೆಯೂ ನನಗೆ ಆಲೋಚನೆ ಮೂಡಿತು. ಆಳವಾಗಿ ಅಧ್ಯಯನ ನಡೆಸಿದಾಗ ಜೋಗತಿಯರ ಸಮುದಾಯದಲ್ಲಿ ನಡೆದ ಮರ್ಯಾದೆ ಹತ್ಯೆಗಳ ಬಗ್ಗೆಯೂ ತಿಳಿಯಿತು” ಎಂದು ತಿಳಿಸಿದರು.
ಈ ಗೋಷ್ಠಿಯಲ್ಲಿ ಮಾತನಾಡಿದ ಕತೆಗಾರ, ನಾಟಕಗಾರ ಮಹಾಂತೇಶ ನವಲ್ಕಲ್, “ಇತಿಹಾಸವನ್ನು, ಪುರಾಣವನ್ನು ಮರುರಚನೆ ಮಾಡುವುದು ತಪ್ಪಲ್ಲ. ಆದರೆ ಅದನ್ನು ಮರುರಚನೆ ಮಾಡುವಾಗ ಎಚ್ಚರದಿಂದಿರಬೇಕು. ಇತಿಹಾಸರವನ್ನು ಪುನರ್ ಶೋಧನೆ ಮಾಡಿ ಮರುರಚನೆ ಮಾಡಬೇಕು, ಪರಾಮರ್ಶಿಸಬೇಕು. ಆದರೆ ಸದ್ಯ ಅದು ನಡೆಯುತ್ತಿಲ್ಲ” ಎಂದರು. ರಂಗಕರ್ಮಿ ಶ್ವೇತಾರಾಣಿ ಗೋಷ್ಠಿಯನ್ನು ಸಂಯೋಜಿಸಿದರು.





