ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಲು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಯಾವುದೇ ಕಾರಣಕ್ಕೂ ಮತ್ತೆ ಸಮಯ ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಈ ಆದೇಶ ನೀಡಿದೆ. ಹಾಗೆಯೇ ಫೆಬ್ರವರಿ 20 ರೊಳಗೆ ಅಂತಿಮ ವಾರ್ಡ್ವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಇದನ್ನು ಓದಿದ್ದೀರಾ? ಜಿಬಿಎ ಚುನಾವಣೆ | ಸೋಮವಾರದಿಂದ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು: ಡಿ.ಕೆ. ಶಿವಕುಮಾರ್
ಇನ್ನು ರಾಜ್ಯ ಸರ್ಕಾರದ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಜರಾಗಿದ್ದು, ವಾರ್ಡ್ವಾರು ಮೀಸಲಾತಿ ಪಟ್ಟಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ವೇಳೆ ಸುಪ್ರೀಂ ಕೋರ್ಟ್ ಒಂದು ತಿಂಗಳ ಅವಕಾಶ ನೀಡಿದ್ದು, ಮುಂದೆ ವಿಳಂಬವಾಗಬಾರದು ಎಂದು ಹೇಳಿದೆ.
ಇನ್ನು ಚುನಾವಣಾ ಆಯೋಗವು ವಿವರವಾದ ಮಾರ್ಗಸೂಚಿಯನ್ನು ಸಲ್ಲಿಸಿದೆ. ಮಾರ್ಚ್ 16ರೊಳಗೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಮತ್ತು ಮೇ ಅಂತ್ಯದ ವೇಳೆಗೆ ಮತದಾನ ನಡೆಸಲಾಗುವುದು. ಪರೀಕ್ಷೆಗಳು ಮುಗಿದ ನಂತರ ಶಾಲಾ ಮತ್ತು ಕಾಲೇಜು ಕಟ್ಟಡಗಳನ್ನು ಮತದಾನ ಕೇಂದ್ರಗಳಾಗಿ ಮಾಡಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಇತ್ತೀಚೆಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಹೊಸ ಐದು-ಕಾರ್ಪೊರೇಷನ್ ಆಡಳಿತ ರಚನೆಯ ಅಡಿಯಲ್ಲಿ ಎಲ್ಲಾ 369 ವಾರ್ಡ್ಗಳಿಗೆ ಕರಡು ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬೆಂಗಳೂರು ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಕೇಂದ್ರ ನಿಗಮಗಳನ್ನು ಒಳಗೊಂಡಂತೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಚುನಾವಣಾ ಪ್ರಕ್ರಿಯೆಯನ್ನು ಔಪಚಾರಿಕವಾಗಿ ಪ್ರಾರಂಭಿಸಿದೆ.
ಈ ಹಿಂದೆ ಇದ್ದ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) 2015ರ ಆಗಸ್ಟ್ 22ರಂದು ಕೊನೆಯದಾಗಿ ನಡೆದಿದ್ದು ಆಗ 198 ವಾರ್ಡ್ಗಳಿಗೆ ಮತದಾನ ನಡೆದಿತ್ತು. ಈ ಕೌನ್ಸಿಲ್ನ ಅವಧಿಯು 2020ರ ಸೆಪ್ಟೆಂಬರ್ನಲ್ಲಿಯೇ ಕೊನೆಗೊಂಡಿದೆ. ಅಂದಿನಿಂದ ನಗರವು ಚುನಾಯಿತ ಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.





