ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಲಿಂಗದೊಡವೆ
ಮಜ್ಜನಕ್ಕೆರೆದು
ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಸಿತಾಳಕ್ಕಲ್ಲದೆ? ಪತ್ರೆ ಪುಷ್ಪದಲ್ಲಿ ಪೂಜಿಸಿ
ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಗಿಡುಗಳಿಗಲ್ಲದೆ? ಸುಯಿದಾನವನರ್ಪಿಸಿ
ಫಲವ ಬೇಡುವರಯ್ಯಾ,
ತಮಗೆಲ್ಲಿಯದೊ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ?
ಲಿಂಗದೊಡವೆಯ ಲಿಂಗಕ್ಕೆ ಕೊಟ್ಟು,
ಫಲವ ಬೇಡುವ
ಸರ್ವ ಅನ್ಯಾಯಿಗಳನೇನೆಂಬೆ ಗುಹೇಶ್ವರಾ!
ಪದಾರ್ಥ:
ಸಿತಾಳ = ಪವಿತ್ರ ಜಲ
ಸುಯಿದಾನ = ಶುದ್ಧ ಆಹಾರ, ನೈವೇದ್ಯ
ವಚನಾರ್ಥ:
ಅಭಿಷೇಕ, ಪೂಜೆ, ನೈವೇದ್ಯ ಇವು ದೇವರನ್ನು ಒಲಿಸಿಕೊಳ್ಳಲು ಜನರು ಅನುಸರಿಸುವ ಸಾತ್ವಿಕ ಮಾರ್ಗಗಳು. ಇದರ ಉದ್ದೇಶ ದೇವರಲ್ಲಿ ಫಲವನ್ನು ಬೇಡುವುದು ಅಂದರೆ ಸುಖ ಸಂತೋಷ ಪ್ರಾಪ್ತಿಗಾಗಿ ಪ್ರಾರ್ಥಿಸುವುದು. ಅಭಿಷೇಕ ಮಾಡುವಾಗ ಭಾವಿಯಿಂದ ಸ್ವಚ್ಛ ಶುದ್ಧ ನೀರನ್ನು ತಂದು ದೇವರ ವಿಗ್ರಹದ ಮೇಲೆರೆಯುವುದು. ಪೂಜೆ ಮಾಡುವಾಗ ಪತ್ರೆ ಪುಷ್ಪಗಳನ್ನು ಹೂಗಿಡಗಳಿಂದ ಬಿಡಿಸಿ ತಂದು ದೇವರ ವಿಗ್ರಹದ ಮೇಲೆ ಇಟ್ಟು ಸಿಂಗರಿಸುವುದು. ವಿವಿಧ ಧಾನ್ಯಗಳನ್ನು ಹಾಕಿ ಮಾಡಿದ ರುಚಿಕರ ಪದಾರ್ಥವನ್ನು ದೇವರ ಎದುರು ಇಟ್ಟು ನೈವೇದ್ಯ ಅರ್ಪಣೆ ಮಾಡುವುದು. ಭಾವಿಯಿಂದ ಸ್ವಚ್ಛ ಶುದ್ಧ ನೀರನ್ನು ತಂದು ಅಭಿಷೇಕ ಮಾಡಿದರೆ ಅದರ ಪುಣ್ಯದ ಪ್ರಥಮ ಫಲ ನೀರಿಗೆ ಸೇರಬೇಕು. ಅಭಿಷೇಕ ಮಾಡಿದವರಿಗಲ್ಲ. ಪತ್ರೆ ಪುಷ್ಪಗಳನ್ನು ತಂದು ಪೂಜಿಸಿದರೆ ಅದರ ಪುಣ್ಯದ ಪ್ರಥಮ ಫಲ ಪತ್ರೆ ಪುಷ್ಪಗಳ ಪಾಲಾಗಬೇಕು. ವಿವಿಧ ಧಾನ್ಯಗಳನ್ನು ಹಾಕಿ ಮಾಡಿದ ನೈವೇದ್ಯ ಅರ್ಪಣೆ ಮಾಡಿದರೆ ಅದರ ಪುಣ್ಯದ ಪ್ರಥಮ ಫಲ ದವಸ ಧಾನ್ಯಗಳಿಗೆ ದಕ್ಕಬೇಕು. ಮಜ್ಜನಕ್ಕೆರೆಯುವ ಜಲ, ಗಿಡದಲ್ಲಿ ಅರಳುವ ಪತ್ರೆ ಪುಷ್ಪಗಳು, ನೈವೇದ್ಯಕ್ಕೆ ಹಾಕುವ ಧಾನ್ಯಗಳು ಮನುಷ್ಯ ನಿರ್ಮಿತವಲ್ಲ.
ದೈವದತ್ತವಾದವುಗಳು. ಅವು ಲಿಂಗದೊಡವೆ. ಅಂತಹ ದೈವದತ್ತ ವಸ್ತುಗಳನ್ನು ದೈವಕ್ಕೇ ವಾಪಸ್ಸು ಕೊಟ್ಟು ಫಲವ ಬೇಡುವುದು ಸರ್ವತಾ ಅನ್ಯಾಯ.
ಪದಪ್ರಯೋಗಾರ್ಥ:
ಲಿಂಗ ಧರಿಸುವ ಒಡವೆಯೆ ಲಿಂಗದೊಡವೆ. ದೇವರು ಧರಿಸುವ ಒಡವೆ. ಅವು ಪ್ರಕೃತಿಯ ಪರಿಕರಗಳು. ಶುದ್ಧ ಜಲ, ಸುಂದರ ಪತ್ರೆ ಪುಷ್ಪಗಳು, ರುಚಿಕರ ಧಾನ್ಯಗಳು ಇವೆಲ್ಲಾ ಲಿಂಗದೊಡವೆ. ನಾವು ಚಿತ್ರಪಟಗಳಲ್ಲಿ ನೋಡುವ ದೇವರು ಧರಿಸಿರುವ ರತ್ನಖಚಿತ ಚಿನ್ನಾಭರಣಗಳು, ಕಿರೀಟ, ಜರತಾರಿ ವಸ್ತ್ರಗಳು ಒಡವೆಯಲ್ಲ. ಅದು ಕಲಾವಿದರ, ಶಿಲ್ಪಿಗಳ ಸುಂದರ ಕಲ್ಪನೆ ಮಾತ್ರ. ಲಿಂಗದೊಡವೆ ಎಂದು ಅಲ್ಲಮ ಕರೆಯುವ ಶುದ್ಧ ಜಲ, ಸುಂದರ ಪತ್ರೆ ಪುಷ್ಪಗಳು, ರುಚಿಕರ ಧಾನ್ಯಗಳನ್ನು ಲಿಂಗಕ್ಕೆ ಕೊಟ್ಟು ಫಲವನ್ನು ಬೇಡುವುದು ಸರ್ವ ಅನ್ಯಾಯ. “ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ” ಎಂಬಂತೆ. ಲಿಂಗದೊಡವೆಗಳನ್ನು ಲಿಂಗಕ್ಕೆ ಸಮರ್ಪಿಸಿದರೆ ನಾವು ನಮ್ಮಿಂದ ಲಿಂಗಕ್ಕೆ ಕೊಟ್ಟದ್ದಾದರೂ ಏನು ಎಂಬುದು ಅಲ್ಲಮನ ಪ್ರಶ್ನೆ. ಇದು ಮನುಷ್ಯನ ಸ್ವಾರ್ಥ, ಅನ್ಯಾಯ ಭಾವ. ಇಂತಹವರು ಸರ್ವ ಅನ್ಯಾಯಿಗಳು. ಲಿಂಗದೊಡವೆ ಯಾವುವು ಎಂದು ಅತ್ಯಂತ ನಿಖರವಾಗಿ ಹೇಳಿ ವಚನದಲ್ಲಿ ಪ್ರಸ್ತಾಪಿಸಿರುವುದು ಅನನ್ಯ ಪದಪ್ರಯೋಗ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.




