ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟವಾದ ಸುಮಾರು ಎಂಟು ದಿನಗಳ ನಂತರ ಇಂದು ಬೆಳಿಗ್ಗೆ (ಮಾರ್ಚ್ 9) ಹೆಚ್ಚಿನ ಭದ್ರತೆಯೊಂದಿಗೆ ಗ್ರಾಹಕರಿಗೆ ಮತ್ತೆ ತೆರೆದಿದೆ. ಈ ಸ್ಪೋಟದಿಂದಾಗಿ ಕನಿಷ್ಠ ಎಂಟು ಮಂದಿ ಗಾಯಗೊಂಡಿದ್ದರು.
ಮಾರ್ಚ್ 1 ರಂದು ಬೆಂಗಳೂರಿನ ವೈಟ್ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿತ್ತು. ಈಗ ಎಂಟು ದಿನದ ಬಳಿಕ ಮತ್ತೆ ತೆರೆಯಲಾಗಿದ್ದು, ಗ್ರಾಹಕರು ಔಟ್ಲೆಟ್ನ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.
ಕೆಫೆಯನ್ನು ತೆರೆಯುವ ಮೊದಲು, ಅದರ ಸಹ-ಸಂಸ್ಥಾಪಕ ರಾಘವೇಂದ್ರ ರಾವ್ ಮತ್ತು ಎಲ್ಲಾ ಸಿಬ್ಬಂದಿಗಳು ರಾಷ್ಟ್ರಗೀತೆಯನ್ನು ಹಾಡಿದ್ದಾರೆ. ಗ್ರಾಹಕರಿಗೆ ಸುರಕ್ಷಿತ ವಾತಾವರಣವನ್ನು ನೀಡುವ ನಿಟ್ಟಿನಲ್ಲಿ ಪ್ರಸ್ತುತ ಕೆಫೆಯನ್ನು ನವೀಕರಣಗೊಳಿಸಲಾಗಿದೆ.
“ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನಾವು ಎಲ್ಲಾ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಾವು ನಮ್ಮ ಭದ್ರತಾ ತಂಡವನ್ನು ಬಲಪಡಿಸುತ್ತಿದ್ದೇವೆ ಮತ್ತು ನಮ್ಮ ಭದ್ರತಾ ಸಿಬ್ಬಂದಿಗೆ ತರಬೇತಿ ನೀಡಲು ಮಾಜಿ ಸೈನಿಕರ ಸಮಿತಿಯನ್ನು ರಚಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ,” ಎಂದು ರಾಘವೇಂದ್ರ ರಾವ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
“ನಾವು ಎಲ್ಲಾ ಸಿಸಿಟಿವಿ ದೃಶ್ಯಗಳು ಮತ್ತು ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ್ದೇವೆ. ನಾವು ಅಧಿಕಾರಿಗೆ ಸಹಕಾರ ನೀಡುತ್ತೇವೆ. ಇಷ್ಟು ಬೇಗ ಕೆಫೆಯನ್ನು ಮತ್ತೆ ತೆರೆಯಲು ನಮಗೆ ಸಹಾಯ ಮಾಡಿದ್ದಕ್ಕಾಗಿ ನಾವು ಸರ್ಕಾರಕ್ಕೆ ಕೃತಜ್ಞರಾಗಿದ್ದೇವೆ,” ಎಂದು ಶುಕ್ರವಾರ ರಾಘವೇಂದ್ರ ರಾವ್ ಹೇಳಿದರು.
“ಎನ್ಐಎ ಶೀಘ್ರದಲ್ಲೇ ಅಪರಾಧಿಯನ್ನು ಪತ್ತೆ ಹಚ್ಚಲಿದೆ. ಕೆಫೆಯನ್ನು ಪುನಃ ತೆರೆಯುವ ಮೊದಲು ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಹೆಚ್ಚಿನ ಸಿಸಿಟಿವಿಗಳನ್ನು ಎಲ್ಲಿ ಸ್ಥಾಪಿಸಬೇಕು ಎಂಬುದರ ಕುರಿತು ಸರ್ಕಾರ ಮತ್ತು ಪೊಲೀಸರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ನಾವು ಆವರಣದಲ್ಲಿ ಭದ್ರತೆಗಾಗಿ ಗಾರ್ಡ್ ನೇಮಿಸುತ್ತೇವೆ,” ಎಂದು ಹೇಳಿದರು.
ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆಸಿರುವ ಬಾಂಬರ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನು ನೀಡಲಾಗುವುದು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬುಧವಾರ ಘೋಷಿಸಿದೆ. ಹಾಗೆಯೇ ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿ ಇಡಲಾಗುವುದು ಎಂದು ಸಂಸ್ಥೆ ಒತ್ತಿ ಹೇಳಿದೆ.





