ಪೂರ್ವ ಮುಂಗಾರು ಮಳೆ ಶುರುವಾದ ಬೆನ್ನಲ್ಲೇ ಈಗ ಬೆಂಗಳೂರಿನ ಜನ ವಸತಿ ಪ್ರದೇಶಗಳಲ್ಲಿ ಹಾವು ಗಳು ಕಾಣಿಸಿಕೊಳ್ಳುತ್ತಿದ್ದು, ನಗರವಾಸಿಗಳಲ್ಲಿ ಆತಂಕ ಉಂಟುಮಾಡಿದೆ.
ರಾಜಕಾಲುವೆ, ಪಾಳು ಪ್ರದೇಶ ಮತ್ತು ಕೆರೆದಂಡೆ ಬಳಿಯಿರುವ ಜನವಸತಿ ಪ್ರದೇಶಗಳಲ್ಲಿ ಮನೆ ಹೊರಗೆ ಬಿಟ್ಟ ಶೂ, ಮೋಟಾರು ಬೈಕ್, ಕಾರ್ ಸೀಟ್, ಹೂವಿನ ಕುಂಡಗಳು ಸೇರಿ ಬೆಚ್ಚನೆ ಜಾಗದಲ್ಲಿ ಹಾವುಗಳು ಮಲಗುತ್ತಿದ್ದು, ಸಾರ್ವಜನಿಕರಲ್ಲಿ ಭಯ ತಂದಿಟ್ಟಿದೆ.
ಯಲಹಂಕ, ಕಲ್ಯಾಣ ನಗರ, ಎಚ್.ಬಿ.ಆರ್. ಲೇಔಟ್, ಮಾರತ್ತಹಳ್ಳಿ, ನಾಗರಭಾವಿ, ಬನಶಂಕರಿ ಸೇರಿ ಕೆಲವು ಪ್ರದೇಶಗಳಲ್ಲಿ ವಿವಿಧ ಜಾತಿಯ ಹಾವುಗಳು ಪತ್ತೆ ಆಗಿದ್ದು, ಬಿಬಿಎಂಪಿ ಸಹಾಯವಾಣಿಗೆ ನಿತ್ಯವೂ ಹತ್ತಾರು ಕರೆಗಳು ಬರುತ್ತಿವೆ.
ಮುಂಗಾರಿನಲ್ಲಿ ಹಾವು ಮೊಟ್ಟೆಯೊಡೆ ಯುವ ಕಾಲವಾಗಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಮೇ ಅಂತ್ಯದಿಂದ ಅಕ್ಟೋಬರ್ವರೆಗೂ ಮರಿ ಹಾವುಗಳ ಸಂಖ್ಯೆಯಲ್ಲಿ ಯಾವಾಗಲೂ ಹೆಚ್ಚಳ ಕಂಡುಬರುತ್ತದೆ ಎಂಬುದು ಉರಗ ರಕ್ಷಕರ ಮಾತಾಗಿದೆ
ನಾಗರಹಾವು ಹತ್ತರಿಂದ ಇಪ್ಪತ್ತರ ಒಳಗಡೆ ಮೊಟ್ಟೆ ಹಾಕುತ್ತದೆ. ಮೊಟ್ಟಯಿಟ್ಟು 15 ದಿವಸ ರಕ್ಷಣೆ ಮಾಡುತ್ತದೆ. ಈಗ ಮಳೆ ಬೀಳುತ್ತಿದ್ದು ವಾತಾವರಣದಲ್ಲಿ ಪದೇ ಪದೆ ಬದಲಾವಣೆ ಆಗುತ್ತಲೇ ಇರುತ್ತದೆ. ಈ ಹಿನ್ನೆಲೆ ಯಲ್ಲಿ ಬಿಸಿಲು ಹೆಚ್ಚು ಬೀಳು ವ ಪ್ರದೇಶಗಳಲ್ಲಿ ಹೆಚ್ಚಾಗಿ ಹಾವುಗಳು ಕಂಡು ಬರುತ್ತದೆ.
ಈ ಸುದ್ದಿ ಓದಿದ್ದೀರಾ? ಲೋಕಸಭಾ ಚುನಾವಣೆ | 6ನೇ ಹಂತದಲ್ಲಿ ಶೇ.59ರಷ್ಟು ಮತದಾನ: ಚುನಾವಣಾ ಆಯೋಗ
ಕಾರ್ ಗ್ಯಾರೇಜ್, ಶೂ ಇಡುವ ಪ್ರದೇಶಗಳು, ಹೂವಿನ ಕುಂಡ ಸೇರಿ ಬೆಚ್ಚಗಿನ ಸ್ಥಳ ಎಲ್ಲಿರುತ್ತದೆಯೋ ಅಲ್ಲಿ ಹಾವುಗಳು ಹೆಚ್ಚಾಗಿರುತ್ತವೆ. ಹಾವು ತನ್ನ ದೇಹವನ್ನು ಬೆಚ್ಚಗಿಸಲು ಯಾವಾಗಲೂ ಪ್ರಯತ್ನಿಸುತ್ತಲೇ ಇರುತ್ತವೆ. ಬಿಸಿಲು ಕಾಯಿಸುವುದರಿಂದ ಹಾವು ತಿಂದಿರುವ ಆಹಾರವೂ ದೇಹದಲ್ಲಿ ಜೀರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಬಾರಿಯೂ ಬಿಸಿಲನ್ನೇ ಹುಡುಕುತ್ತಿರುತ್ತದೆ.
ನಾಗರ ಹಾವು, ಕೆರೆ ಹಾವು ಬೆಳಗ್ಗಿನ ವೇಳೆ ಕಾಣಸಿಗುತ್ತವೆ. ಮಂಡಲ, ಇನ್ನಿತರ ಕೆಲ ಹಾವುಗಳು ರಾತ್ರಿ ವೇಳೆ ಕಂಡುಬರುತ್ತವೆ.
ಬಾಣಸವಾಡಿ ಬಳಿಯ ಕಲ್ಯಾಣ ನಗರದಲ್ಲಿ ದೇವಸ್ಥಾನವೊಂದರಲ್ಲಿ ಶೂ ಬಿಡುವ ಪ್ರದೇಶದಲ್ಲಿ ಹಾವು ಅವಿತುಕೊಂಡಿತ್ತು. ಕಳೆದ ಶುಕ್ರವಾರ ಇದೇ ಪ್ರದೇಶದ ಮನೆಯೊಂದರ ನೀರಿನ ಟ್ಯಾಂಕ್ನಲ್ಲಿ ಆಹಾರ ಅರಸಿ ಬಂದಿದ್ದ ಎರಡು ಹಾವುಗಳು ಬಿದ್ದಿದ್ದವು. ರವೀಂದ್ರ ಕಲಾಕ್ಷೇತ್ರದಲ್ಲಿ ಕೂಡ ಇತ್ತೀಗಷ್ಟೇ ದ್ವಿಚಕ್ರ ವಾಹನದ ಚಕ್ರದಲ್ಲಿ ಸಿಲುಕಿಕೊಂಡ ಹಾವು ಒದ್ದಾಡುತ್ತಿತ್ತು. ಅದನ್ನು ರಕ್ಷಣೆ ಮಾಡಲಾಗಿದೆ.
ರಿಚ್ಮಂಡ್ ರಸ್ತೆಯ ಫ್ಲೈ ಓವರ್ ಸಮೀಪದ ನಿವಾಸವೊಂದರಲ್ಲಿ ಕಾರ್ ಒಳಗಿನ ಸೀಟಿನಲ್ಲಿ ನಾಗರ ಹಾವು ಅವಿತುಕೊಂಡಿತ್ತು. ನಾಗರಭಾವಿ, ಬಾಣಸವಾಡಿಯ ಎಚ್ಬಿಆರ್ ಲೇಔಟ್ ಮನೆಗಳ ಹೂಕುಂಡಗಳಲ್ಲಿ ಹಾವುಗಳು ಅವಿತಿದ್ದವು. ಅವುಗಳನ್ನು ಕೂಡ ಬಿಬಿಎಂಪಿ ಸಿಬ್ಬಂದಿ ರಕ್ಷಿಸಿದ್ದಾರೆ.
ಬಿಬಿಎಂಪಿ ನಿರ್ದೇಶನ
ಮನೆ ಅಕ್ಕ-ಪಕ್ಕ ಕಸ ಇಲ್ಲದಂತೆ ನೋಡಿಕೊಳ್ಳಿ ಅಸಮರ್ಪಕ ಕಸ ವಿಲೇವಾರಿ ಪ್ರದೇಶಗಳಲ್ಲಿ ಹಾವುಗಳು ವಾಸವಾಗಲಿವೆ, ಏಕೆಂದರೆ ಕಸವು ಇಲಿಗಳನ್ನು ಸೆಳೆಯುತ್ತದೆ. ತರುವಾಯ ಇಲಿಗಳ ಭೇಟೆಗಾಗಿ ಹಾವು ಪ್ರವೇಶ ಮಾಡಲಿವೆ. ತ್ಯಾಜ್ಯದಿಂದ ಕೂಡಿದ ಖಾಲಿ ನಿವೇಶನಗಳು ಹಾವುಗಳ ಸಂತಾನೋತ್ಪತ್ತಿ ತಾಣಗಳಾಗುವ ಮೂಲಕ ಸಮಸ್ಯೆ ಹೆಚ್ಚಾಗುತ್ತವೆ.
ಮೊಟ್ಟೆಗಳು ಹೊರಬಂದಂತೆ, ಮರಿ ಹಾವುಗಳು ತಮ್ಮ ಸ್ವತಂತ್ರ ಜೀವನ ಪ್ರಾರಂಭಿಸುತ್ತವೆ. ಆಗಾಗ್ಗೆ ಆಶ್ರಯ, ಆಹಾರ ಹುಡುಕುತ್ತವೆ. ಪ್ರವಾಹ, ಭಾರೀ ಮಳೆಯಲ್ಲಿ ಹಾವಿನ ಮರಿಗಳು ತೇಲಿಬರುವ ಸಾಧ್ಯತೆಯಿರುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
ಮನೆಗಳು, ಉದ್ಯಾನಗಳು ಮತ್ತು ಹೊರಗೆ ಇಟ್ಟಿರುವ ಶೂಗಳನ್ನು ಹಾಕುವಾಗ ಎಚ್ಚರಿಕೆಯಿಂದ ಇರಬೇಕಾಗಿದೆ. ಗೋಡೆಗಳು , ಬಾಗಿಲುಗಳು ಮತ್ತು ಕಿಟಕಿ ರಂಧ್ರಗಳು, ಬಿರುಕುಗಳನ್ನು ಪರೀಕ್ಷಿಸಿ ಸಂಪೂರ್ಣ ಮುಚ್ಚಿ. ಒಂದು ವೇಳೆ ಹಾವು ಕಂಡುಬಂದರೆ ಭಯಗೊಳ್ಳದೆ ಹಿಂದೆ ಸರಿದು ತಕ್ಷಣ ಬಿಬಿಎಂಪಿ ನಿಯಂತ್ರಣ ಕೊಠಡಿ ಅಥವಾ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಪಾಲಿಕೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.






