“ಈ ವರ್ಷದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಜಕೀಯ ಪ್ರವೇಶ ಮಾಡಿದೆ. ಯಾಕೆಂದರೆ ಈ ಬಾರಿ ಪ್ಯಾಲೆಸ್ತೀನಿನ ಸಿನಿಮಾಗಳ ಪ್ರದರ್ಶನ ನಡೆಯುತ್ತಿಲ್ಲ. ಇದುವರೆಗೆ ಅದ್ಭುತವಾಗಿ ನಡೆಯುತ್ತಿದ್ದ ಉತ್ಸವದಲ್ಲಿ ಕೇಂದ್ರ ಸರ್ಕಾರ ಪ್ಯಾಲೆಸ್ತೀನ್ನ ಸಿನಿಮಾ ಪ್ರದರ್ಶನ ಮಾಡಲು ಬಿಡುತ್ತಿಲ್ಲ. ಇದರ ಪ್ರತಿರೋಧವಾಗಿ ಮುಖ್ಯಮಂತ್ರಿಗಳು, ಸರ್ಕಾರ ದೊಡ್ಡ ನಿಲುವು ತೆಗೆದುಕೊಳ್ಳಬೇಕು. ನಿಮ್ಮ ರಾಜಕೀಯ ಹುನ್ನಾರ ನಡೆಯಲ್ಲ ಎಂದು ಹೇಳಬೇಕು. ರಾಯಭಾರಿಯಾಗಿ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇನೆ ” ಎಂದು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರೈ ಹೇಳಿದರು.
ಗುರುವಾರ ಸಂಜೆ ವಿಧಾನಸೌಧದ ಮುಂದೆ ಆಯೋಜಿಸಿದ್ದ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
“ನಮ್ಮ ನಾಡಿನ, ಮಣ್ಣಿನ ಕಣ್ಣೀರಿನ ಸಂತಸದ ಕತೆಯಾದ ಹೃದಯದ ಹಣತೆ ಎಂಬ ಒಂದು ಪುಸ್ತಕ ಬೇರೆ ಭಾಷೆಗೆ ತರ್ಜುಮೆಯಾಗಿ ಬೂಕರ್ ಪ್ರಶಸ್ತಿ ಬಂದಾಗ ಸಂಭ್ರಮಿಸುವ ನಾವು, ನಮ್ಮ ನೆಲಕ್ಕೆ ಇನ್ನೊಬ್ಬರ ಕತೆಗಳನ್ನು ತರಲು ಆಗಲ್ಲ ಅಂದ್ರೆ ಹೇಗೆ ಒಪ್ಪಲು ಸಾಧ್ಯ?” ಎಂದು ಪ್ರಶ್ನಿಸಿದರು.
“ನಮ್ಮ ಕಷ್ಟಗಳಿಗೆ, ನಮ್ಮ ನೋವುಗಳುಗೆ ನಾವು ಸುರಿಸುವ ಕಣ್ಣೀರಿನ ಪರಿಚಯ ನಮ್ಮ ಕೆನ್ನೆಗಳಿಗೆ ಇದ್ದರೆ ಸಾಲದು, ಇನ್ನೊಬ್ಬರ ನೋವಿಗೂ ನಾವು ಅಳುವ ಕಣ್ಣೀರಿನ ಪರಿಚಯ ನಮ್ಮ ಕೆನ್ನೆಗಳಿಗೆ ಮಾಡಿದರೆ ಮಾತ್ರ ನಾವು ಮನುಷ್ಯರು. ಕೇರಳದಲ್ಲಿ ಸರ್ಕಾರವೇ ನಿಂತು ಪ್ಯಾಲೆಸ್ತೀನ್ ಚಲನಚಿತ್ರ ಪ್ರದರ್ಶನ ಮಾಡಿಸಿದೆ. ತಾವೂ ಗಟ್ಟಿ ನಿಲುವು ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದರು.
ಪ್ರತಿರೋಧವಾಗಿ ಪ್ಯಾಲೆಸ್ತೀನಿನ ನೋವಿನ ಪದ್ಯ ಓದಿದರು.
ಯುದ್ಧಗಳು ಕೊನೆಗೊಳ್ಳುತ್ತದೆ
ನಾಯಕರು ಕೈ ಕುಲುಕಿ ತೆರಳುತ್ತಾರೆ
ಆದರೆ, ಆ ವೃದ್ಧೆ ಮಗನಿಗಾಗಿ ಕಾಯುತ್ತಾಳೆ
ಆ ಮಹಿಳೆ ಅವಳ ಗಂಡನಿಗಾಗಿ ಕಾಯುತ್ತಾಳೆ
ಮಕ್ಕಳು ವೀರನಾದ ಅಪ್ಪನಿಗಾಗಿ ಕಾಯುತ್ತಾರೆ
ನನ್ನ ಮಾತೃಭೂಮಿಯನ್ನು ಮಾರಿದವರು ಯಾರೆಂದು ಗೊತ್ತಿಲ್ಲ
ಆದರೆ, ಬೆಲೆ ತೆತ್ತವರು ಯಾರೆಂದು ನನಗೆ ಗೊತ್ತು…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ “17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ”ವನ್ನು ಉದ್ಘಾಟಿಸಿದರು.
ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಬಹುಭಾಷಾ ನಟ ಪ್ರಕಾಶ್ ರಾಜ್, ಖ್ಯಾತ ನಟಿ ರುಕ್ಮಿಣಿ ವಸಂತ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಂ.ನರಸಿಂಹಲು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, ಚಲನಚಿತ್ರ ಅಕಾಡೆಮಿ ಸದಸ್ಯರಾದ ಚಿದಾನಂದ ಪಟೇಲ್ ಸೇರಿ ಹಲವರು ಉಪಸ್ಥಿತರಿದ್ದರು.
ಈ ವರ್ಷದ ಘೋಷವಾಕ್ಯ ಸ್ತ್ರೀ ಎಂದರೆ ಅಷ್ಟೇ ಸಾಕೇ! ಎಂಬುದಾಗಿದೆ. ಸುಮಾರು 70ದೇಶಗಳ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಇಂದಿನಿಂದ ಫೆ. 6ರವರೆಗೆ ಬೆಂಗಳೂರಿನ ಲುಲು ಮಾಲ್ನಲ್ಲಿ ಚಿತ್ರೋತ್ಸವ ನಡೆಯಲಿದೆ.






