ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಹಿಂದಿ ಹೇರಿಕೆಯನ್ನು ತಡೆಯಲು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ‘ಪಾಸ್ ವಿಥೌಟ್ ಹಿಂದಿ’ (Pass Without Hindi) ಕಾನೂನನ್ನು ತಕ್ಷಣ ಜಾರಿಗೆ ತರಬೇಕೆಂದು ಆಗ್ರಹಿಸಿ ಕನ್ನಡಪರ ಹೋರಾಟಗಾರರು ಸರ್ಕಾರಕ್ಕೆ ಕಟು ಎಚ್ಚರಿಕೆ ನೀಡಿದ್ದಾರೆ.
ದಶಕಗಳಿಂದ ನಡೆಯುತ್ತಿರುವ ಹಿಂದಿ ವಿರೋಧಿ ಹೋರಾಟದ ಭಾಗವಾಗಿ, ಶಾಲಾ ಹಂತದಲ್ಲಿ ಮೂರನೇ ಭಾಷೆಯಾಗಿ ಹಿಂದಿಯನ್ನು ಕಡ್ಡಾಯ ಗೊಳಿಸಿರುವುದನ್ನು ಸಂಘಟನೆಗಳು ವಿರೋಧಿಸಿವೆ. “ಹಿಂದಿ ನುಡಿಯು ಕನ್ನಡದ ಮಕ್ಕಳಿಗೆ ಅನವಶ್ಯಕ ಹೊರೆಯಾಗುತ್ತಿದೆ. ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇವಲ ಹಿಂದಿ ವಿಷಯದಲ್ಲಿ ಅನುತ್ತೀರ್ಣರಾಗಿ ತಮ್ಮ ಮುಂದಿನ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ,” ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಅವರನ್ನು ಭೇಟಿ ಮಾಡಿದ ನಿಯೋಗವು ಎಚ್ಚರಿಕೆ ಪತ್ರ ಸಲ್ಲಿಸಿತು. ಬಳಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿ ಮಾಡಲು ವಿಧಾನಸೌಧಕ್ಕೆ ತೆರಳಿದ ಸಂದರ್ಭದಲ್ಲಿ ಸಚಿವರು ಲಭ್ಯವಿಲ್ಲದ ಕಾರಣ, ಅವರ ಆಪ್ತ ವಲಯಕ್ಕೆ ಮನವಿ ಸಲ್ಲಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, “ಇನ್ನ ಎರಡೂ ಮೂರು ದಿನಗಳಲ್ಲಿ ಸಚಿವರ ಸಮ್ಮುಖದಲ್ಲಿ ತುರ್ತು ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು,” ಎಂದು ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ.


ಮಲ್ಲೇಶ್ವರಂನಲ್ಲಿರುವ ಶಾಲಾ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿಯ ನಿರ್ದೇಶಕರಿಗೆ ಕಳೆದ ವಾರವೇ ಎಚ್ಚರಿಕೆ ಪತ್ರ ನೀಡಿದ್ದರೂ, ಈವರೆಗೂ ಯಾವುದೇ ಲಿಖಿತ ಉತ್ತರ ದೊರೆಯದ ಬಗ್ಗೆ ಹಿಂದಿ ವಿರೋಧಿ ಕರ್ನಾಟಕ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಧಿಕಾರಿಗಳು ಇನ್ನೆರಡು ದಿನಗಳಲ್ಲಿ ಉತ್ತರಿಸುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ಹಲವೆಡೆ ಶುಕ್ರವಾರ, ಶನಿವಾರ ವಿದ್ಯುತ್ ವ್ಯತ್ಯಯ
ಒಂದು ವೇಳೆ ಈ ವರ್ಷ ‘ಪಾಸ್ ವಿಥೌಟ್ ಹಿಂದಿ’ ಕಾನೂನು ಜಾರಿಗೆ ಬರದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಂಘಟನೆಗಳು ಎಚ್ಚರಿಸಿವೆ.”ಮಾರ್ಚ್ 30ರಂದು ನಡೆಯಲಿರುವ ಹಿಂದಿ ಪರೀಕ್ಷೆಯ ಸಂದರ್ಭದಲ್ಲಿ ಹೋರಾಟಗಾರರು ಮತ್ತು ಸಾರ್ವಜನಿಕರು ಪರೀಕ್ಷಾ ಕೊಠಡಿಗಳಿಗೆ ನುಗ್ಗಿ ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕುವ ಮೂಲಕ ಪ್ರತಿಭಟಿಸಬೇಕಾಗುತ್ತದೆ,” ಎಂದು ಇಲಾಖೆಗೆ ನೇರ ಎಚ್ಚರಿಕೆ ನೀಡಲಾಗಿದೆ.
ಈ ಪ್ರತಿಭಟನೆಯಲ್ಲಿ ಅಭಿ ಒಕ್ಕಲಿಗ, ಜೈ ಶಂಕರ್, ಆನಂದ್ ಬುದ್ಧಿಸ್ಟ್, ಕನ್ನಡ ಪರ ಹೋರಾಟಗಾರರಾದ ಶಂಕರೇಗೌಡ, ಅಶ್ವಥ್, ಮಂಜು ಗಣಪತಿಪುರ, ಸಂವಿಧಾನ ಸೇನೆಯ ಡಾ. ಲೋಕೇಶ್ ಮೌರ್ಯ, ನರಸಿಂಹಮೂರ್ತಿ, ಸಿದ್ದರಾಮು, ವಕೀಲರಾದ ಚರಣ್ ಗೌಡ ಹಾಗೂ ಸಚಿನ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದರು.





