ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದವರೇ ಯುಪಿಎ ಸರ್ಕಾರ. ಇಂತಹ ಮಹತ್ವದ ಕಾಯ್ದೆಯನ್ನು ಶಿಕ್ಷಣ ಸಚಿವರು ಸಂಪೂರ್ಣವಾಗಿ ಹಳ್ಳಹಿಡಿಸಲು ಹೊರಟಿದ್ದಾರೆ. ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ತಿರಸ್ಕರಿಸಿದ್ದೇವೆ ಎಂದು ಅದನ್ನೇ ಜಾರಿ ಮಾಡುತ್ತಿದೆ ಎಂದು ಪಿ ನಿರಂಜನಾರಾಧ್ಯ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ನಗರದ ಗಾಂಧಿಭವನದ ಮಹದೇವ ದೇಸಾಯಿ ಸಭಾಂಗದಲ್ಲಿ ಎಐಡಿಎಸ್ಒ ಸಂಘಟನೆ ಹಮ್ಮಿಕೊಂಡಿದ್ದ ನಮ್ಮೂರ ಶಾಲೆ ಉಳಿಸಲು ಪೋಷಕರು – ವಿದ್ಯಾರ್ಥಿಗಳ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, “ಬಹುತ್ವಕ್ಕೆ ವಿರುದ್ದವಾಗಿ ಒಂದು ಜನಾಂಗವನ್ನು ವಿರೋಧಿಗಳು ಎಂದು ಬಿಂಬಿಸಿ ರಾಷ್ಟ್ರೀಯವಾದವನ್ನು ಹೆಚ್ಚು ಪ್ರತಿಪಾದನೆ ಮಾಡುವವರು ಮೊದಲು ಶಿಕ್ಷಣವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಬಯಸುತ್ತಾರೆ. ಶಿಕ್ಷಣವನ್ನು ಎಲ್ಲರಿಗೂ ಒದಗಿಸುವ ಕೆಲಸವನ್ನು ವ್ಯವಸ್ತಿತವಗಾಗಿ ನಿರಾಕರಣೆ ಮಾಡುತ್ತಾ ಬರಲಾಗಿದೆ” ಎಂದು ದೂರಿದರು.
ಇದನ್ನು ಓದಿದ್ದೀರಾ? ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ: ಶಾಲೆಗಳಲ್ಲಿ ಹಿಂದಿ 3ನೇ ಕಡ್ಡಾಯ ಭಾಷೆ
“ಮನುಸ್ಮೃತಿಯು ಶಿಕ್ಷಣವನ್ನು ನಿರಾಕರಣೆ ಮಾಡುವ ಮೂಲಕ ಜನರನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ಹೇಳುತ್ತದೆ. ಕೇಂದ್ರ ಸರ್ಕಾರ 2014ರಲ್ಲಿಯೇ ಹೊಸ ಶಿಕ್ಷಣ ನೀತಿ ಮಾಡುತ್ತೇವೆ ಎಂದರು. ಹೊಸ ಶಿಕ್ಷಣ ನೀತಿಯಲ್ಲಿ ಕೇಂದ್ರ ಸರ್ಕಾರ ಯಾವುದೇ ರೀತಿಯಲ್ಲೂ ಶಿಕ್ಷಣವನ್ನು, ಸಂವಿಧಾನದ ಹಕ್ಕು ಎಂದು ಗುರುತಿಸಿಲ್ಲ” ಎಂದು ಆರೋಪಿಸಿದರು.
“ಈ ಹಿಂದೆ 2022ರಲ್ಲಿ 1300 ಶಾಲೆಗಳನ್ನು ಮುಚ್ಚಲು ಹೊರಟಾಗ ವಿರೋಧ ಮಾಡಿದ ಕಾಂಗ್ರೆಸ್ ಈಗ 25683 ಶಾಲೆಗಳನ್ನು ಮುಚ್ಚುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ನು ಜಾರಿಗೆ ತಂದವರೇ ಯುಪಿಎ ಸರ್ಕಾರ. ಇಂತಹ ಮಹತ್ವದ ಕಾಯ್ದೆಯನ್ನು ಶಿಕ್ಷಣ ಸಚಿವರು ಸಂಪೂರ್ಣವಾಗಿ ಹಳ್ಳಹಿಡಿಸಲು ಹೊರಟಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಿರಸ್ಕರಿಸಿದ್ದೇವೆ ಎಂದು ಅದನ್ನೇ ಜಾರಿ ಮಾಡುತ್ತಿದ್ದಾರೆ. ಕೆಪಿಎಸ್ ಮತ್ತು ಮ್ಯಾಗ್ನೆಟ್ ಶಾಲೆಗಳು ಸಂವಿಧಾನ ವಿರೋಧಿ” ಎಂದರು.

ಲೇಖಕಿ, ಸಂಶೋಧಕಿ ಮತ್ತು ಶಿಕ್ಷಣ ತಜ್ಞೆ ಸಬಿಹಾ ಭೂಮಿಗೌಡ ಮಾತನಾಡಿ, “ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವಾಗ ಉಂಟಾಗುವ ಅಪಾಯಗಳ ಬಗ್ಗೆ ಚರ್ಚಿಸಬೇಕಿದೆ. ಈ ಬಗ್ಗೆ ಒಂದು ಸ್ಪಷ್ಟತೆ ಇಲ್ಲದೆ ಮುಂದುವರೆಯುವುದು ಅಪಾಯ. ಆದೇಶಗಳನ್ನು ಮುಗುಮ್ಮಾಗಿ ಇಟ್ಟು ಹೊರಡಿಸುತ್ತಿರುವುದು ಅತಂಕಕಾರಿ. ಶಾಲೆಯನ್ನು ಯಾವುದೇ ಕಾರಣಕ್ಕೂ ಲಾಭದ ದೃಷ್ಟಿಯಿಂದ ನೋಡಬಾರದು” ಎಂದು ಹೇಳಿದರು.
“ಒಂದು ಮನೆಯಿಂದ ಶಾಲೆಗೆ ಇರುವ ಅಂತರವೇನು? ಯಾವ ಬಗ್ಗೆಯೂ ಪೂರ್ವಸಿದ್ದತೆಗಳನ್ನು ಸರ್ಕಾರ ಮಾಡುತ್ತಿಲ್ಲ. ಖಾಸಗಿ ಶಿಕ್ಷಣ ವ್ಯಸ್ಥೆಯ ಪರವಾಗಿ ಇರುವಂತಹ ನೀತಿಗಳನ್ನು ಸರ್ಕಾರ ಮಾಡುತ್ತಿದೆ. ಶಾಲೆಯನ್ನು ಯಾವುದೇ ಕಾರಣಕ್ಕೂ ಲಾಭದ ದೃಷ್ಟಿಯಿಂದ ನೋಡಬಾರದು. ಒಂದು ಶಾಲೆಯಿಂದ ಮನೆಗೆ ಇರುವ ಅಂತರವೇನು? ಆ ಶಾಲೆಗೆ ಹೋಗಬೇಕಾದರೆ ಹೇಗೆ ಹೋಗಬೇಕು. ಶಾಲೆಗಳನ್ನು ಉಳಿಸುವುದೆಂದರೆ ಕೇವಲ ಭೌತಿಕವಾಗಿ ಉಳಿಸುವುದಲ್ಲ, ಆರ್ಟಿಇ ಹೇಳಿದ ಎಲ್ಲಾ ಅಂಶಗಳನ್ನು ಇಟ್ಟುಕೊಂಡು ಮೂಲಭೂತ ಸೌಕರ್ಯಗಳನ್ನು ಇಟ್ಟುಕೊಂಡು ಉಳಿಸಬೇಕಿದೆ. ಭವಿಷ್ಯದ ಬಗ್ಗೆ ಭರವಸೆ ಬರುವ ಹಾಗೆ ನೀವೆಲ್ಲ ಕೆಲಸ ಮಾಡುತ್ತಿದ್ದೀರಿ ನಿಮಗೆ ಅಭಿನಂದನೆಗಳು” ಎಂದರು.
ಇದನ್ನು ಓದಿದ್ದೀರಾ? ರಾಜ್ಯ ಶಿಕ್ಷಣ ನೀತಿ ಆಯೋಗದಿಂದ ವರದಿ ಸಲ್ಲಿಕೆ, ದ್ವಿಭಾಷಾ ನೀತಿ ಅನುಷ್ಠಾನ ಸೇರಿ ಹಲವು ಶಿಫಾರಸು
ದಲಿತ ಸಂಘರ್ಷ ಸಮಿತಿಯ ಗುರುಪ್ರಸಾದ್ ಕೆರೆಗೋಡು ಮಾತಾನಾಡಿ, “ನಾವು ಯಾವುದೇ ಶಾಲೆಯನ್ನು ಮುಚ್ಚಲ್ಲ ಎನ್ನುತ್ತಿದ್ದಾರೆ. ಇದರ ಬಗ್ಗೆ ಯಾರಾದರೂ ಮಾತಾಡಿದರೆ ಅವರನ್ನು ತಲೆಹರಟೆಗಳು ಅನ್ನೋದಾದರೆ ಅವರು ಯಾರು, ಅವರು ಎಲ್ಲಿ ಇರಬೇಕಾದವರು. ಮಂತ್ರಿ ಆಗೋದಕ್ಕೆ ಲಾಯಕ್ಕಿದ್ದಾರ? ಈ ದೇಶ ಉಳಿದಿರುವುದು ಸರ್ಕಾರಿ ಶಾಲೆಗಳಿಂದ. ನಮ್ಮ ಶಿಕ್ಷಣ ಮಂತ್ರಿ ಹೀಗೆ ಮಾತನಾಡುತ್ತಾರೆ, ಇನ್ನೊಂದೆಡೆ ವಿಶ್ವಗುರು ಮೆಕಾಲೆ ಶಿಕ್ಷಣವನ್ನು ದೂರುತ್ತಾರೆ” ಎಂದು ಹೇಳಿದರು.

“21ನೇ ಶತಮಾನದಲ್ಲಿ ಪ್ರಭುತ್ವಗಳು ನಡೆಸಬಹುದಾದ ದೊಡ್ಡ ಹಿಂಸೆ ಅಂದರೆ ಅದು ಶಾಲೆಗಳೇ ಇಲ್ಲದ ಊರುಗಳನ್ನು ನಿರ್ಮಿಸುವುದು. ಹಳ್ಳಿಗಳಲ್ಲಿ ಒಂದು ಮಟ್ಟಿಗಾದರೂ ಆಧುನಿಕತೆ ಬಂದಿದೆ ಎಂದರೆ ಅದು ಸರ್ಕಾರಿ ಶಾಲೆಗಳಿಂದ. ಸರ್ಕಾರಿ ಶಾಲೆಗಳು ಕೇವಲ ಶಾಲೆಗಳು ಮಾತ್ರ ಅಲ್ಲ ಅವು ಸಾಂಸ್ಕೃತಿಕ ಕೇಂದ್ರಗಳು ಸಹ ಆಗಿವೆ” ಎಂದರು.
ವೇದಿಕೆಯಲ್ಲಿ ಎಐಡಿಎಸ್ಒನ ಕೇಂದ್ರ ಕೌನ್ಸಿಲ್ ಜಂಟಿ ಕಾರ್ಯದರ್ಶಿ ಅಲೀನ್ ಎಸ್, ಪ್ರೊ.ಎಸ್ ಜಿ ಸಿದ್ದರಾಮಯ್ಯ, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ವಿ ಎನ್ ರಾಜಶೇಖರ್, ನಿವೃತ್ತ ಅಡ್ವೋಕೇಟ್ ಜನರಲ್ ರವಿವರ್ಮಕುಮಾರ್, ಎಐಡಿಎಸ್ಓನ ರಾಜ್ಯಾಧ್ಯಕ್ಷೆ ಅಶ್ವಿನಿ ಕೆ ಎಸ್ ಹಾಗೂ ರಾಜ್ಯ ಸಮಿತಿ ಸದಸ್ಯರು, ಪೋಷಕರು, ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.





